ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ – ಕಡಬದಲ್ಲಿ ಪ್ರಕರಣ ದಾಖಲು

ಕಡಬ ಠಾಣಾ ವ್ಯಾಪ್ತಿಯ ನೆಲ್ಯಾಡಿ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ 34 ವರ್ಷದ ಶರತ್ ಕುಮಾರ್ ಎಂಬವರ ಕೊಲೆ ನಡೆದಿರುವ ಬಗ್ಗೆ ವರದಿಯಾಗಿದೆ. ಕಳೆದ ಕೆಲ ಸಮಯದಿಂದ ಶರತ್ ಕುಮಾರ್ ಎಂಬವರಿಗೂ, ಅವರ ಚಿಕ್ಕಪ್ಪ ಜನಾರ್ದನ ಗೌಡರ ಮಕ್ಕಳಿಗೂ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಅಂತೆಯೇ ಗುರುವಾರ ಮೇ 8 ರಂದೂ ಗಲಾಟೆ ನಡೆದಿತ್ತು.
ಆದರೆ ಮೇ 9ರಂದು ಶುಕ್ರವಾರ ಶರತ್ ಕುಮಾರ್ ಚಿಕ್ಕಪ್ಪ ಜನಾರ್ದನ ಗೌಡರ ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿರುವ ಮನೆಗೆ ರಾತ್ರಿ 8 ರಿಂದ 8.30ರ ಅವದಿಯಲ್ಲಿ ಹೋಗಿ, ಅಂಗಳದಲ್ಲಿ ನಿಂತು ಚಿಕ್ಕಪ್ಪನ ಮಗ ಸತೀಶನಿಗೆ ಬಯ್ಯುತ್ತಿದ್ದಾಗ, ತೋಟಕ್ಕೆ ಹೋಗಿದ್ದ ಹರಿಪ್ರಸಾದ್ ಬಂದು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಶರತ್ ಕುಮಾರ್ ತಲೆಗೆ ಹಲ್ಲೆ ಮಾಡಿದ್ದು, ಈ ವೇಳೆ ಶರತ್ ಕುಮಾರ್ ಅಂಗಳದಲ್ಲಿ ಕುಸಿದು ಬಿದ್ಧಾಗ, ಪುನಃ ಆರೋಪಿತನು ಶರತ್ ತಲೆಗೆ ಬಲವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ವರದಿಯಾಗಿದೆ.
ಈ ಪ್ರಕರಣದ ಪಿರ್ಯಾದಿದಾರರಾದ, ಶರತ್ ಕುಮಾರ್ ಅಣ್ಣ 37 ವರ್ಷ ಪ್ರಾಯದ ಚರಣ್ ಕುಮಾರ್ ವಾಸ: ನೆಲ್ಯಾಡಿ ಅಂಚೆ ಮತ್ತು ಗ್ರಾಮ, ಕಡಬ ಎಂಬವರ ದೂರಿನಂತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: ಅ.ಕ್ರ: 38/2025 ಕಲಂ: 103(1) ಭಾರತೀಯ ನ್ಯಾಯ ಸಂಹಿತ 2023ರಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಘಟನಾ ಸ್ಥಳಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್. IPS ರವರು ಭೇಟಿ ನೀಡಿ ಪರಿಶೀಲಿಸಿ, ತನಿಖೆಯ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ.