May 9, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನೂತನ ಯಾಜಕ ಸ್ಟ್ಯಾನಿ ಪಿಂಟೊ ಇವರ ಪ್ರಥಮ ಕೃತಜ್ಞತಾ ದಿವ್ಯ ಬಲಿಪೂಜೆ

ಕಾರ್ಮೆಲೈಟ್ ಸಂಸ್ಥೆಗೆ ಸೂರಿಕುಮೇರು ಬೊರಿಮಾರ್ ಚರ್ಚ್ ನಿಂದ ಪ್ರಥಮ ಯಾಜಕ

ಚರ್ಚ್ ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಆಯೋಗಗಳ ಸಂಯೋಜಕರಿಂದ ಅಭಿನಂದನೆ

ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಬಾಲಯೇಸು ಪುಣ್ಯ ಕ್ಷೇತ್ರದಲ್ಲಿ ಮೇ 2ರಂದು ಶುಕ್ರವಾರ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಇವರಿಂದ ಗುರುದೀಕ್ಷೆ ಪಡೆದ ಫಾದರ್ ಸ್ಟ್ಯಾನಿ ಲಿಸ್ಟನ್ ಪಿಂಟೊ OCD ಇವರು ಮೇ 7ರಂದು ಬುಧವಾರ ಬೆಳಗ್ಗೆ 10:00 ಗಂಟೆಗೆ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರಥಮ ಕೃತಜ್ಞತಾ ಬಲಿಪೂಜೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಇದೇ ಧರ್ಮಕೇಂದ್ರಕ್ಕೆ ಸೇರಿದ ನಾನು ಇಲ್ಲಿ ಬಹಳಷ್ಟು ಬಾರಿ ಬಲಿ ಪೂಜೆಗೆ ಬರುತ್ತಿದ್ದೆ. ಯಾಜಕರ ಜೀವನವು ಮೌಲ್ಯಯುತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಯಾಜಕರು ಮಾನವೀಯತೆಯ ಮೋಕ್ಷಕ್ಕಾಗಿ ದೇವರ ಹೆಸರಿನಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ, ಅವರಿಗೆ ಸುವಾರ್ತೆಯನ್ನು ಬೋಧಿಸಲು, ಶಾಸನಗಳನ್ನು ನಿರ್ವಹಿಸಲು ಮತ್ತು ದೇವರ ರಾಜ್ಯವನ್ನು ಆಳಲು ಅಧಿಕಾರವನ್ನು ನೀಡುತ್ತದೆ. ಅವರು ಪ್ರಾರ್ಥನೆ, ತ್ಯಾಗ ಮತ್ತು ಸಂಸ್ಕಾರಗಳ ಮೂಲಕ ಜನರನ್ನು ದೇವರಿಗೆ ಸಂಪರ್ಕಿಸುತ್ತಾರೆ, ಪಾಪಗಳ ಕ್ಷಮೆಯನ್ನು ನೀಡುತ್ತಾರೆ ಮತ್ತು ಕ್ರಿಸ್ತನ ದೇಹ ಮತ್ತು ರಕ್ತವನ್ನು ಹಂಚಿಕೊಳ್ಳುತ್ತಾರೆ. ಹೀಗೆ ಕ್ರಿಸ್ತನೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸುತ್ತದೆ.” ಎಂದರು.

ಬಲಿ ಪೂಜೆಯಲ್ಲಿ ಪ್ರವಚನ ನೀಡಿದ ವಂದನೀಯ ಫಾದರ್ ಜೊಸ್ಸಿ ಸಿದ್ದಕಟ್ಟೆ ಇವರು ಯಾಜಕರ ಆರಂಭದ ಜೀವನವು ಅಂಗನವಾಡಿಯಲ್ಲಿ ಚಿತ್ರಕಲೆಯನ್ನು ಕಲಿತಂತೆ. ಅಂಗನವಾಡಿಯಲ್ಲಿ ಚಿತ್ರ ಬಿಡಿಸಲು ಬಹಳಷ್ಟು ಫುಲ್ ಸ್ಟಾಪ್ ಗಳಿರುತ್ತವೆ. ಅವೆಲ್ಲವನ್ನು ಜೋಡಿಸಿದಾಗ ಒಂದು ರೂಪವು ನಮಗೆ ಕಾಣಸಿಗುತ್ತದೆ. ಅಂತೆಯೇ ಹೊಸ ಯಾಜಕರು ಸಂಪೂರ್ಣ ಸನ್ನಿವೇಶವನ್ನು ಆಲೋಚಿಸಿ, ಸಂದರ್ಭವನ್ನು ಗಳಿಸಿ, ಒಳ್ಳೆಯದು ಹಾಗೂ ಕೆಟ್ಟದನ್ನು ಅವಲೋಕಿಸಿ, ಸುವಾರ್ತೆಯ ದೃಷ್ಟಿಯಲ್ಲಿ ದೇವರ ಕಡೆ ನಡೆದರೆ, ಆಗ ಸಂಪೂರ್ಣವಾದ ಆಕಾರವು ಪ್ರಾಪ್ತಿಯಾಗುತ್ತದೆ ಎಂದರು.

 

ಈ ಪವಿತ್ರ ಕಾರ್ಯಕ್ರಮಕ್ಕೆ ಕಾರ್ಮೆಲೈಟ್ ಸಂಸ್ಥೆಯ ಧರ್ಮಗುರುಗಳು, ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಪೂಜೆಯ ಬಳಿಕ ನೂತನ ಯಾಜಕರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವು ಸ್ವಾಗತ ನೃತ್ಯದ ಮೂಲಕ ಪ್ರಾರಂಭಿಸಲಾಯಿತು. ಫಜೀರ್ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಜೋಸೆಫ್ ಮಸ್ಕರೇನ್ಹಸ್ ನೂತನ ಧರ್ಮಗುರು ಫಾದರ್ ಸ್ಟ್ಯಾನಿ ಲಿಸ್ಟನ್ ಪಿಂಟೊ ಇವರ ಜೀವನದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಕುಟುಂಬದ ಸದಸ್ಯರ ಪರಿಚಯವನ್ನು ಮಾಡಿ ಕೊಟ್ಟರು. ಯಾಜಕರು ದೇವರು ಮತ್ತು ಜನರ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರಾರ್ಥನೆಗಳು, ತ್ಯಾಗಗಳು ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ನೀಡುತ್ತಾರೆ. ಅವರು ಕ್ರಿಸ್ತನ ಬೋಧನೆಗಳು ಮತ್ತು ಆಶೀರ್ವಾದಗಳನ್ನು ಜಗತ್ತಿಗೆ ನೀಡುತ್ತಾರೆ. ಯಾಜಕರ ಜೀವನವು ಆಳವಾದ ಆಧ್ಯಾತ್ಮಿಕ ಜೀವನವನ್ನು ಉತ್ತೇಜಿಸುತ್ತದೆ. ಪ್ರಾರ್ಥನೆ, ಧರ್ಮಗ್ರಂಥಗಳ ಅಧ್ಯಯನ ಮತ್ತು ದೇವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸುತ್ತದೆ. ಇದು ವೈಯಕ್ತಿಕ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ರೂಪಾಂತರಕ್ಕೆ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿ ಫಾದರ್ ಸ್ಟ್ಯಾನಿ ಇವರಿಗೆ ಮುಂದಿನ ಧಾರ್ಮಿಕ ಜೀವನಕ್ಕೆ ಶುಭ ಹಾರೈಸಿದರು.

ಹೊಸ ಯಾಜಕ ಸ್ಟ್ಯಾನಿ ಲಿಸ್ಟನ್ ಪಿಂಟೊ ಇವರು ತನ್ನ ತಂದೆ, ಅಣ್ಣ-ಅತ್ತಿಗೆ,  ಹಾಗೂ ಎಲ್ಲಾ ಸಹಪಾಠಿ ಯಾಜಕರಿಗೆ ನೆನಪಿನ ಕಾಣಿಕೆ ನೀಡಿ ಈ ಸಂದರ್ಭದಲ್ಲಿ ಗೌರವಿಸಿದರು.

ಸಮಯೋಚಿತವಾಗಿ ಮಾತನಾಡಿದ ಸೂರಿಕುಮೇರು ಬೊರಿಮಾರ್ ಚರ್ಚ್ ಇದರ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ ಮಾತನಾಡಿ, ದೇವರ ಪರವಾಗಿ ಕಾರ್ಯನಿರ್ವಹಿಸಲು ಯಾಜಕೀ ದೀಕ್ಷೆಯು ಅನುವು ಮಾಡಿಕೊಡುತ್ತದೆ. ಇತರರನ್ನು ಗುಣಪಡಿಸಲು, ಆಶೀರ್ವದಿಸಲು ಮತ್ತು ಮಾರ್ಗದರ್ಶನ ಮಾಡಲು ಆತನ ಶಕ್ತಿಯನ್ನು ಬಳಸುತ್ತದೆ. ಯಾಜಕರ ಅಧಿಕಾರವು ಒಂದು ಸುಯೋಗವಾಗಿದ್ದು, ಭೂಮಿಯ ಮೇಲೆ ದೇವರ ಚಿತ್ತವನ್ನು ನೆರವೇರಿಸಲು ಅವರನ್ನು ಶಕ್ತಗೊಳಿಸುತ್ತದೆ. ಯಾಜಕರು ನಾಮಕರಣ, ಕ್ರಿಸ್ತ-ಪ್ರಸಾದ ಹಾಗೂ ರೋಗಿಗಳ ಅಭಿಷೇಕದಂತಹ ಸಂಸ್ಕಾರಗಳನ್ನು ನಿರ್ವಹಿಸುತ್ತಾರೆ. ಈ ಸಂಸ್ಕಾರಗಳು ದೇವರ ಪ್ರೀತಿ ಮತ್ತು ಕರುಣೆಯ ಪ್ರಬಲ ಅಭಿವ್ಯಕ್ತಿಗಳಾಗಿವೆ ಎಂದು ಹೇಳಿ ನೂತನ ಯಾಜಕರಿಗೆ ಹಾಗೂ ಅವರ ತಂದೆಗೆ ಸೂರಿಕುಮೇರು ಬೊರಿಮಾರ್ ಧರ್ಮಕೇಂದ್ರದ ಪರವಾಗಿ ಸನ್ಮಾನಿಸಿದರು.

ಮಂಗಳೂರು ಕಾರ್ಮೆಲೈಟ್ ಸಂಸ್ಥೆಯ ಕರ್ನಾಟಕ ಗೋವಾ ಪ್ರಾಂತೀಯ ಪ್ರಧಾನ ಧರ್ಮಗುರು ವಂದನೀಯ ಫಾದರ್ ಸಿಲ್ವೆಸ್ಟರ್ ಡಿಸೋಜರವರು ಮಾತನಾಡಿ “ಕ್ರೈಸ್ತ ಸಮುದಾಯದ ಅಗತ್ಯತೆಗಳನ್ನು ಪೂರೈಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ವಂದನೀಯ ಫಾದರ್ ಸ್ಟ್ಯಾನಿ ಲಿಸ್ಟನ್ ಪಿಂಟೊ ಗ್ರಾಮೀಣ ಆರೈಕೆ, ಬೋಧನೆ ಮತ್ತು ಸುವಾರ್ತಾ ಬೋಧನೆಯನ್ನು ನೀಡಿ ಅಗತ್ಯವಿರುವವರಿಗೆ ಸಹಾನುಭೂತಿ ಮತ್ತು ಬೆಂಬಲವನ್ನು ನೀಡಲು ಕೇಳಿಕೊಂಡರು”. ಸೂರಿಕುಮೇರು ಬೊರಿಮಾರ್ ಧರ್ಮಕೇಂದ್ರದಿಂದ ಫಾದರ್ ಸ್ಟ್ಯಾನಿ ಲಿಸ್ಟನ್ ಪಿಂಟೊ ಕಾರ್ಮೆಲೈಟ್ ಸಂಸ್ಥೆಗೆ ಪ್ರಥಮ ಯಾಜಕ ಆಗಿರುತ್ತಾರೆ ಎಂದು ಹೇಳಿದರು.

ತಮ್ಮ ಧನ್ಯವಾದಗಳನ್ನು ತಿಳಿಸುತ್ತಾ ನೂತನ ಯಾಜಕ ವಂದನೀಯ ಫಾದರ್ ಸ್ಟ್ಯಾನಿ ಪಿಂಟೊರವರು, ‘ನನಗೆ ಸದಾ ಶಕ್ತಿಯನ್ನು ನೀಡುವ ದೇವರು ನನ್ನೊಂದಿಗೆ ಇರುವಾಗ, ಎಲ್ಲಾ ಕಾರ್ಯಗಳನ್ನು ಮಾಡಲು ನಾನು ಶಕ್ತನಾಗಿರುತ್ತೇನೆ ಎಂಬ ವಾಕ್ಯವನ್ನೇ ನಾನು ನನ್ನ ಧ್ಯೇಯ ವಾಕ್ಯವಾಗಿ ತೆಗೆದುಕೊಂಡಿದ್ದೇನೆ. ಇಂದಿನ ಈ ಕಾರ್ಯಕ್ರಮ ಯಶಸ್ವಿ ಯಾಗಲು ಸಹಕರಿಸಿದ ಎಲ್ಲಾ ಧರ್ಮಗುರುಗಳಿಗೆ, ಧರ್ಮಭಗಿನಿಯರಿಗೆ, ಭಕ್ತಾಧಿಗಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ನೂತನ ಯಾಜಕರನ್ನು ಸೂರಿಕುಮೇರು ಬೊರಿಮಾರ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಅಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕರಾದ ಎಲಿಯಾಸ್ ಪಿರೇರಾ, ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ತೊಮಸ್ ಲಸ್ರಾದೊ ಮತ್ತು ಕಥೊಲಿಕ್ ಸಭಾ ವಿಟ್ಲ ವಲಯದ ಅಧ್ಯಕ್ಶ ರೋಷನ್ ಬೊನಿಫಾಸ್ ಮಾರ್ಟಿಸ್ ಅಭಿನಂದನೆಗಳನ್ನು ಸಲ್ಲಿಸಿದರು.

You may also like

News

ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಹೊಸ ಪೋಪ್ ‘ಲಿಯೋ XIV’ ಆಗಿ ಆಯ್ಕೆ

ಕ್ಯಾಥೋಲಿಕ್ ಚರ್ಚ್‌ಗೆ ಐತಿಹಾಸಿಕ ಮತ್ತು ಸಂತೋಷದಾಯಕ ಕ್ಷಣದಲ್ಲಿ ಚಿಕಾಗೋದಲ್ಲಿ ಜನಿಸಿದ ಮಿಷನ್ ಮತ್ತು ಸೇವೆಗೆ ಆಳವಾದ ಬದ್ಧತೆಯನ್ನು ಹೊಂದಿರುವ 69 ವರ್ಷ ವಯಸ್ಸಿನ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್
News

ಪೆರುವಾಯಿ ಧರ್ಮಕೇಂದ್ರಕ್ಕೆ ಒಳಪಟ್ಟ ಫಾತಿಮಾ ಮಾತಾ ಸಭಾಭವನ ಲೋಕಾರ್ಪಣೆ

ಎಲ್ಲರ ಸಹಕಾರ ಅನ್ಯೋನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣ – ಬಿಷಪ್ ಪೀಟರ್ ಪಾವ್ಲ್ ಮಂಗಳೂರು ಧರ್ಮಕ್ಷೇತ್ರದ ವಿಟ್ಲ ವಲಯದ ಪೆರುವಾಯಿ ಫಾತಿಮಾ ಮಾತೆಗೆ ಸಮರ್ಪಿಸಲ್ಪಟ್ಟ ಧರ್ಮಕೇಂದ್ರಕ್ಕೆ ಒಳಪಟ್ಟ

You cannot copy content of this page