ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿದಾರಿಗೆ ತರಲು ಮುನ್ನೆಚ್ಚರಿಕೆ ಕ್ರಮ
36 ಮಂದಿಯನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಲು ಪೋಲೀಸರಿಂದ ಪಟ್ಟಿ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ಹೆಚ್ಚಾಗುತ್ತಿದ್ದು, ತಿಂಗಳ ಅಂತರದಲ್ಲಿ ಮೂರು ಕೊಲೆಗಳು ನಡೆದ ಬೆನ್ನಲ್ಲೇ ಕೋಮು ಭಾವನೆ ಕೆರಳಿಸುವವರ ವಿರುದ್ಧ ಕ್ರಮಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸರಕಾರವು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ನೂತನ ಪೊಲೀಸ್ ಕಮಿಷನರ್ ಹಾಗೂ ನೂತನ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಗೆ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಇದೀಗ ಜಿಲ್ಲೆಯಲ್ಲಿರುವ ಅಪರಾಧ ಕೃತ್ಯ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸೇರಿ ಸಮುದಾಯಗಳ ನಡುವೆ ಅಶಾಂತಿಯನ್ನುಂಟುಮಾಡುವ ದ್ವೇಷ ಭಾಷಗಳನ್ನು ಮಾಡಿರುವ ವ್ಯಕ್ತಿಗಳ ಪಟ್ಟಿ ತಯಾರಿಸಿ ಅವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಲು ಮುಂದಿನ ಕ್ರಮಕೈಗೊಂಡಿದ್ದಾರೆ. ಸದ್ಯ ಪೊಲೀಸರು ಬಿಡುಗಡೆ ಮಾಡಿರುವ ಪಟ್ಟಿ ಇಡೀ ಜಿಲ್ಲೆಯಲ್ಲಿ ಸುದ್ದಿಗೆ ಗ್ರಾಸವಾಗಿದೆ.

ವಿಶ್ವ ಹಿಂದೂ ಪರಿಷತ್ ಮುಖಂಡ ಭರತ್ ಕುಮ್ಡೇಲು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ಮಹೇಶ್ ತಿಮರೋಡಿ ಸೇರಿದಂತೆ ಹಲವರ ಹೆಸರು ಈ ಪಟ್ಟಿಯಲ್ಲಿದೆ. ಗಡಿಪಾರಿಗೆ ಪೋಲೀಸರು ಸಿದ್ಧಪಡಿಸಿದ ಪಟ್ಟಿಯನ್ನು ಪೋಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಸಹಾಯಕ ಆಯುಕ್ತರ ಮೂಲಕ ಈಗಾಗಲೇ ಪಟ್ಟಿಯಲ್ಲಿರುವವರಿಗೆ ನೋಟಿಸ್ ನೀಡಲಾಗಿದೆ. ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ, ಬೆಳ್ಳಾರೆ ಮತ್ತು ವಿಟ್ಲ ಠಾಣೆ ವ್ಯಾಪ್ತಿಯ ಹಳೆ ಪ್ರಕರಣಗಳಲ್ಲಿರುವ ಹಿಂದೂ ಮತ್ತು ಮುಸ್ಲಿಂ ಸಂಘಟನೆ ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರ ಪಟ್ಟಿ ತಯಾರು ಮಾಡಿದ್ದು ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಿದೆ. ಈ ಪಟ್ಟಿಯಲ್ಲಿ ಒಟ್ಟು 36 ಮಂದಿ ಇದ್ದಾರೆ. ಹೊಸದಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈಗಾಗಲೇ ಇಬ್ಬರು ಐಪಿಎಸ್ ಅಧಿಕಾರಿಗಳು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರಿದಾರಿಗೆ ತರಲು ಶತಗತಾ ಪ್ರಯತ್ನಿಸುತ್ತಿದ್ದಾರೆ.

ಮುಂಡೂರು ಗ್ರಾಮದ ಪುತ್ತಿಲ ಮನೆ ನಿವಾಸಿ ಅರುಣ್ ಕುಮಾರ್ ಪುತ್ತಿಲ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಆದೇಶ ಹೊರಡಿಸುವ ಕುರಿತು ಕಂದಾಯ ಇಲಾಖೆ ಸಹಾಯಕ ಆಯುಕ್ತರು ಜೂನ್ 6ರಂದು ವಿಚಾರಣೆಯನ್ನು ನಿಗಧಿಪಡಿಸಿದ್ದಾರೆ ಮತ್ತು ತಪ್ಪದೇ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಅರುಣ್ ಪುತ್ತಿಲ ಅವರಿಗೆ ಕರ್ನಾಟಕ ಪೊಲೀಸ್ ಅಧಿನಿಯಮ, 1963 ಕಲಂ: 58ರ ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಈ ವೇಳೆ ಅವರು ಸ್ವತಃ ಅಥವಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಲು ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಸದರಿ ಪ್ರಕರಣದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಭಾವಿಸಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.

ವಿವಿಧ ಪೊಲೀಸ್ ಠಾಣೆಗಳಿಂದ ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಲಾದ ಪಟ್ಟಿ ಇಂತಿವೆ.
ಬಂಟ್ವಾಳ ನಗರ ಠಾಣೆ: ಹಸೈನಾರ್, ಮುಹಮ್ಮದ್ ಸಫ್ವಾನ್, ರಾಜು ಯಾನೆ ರಾಜೇಶ್, ಭುವಿ ಯಾನೆ ಭುವಿತ್ ಶೆಟ್ಟಿ.
ಬಂಟ್ವಾಳ ಗ್ರಾಮಾಂತರ ಠಾಣೆ: ಪವನ್ ಕುಮಾರ್, ಚರಣ್ ಯಾನೆ ಚರಣ್ ರಾಜ್, ಅಬ್ದುಲ್ ಲತೀಫ್, ಮುಹಮ್ಮದ್ ಅಶ್ರಫ್, ಮೊಯ್ದಿನ್ ಅದ್ನಾನ್ ಯಾನೆ ಅದ್ದು, ಭರತ್ ರಾಜ್ ಬಿ ಯಾನೆ ಭರತ್ ಕುಮ್ಡೇಲು,
ವಿಟ್ಲ ಪೊಲೀಸ್ ಠಾಣೆ: ಗಣೇಶ ಯಾನೆ ಗಣೇಶ ಪೂಜಾರಿ, ಅಬ್ದುಲ್ ಖಾದರ್ ಯಾನೆ ಶೌಕತ್, ಚಂದ್ರಹಾಸ,
ಪೂಂಜಾಲಕಟ್ಟೆ ಠಾಣೆ: ಅಶ್ರಫ್ ಬಿ ಯಾನೆ ಗರಗಸ ಅಶ್ರಫ್.
ಬೆಳ್ತಂಗಡಿ ಠಾಣೆ: ಮನೋಜ್ ಕುಮಾರ್, ಮಹೇಶ ಶೆಟ್ಟಿ ತಿಮರೋಡಿ
ಪುತ್ತೂರು ನಗರ ಠಾಣೆ: ಅರುಣ್ ಕುಮಾರ್ ಪುತ್ತಿಲ, ಹಕೀಂ ಕೂರ್ನಡ್ಕ ಯಾನೆ ಅಬ್ದುಲ್ ಹಕೀಂ, ಅಜಿತ್ ರೈ, ಮನೀಶ್ ಎಸ್., ಅಬ್ದುಲ್ ರಹಿಮಾನ್, ಕೆ. ಅಝೀಝ್,
ಪುತ್ತೂರು ಗ್ರಾಮಾಂತರ ಠಾಣೆ: ಕಿಶೋರ್, ರಾಕೇಶ್ ಕೆ., ನಿಶಾಂತ್ ಕುಮಾರ್,

ಕಡಬ ಠಾಣೆ : ಮುಹಮ್ಮದ್ ನವಾಝ್,
ಉಪ್ಪಿನಂಗಡಿ ಠಾಣೆ: ಸಂತೋಷ್ ಕುಮಾರ್ ರೈ ಯಾನೆ ಸಂತು ಅಡೆಕ್ಕಲ್, ಜಯರಾಮ, ಸಂಶುದ್ದೀನ್, ಸಂದೀಪ್, ಮುಹಮ್ಮದ್ ಶಾಕಿರ್, ಅಬ್ದುಲ್ ಅಝೀಝ್ ಯಾನೆ ಕರಾಯ ಅಝೀಝ್,
ಸುಳ್ಯ ಠಾಣೆ : ಲತೇಶ್ ಗುಂಡ್ಯ, ಮನೋಹರ ಯಾನೆ ಮನು
ಬೆಳ್ಳಾರೆ ಠಾಣೆ : ಪ್ರಸಾದ್, ಶಮೀರ್ ಕೆ.




