ಮುಡಿಪು ಪುಣ್ಯಕ್ಷೇತ್ರದ ವಠಾರದಲ್ಲಿ ಕಥೊಲಿಕ್ ಸಭಾ ದಕ್ಷಿಣ ವಲಯ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಪರಿಸರ ದಿನ ಆಚರಣೆ
ನಮ್ಮ ಪೀಳಿಗೆಯ ಉಳಿವಿಗಾಗಿ ಗಿಡಮರಗಳನ್ನು ಬೆಳೆಸಿ ಪೋಷಿಸಿ – AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ಮುಡಿಪುವಿನಲ್ಲಿರುವ ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ವಠಾರದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ದಕ್ಷಿಣ ವಲಯ ಸಮಿತಿಯ ನೇತೃತ್ವದಲ್ಲಿ ಕಥೊಲಿಕ್ ಸಭಾ ಮುಡಿಪು ಘಟಕ ಹಾಗೂ ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಜೂನ್ 29ರಂದು ಆದಿತ್ಯವಾರ ಪರಿಸರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ರೆಕ್ಟರ್ ಆಗಿರುವ ವಂದನೀಯ ಫಾದರ್ ಆಸಿಸ್ಸಿ ರೆಬೆಲ್ಲೊರವರ ಆಶೀರ್ವಚನದ ನುಡಿಗಳಿಂದ ಪ್ರಾರ್ಥನೆ ಗೈದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಡೊಲ್ಫಿ ಡಿಸೋಜರವರು ಸರ್ವರನ್ನು ಸ್ವಾಗತಿಸಿದರು.














ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಭಾರತ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷರಾಗಿರುವ ಆಲ್ವಿನ್ ಡಿಸೋಜ ಪಾನೀರ್ ರವರು ಮಾತನಾಡಿ, ಈ ಪ್ರಕೃತಿಯ ಸಮತೋಲನ ಉಳಿಸಲು ಹಾಗೂ ನಮ್ಮ ಮತ್ತು ನಮ್ಮ ಪೀಳಿಗೆಯ ಉಳಿವಿಗಾಗಿ ಗಿಡಮರಗಳನ್ನು ಬೆಳೆಸಿ ಪೋಷಿಸಬೇಕು. ಗಿಡಗಳನ್ನು ನೆಟ್ಟರೆ ಸಾಕಾಗುವುದಿಲ್ಲ ಅವುಗಳನ್ನು ಸಂರಕ್ಷಿಸಬೇಕು ಎಂದು ಕರೆಕೊಟ್ಟರು. ಇನ್ನೋರ್ವ ಅತಿಥಿ ಕೋಟೆಕಾರು ಉಪ ವಲಯ ಅರಣ್ಯಧಿಕಾರಿ ಮೆಹಬೂಬ ಸಾಬರವರು ಮಾತನಾಡುತ್ತಾ ಇಂದು ನೆಟ್ಟ ಗಿಡಗಳನ್ನು ಪ್ರತಿಯಬ್ಬರೂ ದತ್ತು ತೆಗೆದುಕೊಂಡು ಬೇಸಿಗೆ ಕಾಲದಲ್ಲಿ ಅದಕ್ಕೆ ನೀರು ಹಾಕಿ ಸಂರಕ್ಷಿಸಬೇಕು. ದಿನಗಳು ಕಳೆದಂತೆ ವಿವಿಧ ಕಾರಣಗಳಿಂದ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಖಾಲಿ ಜಾಗದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಸಸ್ಯ ಸಂಕುಲ ಹೆಚ್ಚಾಗುವಂತೆ ಮುತುವರ್ಜಿ ವಹಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಮುಡಿಪು ಸಂತ ಜೋಸೆಫ್ ವಾಜ್ ಚರ್ಚ್ ಇದರ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಡಿಸೋಜ, ಕಾರ್ಯದರ್ಶಿ ಸಂತೋಷ್ ಡಿಸೋಜ, ಕಥೊಲಿಕ್ ಸಭಾ ಮುಡಿಪು ಘಟಕದ ಅಧ್ಯಕ್ಷ ರೋಶನ್ ಡಿಸೋಜ, ಹೋಲಿ ಫ್ಯಾಮಿಲಿ ಕಾನ್ವೆಂಟ್ ಸುಪಿರಿಯರ್ ಭಗಿನಿ ಫಾತಿಮಾ, ಕಥೊಲಿಕ್ ಸಭಾ ದಕ್ಷಿಣ ವಲಯದ ಕಾರ್ಯದರ್ಶಿ ಟ್ರೆಸ್ಸಿ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.














ಸಭಾ ಕಾರ್ಯಕ್ರಮದ ನಂತರ ಗಣ್ಯ ಅತಿಥಿಗಳು ಗಿಡನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ನಂತರ ಕಥೊಲಿಕ್ ಸಭಾ ಸಂಘಟನೆಯ ಸದಸ್ಯರು ಪುಣ್ಯ ಕ್ಷೇತ್ರದ ವಠಾರದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ಸುಮಾರು 300 ಗಿಡಗಳನ್ನು ನೆಟ್ಟರು. ಕಥೊಲಿಕ್ ಸಭಾ ಮಂಗ್ಳುರ್ ದಕ್ಷಿಣ ವಲಯದ ಖಜಾಂಚಿ ಫೆಲಿಕ್ಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಟ್ರೆಸ್ಸಿ ರೊಡ್ರಿಗಸ್ ಧನ್ಯವಾದ ಸಮರ್ಪಿಸಿದರು.




