ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ – ಪ್ರಕರಣ ದಾಖಲು – ಆರೋಪಿ ವಶಕ್ಕೆ
ಬಾಕಿ ಇರಿಸಿದ ದಿನಸಿ ಖರೀದಿ ದುಡ್ಡನ್ನು ಕೇಳಿದ್ದಕ್ಕೆ ಬೆಳ್ತಂಗಡಿ ಕುವೆಟ್ಟು ಗ್ರಾಮದ 50 ವರ್ಷ ಪ್ರಾಯದ ಸದಕುತುಲ್ಲ ಎಂಬವರ ಅಂಗಡಿಗೆ ಉಮೇಶ್ ಬಂಗೇರ ಎಂಬಾತನು ಬೆಂಕಿ ಹಚ್ಚಿದ್ದರಿಂದ 3,000 ರೂಪಾಯಿ ನಷ್ಟ ಉಂಟಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜುಲಾಯ್ 9ರಂದು ಆರೋಪಿತ ಉಮೇಶ್ ಬಂಗೇರ ಅವರಲ್ಲಿ ಬೆಳ್ತಂಗಡಿ ಗುರುವಾಯನಕೆರೆ ಎಂಬಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡ ಅಂಗಡಿ ಮಾಲೀಕ ಸದಕುತುಲ್ಲ ಎಂಬವರು ಈ ಮುಂಚೆ ದಿನಸಿ ಖರೀದಿಸಿ ಬಾಕಿ ಇರಿಸಿದ ಹಣವನ್ನು ಕೇಳಿದ್ದರು.


ಅದರಿಂದ ಕೋಪಗೊಂಡ ಬಳಂಜ ಗ್ರಾಮದ ನಿವಾಸಿ ಉಮೇಶ ಬಂಗೇರ ಮರುದಿನ ಬೆಳಿಗ್ಗೆ ಅಂಗಡಿಗೆ ಬೆಂಕಿ ಹಚ್ಚಿದ್ದರಿಂದ ಅಂಗಡಿಗೆ ಅಳವಡಿಸಿದ್ದ ಎರಡು ಫ್ಲೆಕ್ಸ್ ಸುಟ್ಟು ಹೋಗಿ 10 ಪ್ಲಾಸ್ಟಿಕ್ ಉಪ್ಪಿನ ಚೀಲಗಳಿಗೆ ಹಾನಿಯಾಗಿರುತ್ತದೆ. ಮಾಹಿತಿ ಸಿಕ್ಕಿದ ಕೂಡಲೇ ಅಂಗಡಿಗೆ ಧಾವಿಸಿ ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಂದಿಸಲಾಗಿದೆ. ಅಂಗಡಿ ಮಾಲೀಕ ಸದಕುತುಲ್ಲ ನೀಡಿದ ದೂರಿನಂತೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ ಕ್ರ: 56/2025 ಕಲಂ 326(f) 324(2) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಆರೋಪಿ ಉಮೇಶ್ ಬಂಗೇರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




