ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಜುಲಾಯಿ 5ರಂದು ಶನಿವಾರ ಪತ್ರಿಕಾ ದಿನಾಚರಣೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಶಾಸಕ ಹರೀಶ್ ಪೂಂಜಾ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇಂದು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದೆ, ಈ ಸವಾಲುಗಳ ನಡುವೆಯೂ ಪತ್ರಿಕೆ ತನ್ನ ಮೌಲ್ಯ ಹಾಗೂ ಘನತೆ ಉಳಿಸಿಕೊಂಡು ಮುನ್ನಡೆಯುತ್ತಿದೆ. ಪತ್ರಿಕೆಗಳು ಸಮಾಜಕ್ಕೆ ಸತ್ಯ ವಿಷಯಗಳನ್ನು ತಿಳಿಸಬೇಕು. ಆದರೆ ಕೆಲವೊಂದು ಪತ್ರಿಕೆಗಳು ತನ್ನ ಪತ್ರಿಕಾಧರ್ಮ ಬಿಟ್ಟು ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಾಹೀರಾತು ನೀಡಿಲ್ಲ ಎಂದು ಆರ್.ಟಿ.ಐ.ಯಲ್ಲಿ ಅರ್ಜಿ ಕೊಟ್ಟು ಆರ್.ಟಿ.ಐ. ಕಾರ್ಯಕರ್ತರಾಗುತ್ತಿರುವುದು ಸಮಾಜಕ್ಕೆ ಅಪಾಯಕಾರಿ ಎಂದು ಶಾಸಕರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಭಾಗವಹಿಸಿದ್ದರು. ಸಮಾರಂಭದಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಜಿತು ನಿಡ್ಲೆರವರನ್ನು ಸನ್ಮಾನಿಸಲಾಯಿತು. ಹಾಗೆಯೇ 2024-25 ನೇ ಸಾಲಿನಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಾದ ಮನಶ್ರೀ ಬದನಾಜೆ, ಅರ್ಮಾನ್ ರಿಯಾಜ್ ಮತ್ತು ಸುಪ್ರಿಯಾ ಎಸ್. ಇವರನ್ನು ಅಭಿನಂದಿಸಲಾಯಿತು. ಪತ್ರಕರ್ತರ ಸಂಘದ ಸದಸ್ಯರಾಗಿರುವ ಮನೋಹರ್ ಬಳಂಜ ಇವರ ಪುತ್ರಿ ದಿತಿ ಹೆಸರಿನಲ್ಲಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಹಾಗೂ ಜಿಲ್ಲಾ ಸಂಘದ ಪತ್ರಕರ್ತರಾಗಿರುವ ದಿ. ಭುವನ್ ಪುದುವೆಟ್ಟು ಇವರ ಕುಟುಂಬಕ್ಕೆ ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು.

ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ತುಕಾರಾಮ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ್ ಬಳೆಂಜ ಸಂದೇಶ ವಾಚಿಸಿದರು. ಮನೋಹರ ಲಿಖಿತ ದಂಪತಿಗಳು ವರ್ಷಂಪ್ರತಿ ಕೊಡಮಾಡುವ ದಿತಿ ಸಾಂತ್ವನ ನಿಧಿಯ ಬಗ್ಗೆ ಅಶ್ರಫ್ ಆಲಿಕುಂಞಿ ಮಾಹಿತಿ ನೀಡಿದರು. ಅಚ್ಚುಶ್ರೀ ಬಾಂಗೇರು ಸನ್ಮಾನಿತರನ್ನು ಪರಿಚಯಿಸಿದರು. ಸಂಘದ ಉಪಾಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಶಿರ್ಲಾಲು ವಂದಿಸಿದರು. ಸಂಘದ ಸದಸ್ಯರಾದ ಬಿ.ಎಸ್. ಕುಲಾಲ್, ಪುಷ್ಪರಾಜ್ ಶೆಟ್ಟಿ, ಆರ್.ಎನ್. ಪೂವಣಿ, ದೀಪಕ್ ಅಠವಳೆ, ಶಿಬಿ ಧರ್ಮಸ್ಥಳ, ಶ್ರೀನಿವಾಸ ತಂತ್ರಿ, ಚೈತ್ತೇಶ್ ಇಳಂತಿಲ, ಹೃಷಿಕೇಶ್ ಧರ್ಮಸ್ಥಳ, ಧನಕೀರ್ತಿ ಆರಿಗಾ, ಎನ್.ಸಿ. ಸಂಜೀವ ನೆರಿಯ ಸಹಕರಿಸಿದರು.




