ಕೊಳ್ತಮಜಲು ಅಬ್ದುಲ್ ರಹೀಂ ನಿವಾಸಕ್ಕೆ ಹಾಗೂ ಗಾಯಗೊಂಡ ಕಲಂದರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ MLC ಐವನ್ ಡಿಸೋಜ ಭೇಟಿ
ಕೊಳ್ತಮಜಲು ಅಬ್ದುಲ್ ರಹೀಂರವರನ್ನು ಗುಂಪೊಂದು ವ್ಯಾಪಾರ ದೃಷ್ಟಿಯಿಂದ ಕರೆದು ವಂಚನೆ ಮಾಡಿ ಕೊಲೆ ಮಾಡುವ ಮೂಲಕ ಸಮಾಜದಲ್ಲಿ ಮಾಡಿದ ಹೇಯ ಕೃತ್ಯವನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜರವರು ತೀವ್ರವಾಗಿ ಖಂಡಿಸಿದ್ದಾರೆ.

ಇಂದು ಮೇ 29ರಂದು ಗುರುವಾರ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ನೀಡಿದರಲ್ಲದೇ ಇದರ ಹಿಂದೆ ಇರುವ ಶಕ್ತಿಗಳನ್ನು ಯಾವುದೇ ಮುಲಾಜಿಲ್ಲದೇ ಮಟ್ಟಹಾಕಲು ಸರಕಾರವು ಬದ್ದವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿಸೋಜರವರು ಸಮಾಜದಲ್ಲಿ ಘಾತುಕ ಶಕ್ತಿಗಳು ಮತ್ತು ಧರ್ಮದ ಜಾತಿಯ ಆಧಾರದಲ್ಲಿ ನಡೆಯುತ್ತಿರುವ ಗಲಭೆಗಳು ಸಮಾಜಕ್ಕೆ ಡೊಡ್ಡ ಕಂಟಕವಾಗಿ ಮಾರ್ಪಟ್ಟಿದೆ. ಇದನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ ಇದರ ಹಿಂದೆ ಇರುವ ಘಾತುಕ ಶಕ್ತಿಯನ್ನು ಹುಡುಕಿ ಮಟ್ಟಹಾಕಲು ಸರಕಾರ ಬದ್ದವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಿಳಿಸಲಾಗಿದೆ. ಗೃಹಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಧಾರೆ. ಶಾಂತಿ ನೆಲೆಸಲು ಬೇಕಾದ ಕ್ರಮ ಕೈಗೊಳ್ಳುವುದರ ಜೊತೆಗೆ ಪ್ರಚೋದನಕಾರಿ ಭಾಷಣಗಳ ಬಗ್ಗೆ ಪೋಲಿಸರು ತೆಗೆದುಕೊಳ್ಳಬೇಕಾದ ತೀರ್ಮಾನದ ಬಗ್ಗೆ ಸರಕಾರವು ಪುನರ್ಪರಿಶೀಲನೆ ನಡೆಸಲಿದೆ ಎಂದು ಐವನ್ ಡಿಸೋಜರವರು ತಿಳಿಸಿದರು.

ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದರ ಜೊತೆಗೆ ಇದೊಂದು ಘಟನೆಯಿಂದ ಅಮಾಯಕರು ಬಲಿಯಾಗುತ್ತಿರುವುದು ಬೇಸರದ ಸಂಗತಿ ಮತ್ತು ಖಂಡನೀಯ. ಹಾಗೇಯೆ ಆಸ್ಪತ್ರೆಗೆ ತೆರಳಿ ಗಾಯಗೊಂಡ ಕಲಂದರ್ರವರನ್ನು ಭೇಟಿ ಮಾಡಿ ಶೀಘ್ರ ಗುಣಮುಖರಾಗಲೆಂದು ಹಾರೈಸಿ, ಚಿಕಿತ್ಸೆಯ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಸರಕಾರ ಕೂಡಲೇ ಸರಕಾರ ತೀರ್ಮಾನ ತೆಗೆದುಕೊಳ್ಳುವುದು ಎಂದು ಐವನ್ ಡಿಸೋಜ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಇಬ್ರಾಹಿಂ ಅಡ್ಡೂರು, ವಲಯ ಅಧ್ಯಕ್ಷ ವಸಂತ, ಪಂಚಾಯತ್ ಸದಸ್ಯರಾದ ಏ.ಕೆ. ಅಶ್ರಫ್, ಹನೀಫ್, ಅಬಿಬುಲ್ಲಾ ಕಣ್ಣೂರು ಮುಂತಾದವರು ಜೊತೆಗಿದ್ದರು.




