July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾರಿನಲ್ಲಿ ಆಡವಾಡುತ್ತಿದ್ದಾಗ ಉಸಿರುಗಟ್ಟಿ ನಾಲ್ಕು ಮಕ್ಕಳ ಧಾರುಣ ಅಂತ್ಯ

ಆಂಧ್ರಪ್ರದೇಶದ ದ್ವಾರಪುಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ನಗುಮೊಗದ ನಾಲ್ಕು ಪುಟ್ಟ ಮಕ್ಕಳಾದ ಉದಯ್ (8), ಮುದ್ದು ಚಾರುಮತಿ (8), ಚಿಣ್ಣರಾಣಿ ಚರಿಷ್ಮಾ (6) ಮತ್ತು ಪುಟಾಣಿ ಮನಸ್ವಿ (6), ಆಟವಾಡುತ್ತಾ ಕಾರಿನೊಳಗೆ ಸೇರಿ, ವಿಧಿಯ ಕ್ರೂರತೆಗೆ ಬಲಿಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ರಜೆಯ ಸಂಭ್ರಮದಲ್ಲಿದ್ದ ನಾಲ್ಕು ಮಕ್ಕಳು ಮೇ 18ರಂದು ಭಾನುವಾರ ಬೆಳಿಗ್ಗೆ ತಿಂಡಿ ಮುಗಿಸಿ ನಲಿಯುತ್ತಾ ಮನೆಯಿಂದ ಹೊರಬಂದಿದ್ದವು. ಅವರ ನಗು, ಚಿಲಿಪಿಲಿ ಮಾತುಗಳು ಇಡೀ ಪರಿಸರವನ್ನೇ ಬೆಳಗಿದ್ದವು. ಆಟವಾಡುತ್ತಾ ಗ್ರಾಮದ ಮಹಿಳಾ ಮಂಡಲ ಕಚೇರಿ ಬಳಿ ನಿಂತಿದ್ದ ಹಳೆಯ ಕಾರು ಅವರ ಕಣ್ಣಿಗೆ ಬಿತ್ತು. ಕುತೂಹಲದಿಂದ ಅದರೊಳಗೆ ಹೊಕ್ಕು ಆಟವಾಡಲು ಶುರುಮಾಡಿದವು. ಆದರೆ, ಆ ಮುಗ್ಧ ಮಕ್ಕಳಿಗೆ ತಿಳಿದಿರಲಿಲ್ಲ, ಅವರ ಉತ್ಸಾಹದಲ್ಲೇ ಆ ಕಾರಿನ ಬಾಗಿಲುಗಳು ಲಾಕ್ ಆಗಿ, ಅವರ ಪಾಲಿಗೆ ಸಾವಿನ ಬೋನಾಗಿ ಮಾರ್ಪಟ್ಟವೆಂದು! ಕೆಲವೇ ಕ್ಷಣಗಳಲ್ಲಿ, ಗಾಳಿಯಿಲ್ಲದೆ ಉಸಿರಾಟಕ್ಕೆ ತೊಂದರೆಯಾಗಿ, ಆ ಕಂದಮ್ಮಗಳು ನಿತ್ರಾಣಗೊಂಡರು, ಅವರ ಆಟ ಅರ್ಧಕ್ಕೇ ನಿಂತುಹೋಯಿತು.

ಮಧ್ಯಾಹ್ನವಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಪೋಷಕರ ಎದೆ ಬಡಿತ ಹೆಚ್ಚಾಯಿತು. ಮಕ್ಕಳು ಎಲ್ಲಿ ಹೋದರು ಎಂದು ಕಣ್ಣೀರಿಡುತ್ತಾ, ನೆರೆಹೊರೆಯವರನ್ನು, ಸಂಬಂಧಿಕರನ್ನು ವಿಚಾರಿಸಿದರು. ಯಾವುದೇ ಸುಳಿವು ಸಿಗಲಿಲ್ಲ. ವಿಷಯ ತಿಳಿದು ಇಡೀ ಗ್ರಾಮವೇ ಒಂದಾಗಿ ಹುಡುಕಾಟಕ್ಕೆ ಕೈಜೋಡಿಸಿತು. ನದಿ, ಕಾಡು, ಹಳ್ಳ ಕೊಳ್ಳಗಳೆಲ್ಲೆಡೆ ಹುಡುಕಿದರೂ ಆ ಪುಟ್ಟ ಮಕ್ಕಳ ಸುಳಿವೇ ಸಿಗಲಿಲ್ಲ. ಕೊನೆಗೆ, ಯಾರೋ ಮಹಿಳಾ ಮಂಡಲ ಕಚೇರಿ ಬಳಿಯ ಆ ಹಳೆಯ ಕಾರಿನತ್ತ ಗಮನ ಹರಿಸಿದಾಗ, ಒಳಗೊಂದು ದೃಶ್ಯ ಕಂಡಿತು. ಆ ನಾಲ್ಕು ಮುಗ್ಧ ಜೀವಗಳು ಅರೆಪ್ರಜ್ಞಾ ಸ್ಥಿತಿಯಲ್ಲಿ, ನಿಶ್ಚಲವಾಗಿ ಬಿದ್ದಿದ್ದವು. ಕಾರಿನ ಕಿಟಕಿ ಒಡೆದು ಮಕ್ಕಳನ್ನು ಹೊರತೆಗೆದು, ಆಸ್ಪತ್ರೆಗೆ ಕೊಂಡೊಯ್ದರೂ ಕಾಲ ಮಿಂಚಿಹೋಗಿತ್ತು.

ವೈದ್ಯರು, ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಿದಾಗ, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ದುರಂತ ಸುದ್ದಿ ತಿಳಿದು ಇಡೀ ದ್ವಾರಪುಡಿ ಗ್ರಾಮವೇ ಮೌನಕ್ಕೆ ಶರಣಾಯಿತು. ಪ್ರತಿ ಮನೆಯೂ ಶೋಕದ ಗೂಡಾಗಿತ್ತು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತು.. “ಅಯ್ಯೋ ನಮ್ಮ ಕಂದಮ್ಮಗಳೇ!” ಎಂದು ಅವರು ಬಡಿದುಕೊಳ್ಳುತ್ತಿದ್ದರೆ, ನೋಡಿದವರ ಕಣ್ಣಲ್ಲೂ ನೀರು ಜಿನುಗುತ್ತಿತ್ತು. ಈ ದುರಂತ ಇಡೀ ಗ್ರಾಮವನ್ನೇ ತಲ್ಲಣಗೊಳಿಸಿತು. ಪೊಲೀಸರು ಈ ಮನಕಲಕುವ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು, ನಿರ್ಲಕ್ಷ್ಯಕ್ಕೆ ಕಾರಣರಾದವರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಆದರೆ, ಹಾರಿಹೋದ ಆ ಮುಗ್ಧ ಜೀವಗಳನ್ನು ಯಾವ ತನಿಖೆಯೂ ಮರಳಿ ತರಲಾರದು. ಈ ದುರಂತ ನಮ್ಮೆಲ್ಲರ ಕಣ್ಣು ತೆರೆಸಬೇಕಿದೆ. ಮಕ್ಕಳ ಸುರಕ್ಷತೆಯ ಬಗ್ಗೆ ಇನ್ನಷ್ಟು ಎಚ್ಚರ ವಹಿಸಬೇಕಾದ ಅನಿವಾರ್ಯತೆಯನ್ನು ಇದು ಮತ್ತೊಮ್ಮೆ ಈ ದುರಂತದೊಂದಿಗೆ ನೆನಪಿಸಿದೆ.

You may also like

News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ
News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು

You cannot copy content of this page