ಮಂಗಳೂರು ಇಂದು ಸಹಜ ಸ್ಥಿತಿಗೆ

ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆ ಮೇ 2ರಂದು ಶುಕ್ರವಾರ ಮಂಗಳೂರು ಬಂದ್ ಆಗಿತ್ತು. ಇಂದು ಮೇ 3ರಂದು ಶನಿವಾರ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ತಲುಪಿದೆ. ನಿನ್ನೆ ಸಂಜೆಯಿಂದಲೇ ಮಂಗಳೂರಿನ ವಿವಿಧೆಡೆಗಳಲ್ಲಿ ಕೆಲವೊಂದು ಅಂಗಡಿಗಳು ತೆರೆದಿದ್ದವು. ಶುಕ್ರವಾರ ಬಂದ್ ನ ಸರಿಯಾದ ಮಾಹಿತಿ ಇಲ್ಲದ ಕಾರಣ ಸಾಕಷ್ಟು ಜನರು ತೊಂದರೆಗೀಡಾಗಿದ್ದರು. ಸಂಜೆ ವೇಳೆ ಅಲ್ಲಲ್ಲಿ ತೆರೆದಿರುವ ಅಂಗಡಿಗಳಿಗೆ ಜನರು ಅಗತ್ಯ ವಸ್ತುಗಳಿಗಾಗಿ ಮುಗಿಬಿದ್ದ ದೃಶ್ಯ ಕಂಡು ಬಂದಿತ್ತು.
ಇಂದು ಬೆಳಗ್ಗಿನಿಂದಲೇ ಸರ್ಕಾರಿ ಮತ್ತು ಖಾಸಗಿ ಬಸ್ ಗಳು ಸಂಚಾರ ಆರಂಭಿಸಿದೆ. ಆಟೋ, ಟೆಂಪೋ ಸೇರಿದಂತೆ ಎಲ್ಲ ವಾಹನಗಳು ರಸ್ತೆಗಿಳಿದಿವೆ. ಶುಕ್ರವಾರದ ಬಂದ್ ವೇಳೆ ವಾಹನ ಸಂಚಾರ ಹೆಚ್ಚಾಗಿ ಇರಲಿಲ್ಲ, ಅಂಗಡಿಗಳು ಕೂಡ ತೆರೆದಿರಲಿಲ್ಲ. ನಿನ್ನೆ ಬಂದ್ ನಿಂದಾಗಿ ಸಾಕಷ್ಟು ಜನರು ತೊಂದರೆಗೀಡಾಗಿದ್ದರು. ಏಕಾಏಕಿ ಮಂಗಳೂರಿನಲ್ಲಿ ಬಂದ್ ಆಚರಿಸಿರುವುದಕ್ಕೆ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಗಲಾಟೆಗಳು ನಡೆಯಬಹುದು ಎನ್ನುವ ಭೀತಿಯಿಂದ ಸಾಕಷ್ಟು ಅಂಗಡಿಗಳ ಮಾಲಿಕರು ಅಂಗಡಿ ಬಂದ್ ಮಾಡಿರುವುದು ಕಂಡು ಬಂತು.