ಅನಧಿಕೃತ ಗೂಡಂಗಡಿಗಳನ್ನು ತಕ್ಷಣ ತೆರವುಗೊಳಿಸಲು ಮಂಗಳೂರು ಪಾಲಿಕೆಯ ಆದೇಶ
ತೆರವುಗೊಳಿಸದ ಗೂಡಂಗಡಿಗಳ ಮೇಲೆ ಕ್ರಮ

ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ ಪಾಲಿಕಾ ಆಯುಕ್ತರು.
ಮಂಗಳೂರು ಮಹಾನಗರ ಪಾಲಿಕಾ ವ್ಯಾಪ್ತಿಯಲ್ಲಿ 6 ಲಕ್ಷ ಜನರು ವಾಸಿಸುತ್ತಿದ್ದಾರೆ. ಇದರಿಂದಾಗಿ ವಾಹನ ಜನದಟ್ಟಣೆ ಹಾಗೂ ಜನ ಸಂಚಾರ ಹೆಚ್ಚಿರುವ ಅಪಾಯಕಾರಿ ರಸ್ತೆಯಾಗಿ ಮಾರ್ಪಟ್ಟಿದೆ. ಆದರೂ ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತ ಬೀದಿಬದಿ ವ್ಯಾಪಾರಿಸ್ಥರ ದೊಡ್ಡ ಹಿಂಡೇ ಇದೆ. ಯಾವ ಸರಕಾರ ಬಂದರೂ ಕೂಡ ಇವರ ಎತ್ತಂಗಡಿಯಾಗೊಲ್ಲ. ಬಹಳಷ್ಟು ಬಾರಿ ಪತ್ರಿಕೆ ಹಾಗೂ ಟಿವಿ ಚಾನಲ್ ಗಳಲ್ಲಿ ಈ ವಿಷಯವು ಬಂದರೂ ಮಂಗಳೂರು ಮಹಾನಗರ ಪಾಲಿಕೆಯು ಕಣ್ಣಿದ್ದೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಅರ್ಧ ಭಾಗದಷ್ಟು ಜಾಗದಲ್ಲಿ ಈ ವ್ಯಾಪಾರಿಗಳಿಂದಾಗಿ ಫುಟ್ ಪಾತ್ ಇಲ್ಲದೆ ಜನರು ತೊಂದರೆಗೊಳಗಾಗಿದ್ದಾರೆ.

ಆದರೆ ಮೇ 19 ರಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸಾರ್ವಜನಿಕ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಅದರಂತೆ ಪಾಲಿಕಾ ವ್ಯಾಪ್ತಿಯಲ್ಲಿ ಸರಕಾರಿ ಜಾಗ, ಫುಟ್ಪಾತ್, ವಾಹನಗಳು ಓಡಾಡುವ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಯ ಎರಡೂ ಬದಿಗಳಲ್ಲಿ ಅನಧಿಕೃತವಾಗಿ ಗೂಡಂಗಡಿ ಮತ್ತು ಫಾಸ್ಟ್ ಫುಡ್ ತಿಂಡಿ- ತಿನಿಸುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವವರು ತಕ್ಷಣ ತೆರವುಗೊಳಿಸಬೇಕು. ಇಂತಹ ಗೂಡಂಗಡಿಗಳು ಸಾರ್ವಜನಿಕರಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತದೆ. ತೆರವುಗೊಳಿಸದ ಗೂಡಂಗಡಿಗಳ ಮೇಲೆ ಮುಂದಿನ ದಿನಗಳಲ್ಲಿ ಪಾಲಿಕೆಯು ನಿರಂತರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿಕೊಂಡು ಅವರ ಮೇಲೆ ಕಾನೂನು ಕ್ರಮ ಕೈಗೊತ್ತಿಕೊಳ್ಳಲಾಗುವುದೆಂದು ಪ್ರಕಟಣೆ ತಿಳಿಸಿದೆ.

ಹಲವಾರು ಕಡೆ ಫುಟ್ಪಾತ್ ಮೇಲೆಯೇ ಬೀದಿಬದಿ ವ್ಯಾಪಾರಸ್ಥರು ಹಾಗೂ ಗೂಡಂಗಡಿಗಳು ಇದ್ದು ಜನರು ಫುಟ್ ಪಾತ್ ಇಲ್ಲದೆ ರಸ್ತೆಯ ಮೇಲೆ ನಡೆಯುವಂತಾಗಿದೆ. ಇನ್ನು ಕೆಲವು ಕಡೆ ವಾಹನಗಳ ಪಾರ್ಕಿಂಗ್ ಗಾಗಿ ಮೀಸಲಿಟ್ಟ ಸ್ಥಳದಲ್ಲಿ ಬೀದಿಬದಿ ವ್ಯಾಪಾರಸ್ಥರು ತಮ್ಮ ಫಾಸ್ಟ್ ಫುಡ್ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದಾಗಿ ಜನರ ಓಡಾಟಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೀರಾ ಅಡ್ಡಿ ಉಂಟಾಗುತ್ತದೆ. ಈ ಸಮಸ್ಯೆಯ ಬಗ್ಗೆ ಬಹುತೇಕ ಸಾಮಾಜಿಕ ಕಾರ್ಯಕರ್ತರು ಮಂಗಳೂರು ಮಹಾನಗರ ಪಾಲಿಕೆಯ ಗಮನ ಸೆಳೆದಿದ್ದರು.

ಫುಟ್ಪಾತ್ ಮೇಲೆ ವ್ಯಾಪಾರ ಮಾಡುವ ಗೂಡಂಗಡಿಗಳು ಹಾಗೂ ಫಾಸ್ಟ್ ಫುಡ್ ತಿಂಡಿ ತಿನಿಸಿನ ವ್ಯಾಪಾರಸ್ಥರು, ರಸ್ತೆ ಬದಿ ವ್ಯಾಪಾರಿಗಳು ನೀಡಿದ ತಿಂಡಿಗಳ ಪ್ಲಾಸ್ಟಿಕ್ ಪೊಟ್ಟಣ, ಪೇಪರ್ ನ ತುಂಡುಗಳು ಇವೆಲ್ಲವನ್ನು ಫುಟ್ಪಾತ್ ಕೆಳಗಿರುವ ಮಳೆ ನೀರು ಹರಿದುಹೋಗುವ ಡ್ರೈನೇಜ್ ಒಳಗೆ ಸೇರಿಕೊಂಡು ನೀರಿನ ಸುಗಮ ಸಂಚಾರಕ್ಕೆ ಸದಾಕಾಲ ಅಡ್ಡಿಯನ್ನು ಉಂಟು ಮಾಡುತ್ತಿದ್ದವು. ಇದರಿಂದಾಗಿ ಬಹಳಷ್ಟು ಕಡೆ ಮಳೆಗಾಲದಲ್ಲಿ ನೆರೆಯೂ ಬಂದಿತ್ತು. ಇದೀಗ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್ ಅವರು ಮುಂದಿನ ದಿನಗಳಲ್ಲಿ ಪ್ರಕಟಣೆಯಲ್ಲಿ ತಿಳಿಸಿದಂತೆ ನಿಜವಾಗಿಯೂ ಅನಧಿಕೃತ ಗೂಡಂಗಡಿ ಹಾಗೂ ಫಾಸ್ಟ್ ಫುಡ್ ತಿಂಡಿ ತಿನಿಸುಗಳ ವ್ಯಾಪಾರಸ್ಥರ ಮೇಲೆ ಕ್ರಮವನ್ನು ಕೈಕೊಳ್ಳುತ್ತಾರೆಯೇ ಅಥವಾ ರಾಜಕೀಯ ನಾಯಕರುಗಳು ಹೇಳಿದಂತೆ ಮತ ಬ್ಯಾಂಕಿಗಾಗಿ ಇವುಗಳ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಬಿಡುತ್ತಾರೆಯೇ ಎಂದು ಮುಂದಿನ ದಿನಗಳಲ್ಲಿ ತಿಳಿಯಬಹುದಾಗಿದೆ.




