ಸುರತ್ಕಲ್ ನಲ್ಲಿ ಸಾಹಿತ್ಯ ಸಂಭ್ರಮ ಕವಿ ಗೋಷ್ಠಿ

ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಹಾಗೂ ಮಂಗಳೂರು ಘಟಕದ ವತಿಯಿಂದ ಮೇ 4 ರಂದು ಆದಿತ್ಯವಾರ ಇಲ್ಲಿನ ವಿರಾಟ್ ಸಭಾ ಭವನದಲ್ಲಿ ಸಾಹಿತ್ಯ ಸಂಭ್ರಮ ಕವಿ ಗೋಷ್ಠಿಯನ್ನು ನಡೆಸಲಾಯಿತು. ಪ್ರಸಿದ್ಧ ಸಾಹಿತಿ ಡಾ. ಇಂದಿರಾ ಹೆಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ ವಹಿಸಿದ್ದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪಿ. ದಯಾಕರ್, ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ರೇವನ್ಕರ್, ವಿನಯ ಆಚಾರ್ ಸಹಿತ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೃಷ್ಣ ಮೂರ್ತಿ ಸುರತ್ಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭಾ ಕಾರ್ಯಕ್ರಮ ಹಾಗೂ ಗೀತ ಗಾಯನಗಳ ತರುವಾಯ ನಡೆದ ಕವಿಗೋಷ್ಠಿಯಲ್ಲಿ ವಿವಿಧ ರೀತಿಯ ಸ್ವರಚಿತ ಕಾವ್ಯ ವಾಚನವು ಸಭಿಕರನ್ನು ರಂಜಿಸಿತು. ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆಯವರು ಸಕಾಲಿಕ ಕವನವನ್ನೂ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ್ ನೆಗಳಗುಳಿ ಇವರು ಸುಮಧುರ ಗಜಲ್ ನ್ನೂ ವಾಚಿಸಿದರು.
ಬಹು ಮುಖ ಕಲೆಯ ಶಿಕ್ಷಕಿ ಪ್ರೇಮಾ ಆರ್. ಶೆಟ್ಟಿಯವರು ರಮ್ಯ ಕವನವನ್ನು ಹಾಗೂ ಕರ್ನಾಟಕ ಬ್ಯಾಂಕ್ ಅಧಿಕಾರಿ ಆಕೃತಿ ಭಟ್ ರವರು ರಾಗ ಬದ್ಧ ಕವನ ಗಾಯನ ಮಾಡಿದರು. ರಾಜೇಶ್ವರಿ ಎಚ್. ರವರು ಹಾಗೂ ಪದ್ಮನಾಭ ಪೂಜಾರಿ ಪ್ರಾಸ ಬದ್ಧ ಕವನ ಹಾಡಿದರು. ನೇರಂಬೋಳು ರಂಜಿತ್ ಸಸಿಹಿತ್ಲು, ಗುಲಾಬಿ ಸುರೇಂದ್ರ ಹಾಗೂ ಸಂಘಟಕಿ ಅನುರಾಧ ಸುರತ್ಕಲ್ ಅವರ ಕವಿಗಳಿಗೆ ವಂದಿಸುವ ಕವನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.