ಕೊಲೆ ಆರೋಪಿಗಳಿಗೆ ಸಮುದಾಯದ ಸಂಘಟನೆಗಳ ನಿರಂತರ ಸಂಪರ್ಕ – ಜಿಲ್ಲಾ SP ಡಾ. ಅರುಣ್ ಕೆ.
ಮಂಗಳೂರು ಸಿಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ, ಹಲವು ತಿಂಗಳಿನಿಂದ ಕೆಲವು ಕೊಲೆಗಳಿಂದಾಗಿ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಬಂದಿದೆ. ಪೋಲಿಸರು ಎಲ್ಲಾ ಕೊಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ್ದಾರೆ. ಎಲ್ಲಾ ಆರೋಪಿಗಳು ಸಮುದಾಯದ ಸಂಘಟನೆಗಳ ಸಂಪರ್ಕದಲ್ಲಿರುವುದು ತನಿಖೆಯಿಂದ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಸಮುದಾಯದ ಸಂಘಟನೆಗಳಲ್ಲಿ ಇರುವವರ ದಿನನಿತ್ಯದ ಸ್ಥಳ ಹಾಗೂ ಚಟುವಟಿಕೆಗಳನ್ನು ಪರಿಶೀಲನೆ ಮಾಡಲು ಅವರೆಲ್ಲರ ಹೆಸರಿನ ಪಟ್ಟಿಮಾಡಿ ಜಿಲ್ಲೆಯಲ್ಲಿರುವ ಎಲ್ಲಾ ಸಮುದಾಯಗಳ ಸಂಘಟನೆಗಳಿಗೆ ಹೋಗಿ ಪರಿಶೀಲಿಸಲು ನಿರ್ದೇಶನವನ್ನು ನೀಡಲಾಗಿದೆ ಎಂದು ಜಿಲ್ಲಾ ನೂತನ SP ಡಾ. ಅರುಣ್ ಕೆ. ತಿಳಿಸಿದ್ದಾರೆ.

ಕಾನೂನು ಹಾಗೂ ಸುವ್ಯವಸ್ಥೆಗೆ ಅಡ್ಡಿ ಪಡಿಸುವವರನ್ನು ನಾವು ನಿರಂತರವಾಗಿ ಪರಿಶೀಲನೆ ಮಾಡುತ್ತಾ ಇರುತ್ತೇವೆ. ಹೀಗೆ ಮಾಡುತ್ತಾ ಇರುವಾಗ ನಿನ್ನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸ್ ಸ್ಟೇಷನ್ ಮುಂದೆ ಅಕ್ರಮವಾಗಿ ಗುಂಪು ಸೇರಿ ಪ್ರತಿಭಟನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ 39/2025 ದಾಖಲಾಗಿದೆ. ಕಲಂ 189(2),190 BNS-2023 ರಂತೆ ಪ್ರಕರಣ ದಾಖಲಿಸಲಾಗಿದೆ. ಮುಂದೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಮುಂದೆ ಇಂತಹ ಘಟನೆಗಳನ್ನು ತಡೆಗಟ್ಟಲು ಸೂಕ್ತ ಕ್ರಮವಾಗಿ ಈ ನಿರ್ದೇಶನವು ಅಗತ್ಯವಾಗಿದೆ. ಇದಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾನೂನು ಹಾಗೂ ಸುವ್ಯವಸ್ಥೆಯು ಸಂಪೂರ್ಣವಾಗಿ ಸುರಕ್ಷಿತವಾಗುವವರೆಗೆ ಈ ಪ್ರಿವೆಂಟಿವ್ ಆ್ಯಕ್ಷನ್ ಮುಂದುವರೆಯಲಿದೆ.

ಇದಕ್ಕೆ ವಿರುದ್ಧವಾಗಿ ಕಾನೂನುಬಾಹಿರ ಚಟುವಟಿಕೆಗಳನ್ನು ಮುಂದುವರಿಸಿದರೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.




