ಮಂಗಳೂರಿನ ಪಿಲಿಕುಳದಲ್ಲಿ ಸಾಕಷ್ಟು ಲೋಪದೋಷಗಳನ್ನು ಪತ್ತೆ ಹಚ್ಚಿದ ಲೋಕಾಯುಕ್ತ ಪೊಲೀಸರು
ಲೋಕಾಯುಕ್ತ ಕೇಂದ್ರ ಕಚೇರಿಗೆ ಸಮಗ್ರ ವರದಿ ರವಾನೆ ?

ಮಂಗಳೂರು ಲೋಕಾಯುಕ್ತ ಕಚೇರಿಯ ಅಧಿಕಾರಿಗಳು ಮೇ 23ರಂದು ಶುಕ್ರವಾರ ದಿಡೀರ್ ಪಿಲಿಕುಳಕ್ಕೆ ಭೇಟಿ ನೀಡಿ ಅಲ್ಲಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ನಡೆಸಿರುವಾಗ ಬಹಳಷ್ಟು ಲೋಪ ದೋಷಗಳನ್ನು ಪತ್ತೆ ಹಚ್ಚಿದ್ದಾರೆ.
1️. ಲೀಸಿಗೆ ಕೊಟ್ಟ ಹಲವು ಸಂಸ್ಥೆಗಳಿಂದ ಪಿಲಿಕುಳ ಪ್ರಾಧಿಕಾರವು ತೆರಿಗೆ ಹಣ ಸಂಗ್ರಹಿಸದೇ ಇರುವುದು ಕಂಡು ಬಂದಿದೆ.
2️. ಮೃಗಾಲಯದ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಆದೇಶವಾಗಿದ್ದರೂ ಕೂಡ, ಪಿಲಿಕುಳ ಪ್ರಾಧಿಕಾರವು ಹಸ್ತಾಂತರಿಸದೆ ವಿಳಂಬ ಧೋರಣೆ ಮಾಡಿರುವುದು ಕಂಡುಬಂದಿದೆ.


3️. ಮೃಗಾಲಯದಿಂದ ಹೆಚ್ಚಿನ ಆದಾಯ ಬರುತ್ತಿದ್ದರೂ ಕೂಡ ಪ್ರಾಧಿಕಾರವು ಮೃಗಾಲಯದ ಏಳಿಗೆಗೆ ಹಣವನ್ನು ವೆಚ್ಚ ಮಾಡುತ್ತಿರುವುದು ಕಂಡುಬರುವುದಿಲ್ಲ.
4️. ಪಿಲಿಕುಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಡಿಮೆ ವೇತನ ನೀಡುತ್ತಿದ್ದು, ಯಾವುದೇ ಆರೋಗ್ಯ ಸೌಲಭ್ಯವನ್ನು ಒದಗಿಸದೆ ಇರುವುದು ತಪಾಸಣೆಯಲ್ಲಿ ಕಂಡು ಬಂದಿದೆ.
5️. ಟೆಂಡರ್ ಪ್ರಕ್ರಿಯೆಯಲ್ಲಿ ಲೋಪಗಳು ಕಂಡುಬಂದಿದ್ದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ವರದಿಯನ್ನು ನಿವೇದಿಸಲಾಗುವುದು ಎಂಬುದಾಗಿ ಕುಮಾರಚಂದ್ರ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು (ಪ್ರಭಾರ) ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಇವರು ತಿಳಿಸಿದ್ದಾರೆ.

ನಡೆಸಿದ ತಪಾಸಣೆಯಲ್ಲಿ ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ.ರವರು ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ. ಎನ್. ರವರು ಇತರ ಸಿಬ್ಬಂದಿಯವರೊಂದಿಗೆ ಇದ್ದರು.




