ಕಥೊಲಿಕ್ ಸಭಾ ಕೇಂದ್ರೀಯ ನೂತನ ಪದಾಧಿಕಾರಿಗಳಿಂದ ಬಿಷಪ್ ಭೇಟಿ
“ಕಥೊಲಿಕ ಸಮುದಾಯದೊಳಗೆ ಸಾಮಾಜಿಕ ಕಾರ್ಯವನ್ನು ಮಾಡಲು ಸ್ವಯಂಸೇವಕರಾಗಿ ಸಾಮಾಜಿಕ ನ್ಯಾಯಕ್ಕಾಗಿ ಸಲಹೆ ನೀಡುವುದು ಮತ್ತು ನಂಬಿಕೆ ಆಧಾರಿತ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಪರಿಗಣಿಸಿ ನೀವು ಸಾಮಾಜಿಕ ಕಾರ್ಯವನ್ನು ಮುಂದುವರಿಸಬೇಕು. ಆಧ್ಯಾತ್ಮಿಕತೆ ಸಂಯೋಜಿಸುವಂತಹ ಸೃಜನಾತ್ಮಕತೆಯ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿರಿ. ನಿಮ್ಮ ಕೆಲಸದಲ್ಲಿ ನಮ್ರತೆ, ಕ್ಷಮೆ ಮತ್ತು ಭರವಸೆಯಂತಹ ಕ್ರಿಸ್ತನ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಮತ್ತು ದುರ್ಬಲ ವ್ಯಕ್ತಿಗಳು ಮತ್ತು ಸಮುದಾಯಗಳ ಅಗತ್ಯಗಳಿಗೆ ಆದ್ಯತೆ ನೀಡಿ” ಎಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಘಟನೆಯ ನೂತನ ಪದಾಧಿಕಾರಿಗಳಿಗೆ ಹೇಳಿದರು.



ಇಂದು ಮೇ 29ರಂದು ಗುರುವಾರ ಕಥೊಲಿಕ್ ಸಭಾ ಮಂಗ್ಟುರ್ ಪ್ರದೇಶ್ (ರಿ.) ಸಂಘಟನೆಯ 2025-26 ನೇ ವರ್ಷಕ್ಕೆ ಹೊಸದಾಗಿ ಚುನಾಯಿತರಾದ ಪದಾಧಿಕಾರಿಗಳು ಬಿಷಪ್ ರವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ವಾರ್ಷಿಕ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಿದರು. ಬಿಷಪ್ ಭೇಟಿಯ ನಂತರ ಧರ್ಮಕ್ಷೇತ್ರದ ಶ್ರೇಷ್ಠ ಗುರು ಮೊನ್ಸಿಂಜೊರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ, ಚಾನ್ಸಲರ್ ಅತೀ ವಂದನೀಯ ಫಾದರ್ ವಿಕ್ಟರ್ ಡಿಸೋಜ, ಪ್ರೊಕ್ಯೂರೇಟರ್ ವಂದನೀಯ ಫಾದರ್ ಜಗದೀಶ್ ಪಿಂಟೊ, ಎಸ್ಟೇಟ್ ಮ್ಯಾನೆಜರ್ ವಂದನೀಯ ಫಾದರ್ ಮ್ಯಾಕ್ಸಿಮ್ ರೊಸಾರಿಯೊ ಮತ್ತು ರಾಕ್ಣೊ ಕೊಂಕಣಿ ವಾರಪತ್ರಿಕೆಯ ಸಂಪಾದಕರಾಗಿರುವ ವಂದನೀಯ ಫಾದರ್ ರೂಪೇಶ್ ಮಾಡ್ತಾ ಇವರನ್ನು ಭೇಟಿ ಮಾಡಿ ಆಶೀರ್ವಾದಗಳನ್ನು ಪಡೆದರು ಹಾಗೂ ಮುಂದಿನ ಯೋಜನೆಗಳಿಗೆ ಸಹಕಾರ ಕೋರಿದರು.





ಇವರೆಲ್ಲರೂ ತಮ್ಮ ಆಶೀರ್ವಾದಗಳನ್ನು ನೀಡಿ ಕಳೆದ 46 ವರ್ಷಗಳಿಂದ ಸಮಾಜ ಸೇವೆಯ ಕೆಲಸಗಳನ್ನು ಮಾಡುತ್ತಾ ಬಂದಿರುವಿರಿ ಎಂದು ಹಾರೈಸಿ ಮುಂದಿನ ಯೋಜನೆಗಳಿಗೆ ಶುಭವನ್ನು ಕೋರಿದರು ಹಾಗೂ ನಿಮ್ಮ ಮುಂದಾಳತ್ವದಲ್ಲಿ ಕಥೊಲಿಕ್ ಸಭೆಯ ಕೀರ್ತಿ ಇನ್ನಷ್ಟು ಮೇಲ್ದರ್ಜೆಗೆ ಏರಲಿ ಎಂದು ಸಹಕಾರದ ಭರವಸೆಯನ್ನು ಕೊಟ್ಟರು.

ಭೇಟಿಯ ಸಂದರ್ಭದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ದಾನ್ಹಾ, ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಜೆ, ಪ್ರಥಮ ಉಪಾಧ್ಯಕ್ಷ ಲಾರೆನ್ಸ್ ಡಿಸೋಜ ಸುರತ್ಕಲ್, ದ್ವಿತೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, ಸಹ ಕಾರ್ಯದರ್ಶಿ ಓಲ್ವಿನ್ ರೊಡ್ರಿಗಸ್ ಅಲಂಗಾರ್, ಖಜಾಂಜಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್ ತಲಪಾಡಿ, ಸಹ ಖಜಾಂಚಿ ಲವೀನಾ ಗ್ರೆಟ್ಟಾ ಡಿಸೋಜ ರಾಣಿಪುರ ಮತ್ತು ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಉಪಸ್ಥಿತರಿದ್ದರು.




