ನೂತನ ಕ್ರಿಶ್ಚಿಯನ್ ಜಗದ್ಗುರು ಪೋಪ್ ಲಿಯೋ 14 ರವರಿಗೆ ಕ್ರತಜ್ಞತಾರ್ಪಣೆ ಹಾಗೂ ಭಾರತೀಯ ಸೇನಾಪಡೆಯ ಸೈನಿಕರಿಗಾಗಿ ಪ್ರಾರ್ಥಿಸಲು ಮಂಗಳೂರು ಬಿಷಪ್ ಕರೆ

ನಾಳೆ ಮೇ 11ರಂದು ಮಂಗಳೂರು ಧರ್ಮಕ್ಷೇತ್ರದ ಎಲ್ಲಾ ಧರ್ಮಕೇಂದ್ರಗಳಲ್ಲಿ ಪೂಜೆಯ ಬಳಿಕ ಪರಮ ಪ್ರಸಾದದ ಆರಾಧನಾ ಪ್ರಾರ್ಥನೆ
ಜಾಗತಿಕ ಕ್ಯಾಥೊಲಿಕ್ ಧರ್ಮಸಭೆಗೆ ನವೀಕೃತ ಭರವಸೆಯಾಗಿ ಪೋಪ್ ಲಿಯೋ 14 ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಇಡೀ ಪ್ರಪಂಚದ ಕ್ಯಾಥೊಲಿಕ್ ಧರ್ಮಸಭೆಯನ್ನು ಮುನ್ನಡೆಸಲು ದೇವರಲ್ಲಿ ಪ್ರಾರ್ಥಿಸಬೇಕು ಎಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಾದಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಇಂದು ಮೇ 10ರಂದು ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರಮೋಸ್ಟ್ ರವರನ್ನು ಪೋಪ್ ಫ್ರಾನ್ಸಿಸ್ ರವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ವಿಶ್ವದ ಕ್ಯಾಥೊಲಿಕ್ ಧರ್ಮಸಭೆ ಹರ್ಷ ವ್ಯಕ್ತಪಡಿಸುತ್ತದೆ. ಇದು ವಿಶ್ವದ ಕ್ಯಾಥೊಲಿಕ್ ಧರ್ಮಸಭೆಗೆ ಅತೀವ ಸಂತೋಷ ಮತ್ತು ನವೀಕೃತ ಭರವಸೆಯ ಕ್ಷಣವಾಗಿದೆ. ನಮ್ಮ ಕರ್ತನಾದ ಯೇಸು ಕ್ರಿಸ್ತನ ಬಯಕೆಯ ಪ್ರಕಾರ ಧರ್ಮ ಸಭೆಯನ್ನು ಮುನ್ನಡೆಸಲು ಹೊಸ ಪೋಪ್ ಸ್ವಾಮಿಯನ್ನು ಆಯ್ಕೆ ಮಾಡುವಲ್ಲಿ ಕಾರ್ಡಿನಲ್ ಗಳ ಮಂಡಳಿಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನಾವು ದೇವರಿಗೆ ಧನ್ಯವಾದಗಳನ್ನು ಅರ್ಪಿಸೋಣ.
ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ಮತ್ತು ಹೇಡಿತನದ ಭಯೋತ್ಪಾದಕ ದಾಳಿಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡು, ಅನೇಕ ಜನರನ್ನು ಗಾಯಗೊಳಿಸಿದ ಈ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುಃಖದ ಸಮಯದಲ್ಲಿ ತಮ್ಮವರನ್ನು ಕಳೆದುಕೊಂಡು ಸಂತ್ರಸ್ತರಾದವರ ಮತ್ತು ಅವರ ಕುಟುಂಬಗಳೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ಬಲವಾಗಿ ವ್ಯಕ್ತಪಡಿಸುತ್ತೇವೆ. ಒಂದು ವಿಶ್ವಾಸಾರ್ಹ ಸಮುದಾಯವಾಗಿ, ಈ ದಾಳಿಗಳಲ್ಲಿ ಸಾವನ್ನಪ್ಪಿದವರ ಆತ್ಮಗಳಿಗಾಗಿ ನಾವು ಪ್ರಾರ್ಥಿಸುತ್ತೇವೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ.
ಅದೇ ಸಮಯದಲ್ಲಿ ನಮ್ಮ ದೇಶದ ಗಡಿಗಳನ್ನು ಕಾಯುತ್ತಾ ನಮ್ಮ ಜನರನ್ನು ರಕ್ಷಣೆ ಮಾಡುತ್ತಿರುವ ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ದಿಟ್ಟತನದ ಪ್ರಯತ್ನಗಳಿಗೆ ನಾವು ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ನಾಗರಿಕರು ಮತ್ತು ಸೈನಿಕರ ಸುರಕ್ಷತೆಗಾಗಿಯೂ ನಾವು ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಈ ಎರಡು ಮಹತ್ವದ ಬೆಳವಣಿಗೆಗಳು ಅಂದರೆ ಹೊಸ ಪೋಪ್ ಆಯ್ಕೆಯ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಕೆ ಮತ್ತು ರಾಷ್ಟ್ರೀಯ ಶೋಕಾಚರಣೆ ಈಗ ನಮ್ಮ ಮುಂದೆ ಇದೆ. ನಾವು ನೆರೆಯ ರಾಷ್ಟ್ರಗಳ ನಡುವೆ ಶಾಂತಿಗಾಗಿ ಪ್ರಾರ್ಥಿಸೋಣ. ಪರಮ ಪವಿತ್ರ ಸಂಸ್ಕಾರದ ಆರಾಧನೆಯ ಸಮಯದಲ್ಲಿ ನಮ್ಮ ಕೃತಜ್ಞತೆ ಮತ್ತು ನಮ್ಮ ಮನವಿಯನ್ನು ಭಗವಂತನ ಮುಂದೆ ಇಡೋಣ.
ಈ ಎರಡೂ ಉದ್ದೇಶಗಳಿಗಾಗಿ ನಮ್ಮ ಧರ್ಮಕ್ಷೇತ್ರದ ಎಲ್ಲಾ ಧರ್ಮಕೇಂದ್ರಗಳ ಧರ್ಮಗುರುಗಳು ಮತ್ತು ಚಾಪ್ಲಿನ್ಗಳು 2025 ಮೇ IIರಂದು ಭಾನುವಾರದ ಬಲಿ ಪೂಜೆಯ ಬಳಿಕ ಆರಾಧನೆಯನ್ನು ನಡೆಸ ಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬಿಷಪ್ ಹೇಳಿದ್ದಾರೆ.