ಮೇ 5 ರಂದು ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದ ಉದ್ಘಾಟನೆ

ಪೆರುವಾಯಿ ಚರ್ಚ್ ಧರ್ಮಗುರು ವಂದನೀಯ ಸೈಮನ್ ಡಿಸೋಜರವರಿಂದ ಪತ್ರಿಕಾಗೋಷ್ಠಿ
ಮೂರು ದಶಕದ ಇತಿಹಾಸವಿರುವ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮ ವ್ಯಾಪ್ತಿಯ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ, ವಿಟ್ಲ ವಲಯದ ಮುಚ್ಚಿರಪದವಿನ ಫಾತಿಮಾ ಮಾತೆಯ ಕ್ರೈಸ್ತ ದೇವಾಲಯವು ಹಲವು ಪವಾಡಗಳಿಗೆ ಸಾಕ್ಷಿಯಾಗಿದೆ. 140 ಕುಟುಂಬಗಳ ವ್ಯಾಪ್ತಿಯ ಈ ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅದರ ಭಾಗವಾಗಿ 2025ರ ಮೇ 5 ರಂದು ‘ಫಾತಿಮಾ ಮಾತಾ ಸಮುದಾಯ ಭವನ’ದ ಉದ್ಘಾಟನೆ ಹಾಗೂ ಆರ್ಶೀವಚನ ನಡೆಯಲಿದೆ. ಬೆಳಗ್ಗೆ 9:15 ಗಂಟೆಗೆ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆಯು ನೆರವೇರಲಿದ್ದು, ಬೆಳಗ್ಗೆ 10 ಗಂಟೆಗೆ ಸಮುದಾಯ ಭವನ ಉದ್ಘಾಟಿಸಿ ಆರ್ಶೀವಚಿಸಲಿದ್ದಾರೆ ಎಂದು ಪೆರುವಾಯಿ ಚರ್ಚ್ ಇದರ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜ ಇಂದು ಎಪ್ರಿಲ್ 29ರಂದು ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಗೌರವ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಗೌರವಾನ್ವಿತ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಸಮುದಾಯ ಭವನದ ಉದ್ಘಾಟನೆಗೆ ಹಾಜರಾಗಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ ಹಾಗೂ ಕಿಶೋರ್ ಕುಮಾರ್, ಶ್ರೀ ದುರ್ಗಾ ಲಕ್ಷ್ಮೀ ಸೇವಾ ಪ್ರತಿಷ್ಠಾನ, ಶ್ರೀ ಧಾಮ ಮಣಿಲಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ, ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಾಸ್ಥಾನ ಧರ್ಮದರ್ಶಿ ಶ್ರೀ ಶ್ರೀ ಕೃಷ್ಣ ಗುರೂಜಿ, ಪೆರುವಾಯಿ ಜುಮ್ಮಾ ಮಸೀದಿಯ ಅಲ್ ಹಾಜ್ ಮೊಹಮ್ಮದ್ ಶರೀಫ್ ಮದನಿ, ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ಅರುಣ್ ಫುರ್ಟಾಡೊ, ಮಾಜಿ ಶಾಸಕ ಜೆ.ಆರ್. ಲೋಬೊ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಅದೇ ದಿನ ಸಂಜೆ 6 ಗಂಟೆಗೆ, ತುಳುನಾಡಿನ ಖ್ಯಾತ ಕಲಾವಿದರಾದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕ್ಕಾಡ್, ಭೋಜರಾಜ್ ವಾಮಂಜೂರು ಹಾಗೂ ಪ್ರಸಿದ್ಧ ಕಲಾವಿದರ ನಟನೆಯ ‘ಏರ್ಲಾ ಗ್ಯಾರಂಟಿ ಅತ್ತ್’ ನಾಟಕ ಪ್ರದರ್ಶನಗೊಳ್ಳಲಿದೆ.
ಸಮುದಾಯ ಭವನದ ವಿಶೇಷತೆ:- ಫಾತಿಮಾ ಮಾತಾ ಸಮುದಾಯ ಭವನವು ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 600 ಆಸನದ ವ್ಯವಸ್ಥೆ ಹೊಂದಿದೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಸೇರಿ ಹಲವು ಆಧುನಿಕ ವ್ಯವಸ್ಥೆ ವೈಶಿಷ್ಟ್ಯತೆ ಹೊಂದಿದೆ.
ಪೆರುವಾಯ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಸಮುದಾಯ ಭವನ ಕಟ್ಟಡ ಸಮಿತಿ ಸಂಚಾಲಕ ಚಾರ್ಲ್ಸ್ ಡಿಸೋಜ ಹಾಗೂ ಮಾಧ್ಯಮ ಸಮಿತಿ ಸಂಚಾಲಕರಾದ ಎಡ್ವರ್ಡ್ ಡಿಸೋಜ ಮತ್ತು ಪ್ರವೀಣ್ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.