July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ, ಮೇ  9ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ.

ಪಿದಾಯಿ ಚಿತ್ರವು ಕೊಲ್ಕತ್ತ, ಸಿಮ್ಲಾ, ಜಾರ್ಖಂಡ್‌ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗುವುದರ ಜೊತೆಗೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ಹೀಗೆ ಎರಡೂ ವಿಭಾಗಗಳ‌ಲ್ಲಿ ಸ್ಪರ್ಧೆಯಲ್ಲಿದ್ದು ಅಂತಿಮವಾಗಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.


ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಹಾಮಾಯಿ ಪಾತ್ರಿಯಾಗಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವರವರು ಅಭಿನಯಿಸಿದ್ದಾರೆ. ಇವರ ಜೊತೆಗೆ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ದ್ರುವ, ನಿಹಾ, ಖುಷಿ ಡಿ.ಬಿ.ಸಿ. ಶೇಖರ್, ಅನಿತಾ ಹಾಗೂ ಚಂದ್ರಶೇಖರ್ ಮುಂತಾದವರು ಅಭಿನಯಿಸಿದ್ದಾರೆ. ಈ ಸಿನಿಮಾದ ಛಾಯಾಗ್ರಾಹಣವನ್ನು ಉಣ್ಣಿ ಮಾಡವೂರ್‌ರವರು ನಿಭಾಯಿಸಿದ್ದಾರೆ. ಎರಡು ಸಲ ರಾಷ್ಟ್ರ ಪ್ರಶಸ್ತಿ ವಿಜೇತರಾಗಿ ಅತೀಹೆಚ್ಚು ಸಿನಿಮಾ ಸಂಕಲನ ಮಾಡಿರುವ ಸುರೇಶ್ ಅರಸ್ ರವರು ಈ ಚಿತ್ರಕ್ಕೆ ಸಂಕಲನಕಾರರಾಗಿದ್ದಾರೆ. ಸಂಭಾಷಣೆಯನ್ನು ರಮೇಶ್‌ ಶೆಟ್ಟಿಗಾರ್‌ ಹಾಗೂ ಡಿ.ಬಿ.ಸಿ. ಶೇಖರ್‌ ಬರೆದಿದ್ದಾರೆ.  ಚಿತ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಹಾಗೂ ಮಂಜೇಶ್ವರದ ಗಡಿಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.


ಪದ್ಮಶ್ರೀ ಕೈತಪ್ರಮ್ ದಾಮೋದರನ್ ನಂಬೂದಿರಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸುಧೀರ್ ಅತ್ತಾವರ, ತುಳು ಅಕಾಡೆಮಿ ಪ್ರಶಸ್ತಿ ವಿಜೇತ ಕುಶಾಲಾಕ್ಷಿ ಕಣ್ವತೀರ್ಥರವರ ಸಾಹಿತ್ಯವಿದ್ದು ಅಜಯ್ ನಂಬೂದಿರಿಯವರು ಸಂಗೀತ ನೀಡಿದ್ದಾರೆ. ಪ್ರಸಿದ್ದ ಹಾಡುಗಾರರಾದ ಸಂಗೀತ ವಿದ್ಯಾನಿಧಿ ಡಾಕ್ಟರ್ ವಿದ್ಯಾಭೂಷಣ್ ಪ್ರಪ್ರಥಮವಾಗಿ ಸಿನಿಮಾದಲ್ಲಿ ಹಾಡಿದ್ದಾರೆ ಎಂಬುದು ಇನ್ನೊಂದು ವಿಶೇಷತೆ.  ಜೊತೆಗೆ ಹಿನ್ನಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮುಂತಾದವರು ಕಂಠದಾನ ಮಾಡಿದ್ದಾರೆ. ಹಿನ್ನಲೆ ಸಂಗೀತವನ್ನು ಕೇರಳ ರಾಜ್ಯ ಪ್ರಶಸ್ತಿ ವಿಜೇತ ಸಂಗೀತಕಾರರಾದ ದೀಪಾಂಕುರನ್ ವಿಶೇಷ ಹಿನ್ನೆಲೆಯ ಸಂಗೀತವನ್ನು ನೀಡಿದ್ದಾರೆ. ಚಿತ್ರದ ಕಲಾನಿರ್ದೇಶಕರಾಗಿ ರಾಜೇಶ್ ಬಂದ್ಯೋಡು, ವಸ್ತ್ರ ವಿನ್ಯಾಸಕಾರರಾಗಿ ಮೀರಾ ಸಂತೋಷ್, ಮೇಕಪ್ ಮ್ಯಾನ್‌ ಆಗಿ ಬಿನೋಯ್ ಕೊಲ್ಲಮ್, ಮುಖ್ಯ ಸಹನಿರ್ದೇಶಕರಾಗಿ ವಿಘ್ನೇಶ್ ಕುಲಾಲ್, ಸಹ ನಿರ್ದೇಶಕರಾಗಿ ಗಿರೀಶ್ ಆಚಾರ್ ಸುಳ್ಯ, ಪ್ರದೀಪ್ ರಾವ್, ವಿಶ್ವ ಮಂಗಲ್ಪಾಡಿ, ತಂಡದ ಮ್ಯಾನೇಜರ್ ಆಗಿ ರವಿ ವರ್ಕಾಡಿ ಹಾಗೂ ಸ್ಥಿರ ಛಾಯಾಗ್ರಾಹಕರಾಗಿ ದೀಪಕ್‌ ಉಪ್ಪಳ ನಿರ್ವಹಿಸಿದ್ದಾರೆ.

ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ. ಸಂದೀಪ್ ಬಲ್ಲಾಳ್ ಸಂಗೀತ ನೀಡಿದ ಕುಣಿತ ಭಜನೆಗೆ ಸಾಹಿತ್ಯ ಬರೆದವರು ಯೋಗೀಶ್ ಅಡಕಳಕಟ್ಟೆ. ಖ್ಯಾತ ಕವಿ ಅಡ್ವೋಕೇಟ್ ಶಶಿರಾಜ್ ಕಾವೂರವರು ಬರೆದ ಇನ್ನೊಂದು ಕುಣಿತ ಭಜನೆಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಹಃ” ಎಂಬ ಉಲ್ಲೇಖದೊಂದಿಗೆ ಭೋಜಣ್ಣ ಎಂಬ ಮಹಮ್ಮಾಯಿ ಪಾತ್ರಿಯವರ ಮನೆಗೆ ವಿದ್ಯಾವಂತೆಯೊಬ್ಬಳು ಸೊಸೆಯಾಗಿ ಬಂದಾಗ, ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಕಂಡು ಅವಳು ನಡೆಸುವ ಸಾತ್ವಿಕ ಸಂಘರ್ಷ ಹಾಗೂ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯಲು ಭೋಜಣ್ಣ ತೆಗೆದುಕೊಳ್ಳುವ ದೃಢನಿರ್ಧಾರವು ಕಥೆಯ ಜೀವಾಳವಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಾಗ ವ್ಯಾಪಕವಾದ ಪ್ರಶಂಸೆಗೆ ಈ ಚಿತ್ರವು ಭಾಜನವಾಗಿತ್ತು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page