ಪೆರುವಾಯಿ ಧರ್ಮಕೇಂದ್ರಕ್ಕೆ ಒಳಪಟ್ಟ ಫಾತಿಮಾ ಮಾತಾ ಸಭಾಭವನ ಲೋಕಾರ್ಪಣೆ

ಎಲ್ಲರ ಸಹಕಾರ ಅನ್ಯೋನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣ – ಬಿಷಪ್ ಪೀಟರ್ ಪಾವ್ಲ್
ಮಂಗಳೂರು ಧರ್ಮಕ್ಷೇತ್ರದ ವಿಟ್ಲ ವಲಯದ ಪೆರುವಾಯಿ ಫಾತಿಮಾ ಮಾತೆಗೆ ಸಮರ್ಪಿಸಲ್ಪಟ್ಟ ಧರ್ಮಕೇಂದ್ರಕ್ಕೆ ಒಳಪಟ್ಟ ಅಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫಾತಿಮಾ ಮಾತಾ ಸಮುದಾಯ ಭವನ ಮೇ 5ರಂದು ಸೋಮವಾರ ಲೋಕಾರ್ಪಣೆಗೊಂಡಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ದಿವ್ಯ ಕೃತಜ್ಞತಾ ಬಲಿಪೂಜೆಯನ್ನು ನಡೆಸಿ ನೂತನ ಸಭಾಭವನವನ್ನು ಉದ್ಘಾಟಿಸಿ ಆಶೀರ್ವದಿಸಿದರು. ಎಲ್ಲರ ಸಹಕಾರ ಅನ್ಯೋನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ಅಭಿವೃದ್ಧಿಯ ಸಂಕೇತವೇ ಈ ಒಂದು ಸಭಾಭವನ ಆಗಿದೆ. ನಮ್ಮೊಳಗಿನ ಸಂಬಂದ ಇನ್ನಷ್ಟು ಗಟ್ಟಿಯಾಗಲಿ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಇದೊಂದು ಅತ್ಯಂತ ಸಂತೋಷದ ವಿಷಯ. ಈ ಸಮುದಾಯ ಭವನ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ವರ್ಗದ ಜನರನ್ನು ಒಟ್ಟು ಮಾಡುವ ಭವನವಾಗಿದೆ. ಇತರ ಸಮುದಾಯದಂತೆ ನಮ್ಮ ಸಮುದಾಯದ ಜನರು ಬೆಳೆಯುತ್ತಿದ್ದಾರೆ. ಬೆಳೆಯುವ ಜನರಿಗೆ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ಅನೇಕ ಏರು ಪೇರುಗಳಿವೆ. ಪೆರುವಾಯಿಯ ಈ ಒಂದು ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವಾಗಿದೆ ಎಂದರು.
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಮಾತನಾಡಿ ನಾವೆಲ್ಲರೂ ಪುಣ್ಯಾತ್ಮರು. ಧರ್ಮಗ್ರಂಥಗಳು ಸಾರುವುದು ಒಂದೇ ಸಹಬಾಳ್ವೆ. ಒಬ್ಬರನ್ನೊಬ್ಬರು ಅರಿತು ಬಾಳುವ ಕೆಲಸವಾಗಬೇಕು. ಭಾವೈಕ್ಯತೆ ಭಾವನೆ ಎಲ್ಲರಲ್ಲೂ ಮೂಡಬೇಕು. ಇದೊಂದು ವ್ಯತಿರಿಕ್ತವಾದ ಚರ್ಚ್ ಆಗಿದೆ. ಎಲ್ಲಾ ಜಾತಿ-ಧರ್ಮವನ್ನು ಅರ್ಥೈಸಿಕೊಂಡು ಒಂದಾಗಿ ಬದುಕುವ ಎಂದರು.
ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಮುಹಮ್ಮದ್ ಶರೀಫ್ ಮದನಿ, ವಿಟ್ಲ ವಲಯದ ಶೇಷ್ಟ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್, ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ವಿಶಾಲ್ ಮೊನಿಸ್, ಅಳಿಕೆ ಗ್ರಾಮ ಪಂಚಾಯಿತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ಪೆರುವಾಯಿ ಗ್ರಾಮ ಪಂಚಾಯಿತ್ ಅಧ್ಯಕ್ಷೆ ನೆಫೀಸಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ, ಪತ್ರಕರ್ತ ವಿಲ್ಫ್ರೆಡ್ ಡಿಸೋಜ, ರಾಲ್ಫ್ ಡಿಸೋಜ ಮತ್ತು ನೂತನ ಸಮುದಾಯ ಭವನ ಕಟ್ಟಡ ಸಮಿತಿಯ ಸಂಚಾಲಕ ಚಾರ್ಲ್ಸ್ ಡಿಸೋಜ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮುದಾಯ ಭವನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ದಾನಿಗಳನ್ನು, ಇಂಜಿನೀಯರ್ ಗಳನ್ನು, ಕೆಲಸ ಕಾರ್ಯಗಳನ್ನು ನಿರ್ವಹಿಸಿದ ಪದಾಧಿಕಾರಿಗಳನ್ನು, SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಇದೇ ಸಮಯದಲ್ಲಿ ಸನ್ಮಾನಿಸಲಾಯಿತು. ಚರ್ಚ್ ವೆಬ್ ಸೈಟ್ ಅನಾವರಣಗೊಳಿಸಲಾಯಿತು.
ಮುಚ್ಚಿರಪದವು ಪೆರುವಾಯಿ ಚರ್ಚ್ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪತ್ರಕರ್ತ ಸಂತೋಷ್ ಮೊಂತೇರೊ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಪೆರುವಾಯ್ ಚರ್ಚ್ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ತೆಲಿಕೆದ ಬೊಳ್ಳಿ ದೇವ್ ದಾಸ್ ಕಾಪಿಕಾಡ್ ತಂಡದಿಂದ ‘ಏರ್ಲಾ ಗ್ಯಾರಂಟಿ ಅತ್ತ್’ ತುಳು ನಾಟಕ ಪ್ರದರ್ಶನಗೊಂಡಿತು.