ಕುಮುಟಾದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧೀಶರಿಂದ ಚಾತುರ್ಮಾಸ್ಯ ವ್ರತಾಚರಣೆ ಆರಂಭ
“ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮೌಲ್ಯಾ ಧಾರಿತ ಚಿಂತನೆಗಳೊಂದಿಗೆ ನಡೆಯುವ ಚಾತುರ್ಮಾಸ್ಯವು ಪರಿಸರದ ಧನಾತ್ಮಕ ಕ್ರಿಯೆಗಳ ಜೊತೆಗೆ ಧರ್ಮ ಜಾಗೃತಿಗೆ ಕಾರಣವಾಗುತ್ತದೆ” ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜ ಹೇಳಿದರು. ಅವರು ಶ್ರೀರಾಮ ಕ್ಷೇತ್ರದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಬಾರಿ ಆರನೇ ವರ್ಷದ 42 ದಿನಗಳ ಚಾತುರ್ಮಾಸ್ಯ ಜುಲಾಯ್ 10ರಿಂದ ಆಗಸ್ಟ್ 20ರವರೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೋನಳ್ಳಿ ವನದುರ್ಗಾ ದೇವಾಲಯದಲ್ಲಿ ಜರಗಲಿರುವುದು.



ಕಾರ್ಯಕ್ರಮವನ್ನು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಮಾಂಕಾಳ್ ಎಸ್. ವೈದ್ಯ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ವಹಿಸಲಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳ ಶಾಸಕರು, ಸಂಸದರು, ಎಂ.ಎಲ್.ಸಿ.ಗಳು, ಸಚಿವರು, ಮಾಜಿ ಸಚಿವರ ಸಹಿತ ಅನೇಕ ಗಣ್ಯರು ಹಾಗೂ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರತಿದಿನ ಭಜನೆ, ಪಾದಪೂಜೆ, ಯಕ್ಷಗಾನ, ಭರತನಾಟ್ಯ, ಧಾರ್ಮಿಕ ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಶ್ರೀ ದೇವಲಿಂಗೇಶ್ವರ ಭಕ್ತ ಮಂಡಳಿ ದೇವರಗುಡ್ಡೆ ಇದರ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಸಂಚಾಲಕ ನವೀನ್ ಪ್ರಕಾಶ್, ಕಾರ್ಯದರ್ಶಿ ಸುನಿಲ್ ಕನ್ಯಾಡಿ ಹಾಗೂ ಉಪಾಧ್ಯಕ್ಷ ರವೀಂದ್ರ ಆರ್ಲ ಉಪಸ್ಥಿತರಿದ್ದರು.

ಚಾತುರ್ಮಾಸ್ಯ ಸಮಯ ಪ್ರತಿ ಹುಣ್ಣಿಮೆ, ಅಮಾವಾಸ್ಯೆ, ಏಕಾದಶಿಯಂದು ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಮೌನ ಚಾತುರ್ಮಾಸ್ಯ ಇರುತ್ತದೆ. ಭಕ್ತಿ ಯೋಗ, ಕರ್ಮ ಯೋಗ, ಜ್ಞಾನ ಯೋಗಕ್ಕೆ ಆಧ್ಯಾತ್ಮಿಕ ಮೌಲ್ಯಗಳನ್ನು ಅನುಸರಿಸುವುದು ಮುಖ್ಯವಾಗಿದೆ. ನಾಲ್ಕು ಚಾತುರ್ಮಾಸ್ಯಗಳನ್ನು ಕನ್ಯಾಡಿಯ ಗುರುದೇವ ಮಠದಲ್ಲೇ ನೆರವೇರಿಸಲಾಗಿದ್ದು, ಕಳೆದ ವರ್ಷ ಭಟ್ಕಳದಲ್ಲಿ ಚಾತುರ್ಮಾಸ್ಯ ನಡೆದಿತ್ತು. ಮುಂದಿನ ವರ್ಷಗಳಲ್ಲಿ ಚಾತುರ್ಮಾಸ್ಯವನ್ನು ಅಯೋಧ್ಯೆ, ಹರಿದ್ವಾರ, ನೈಮಿಷಾರಣ್ಯ, ವಾರಣಾಸಿ ಮೊದಲಾದ ಸ್ಥಳಗಳಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.




