ಯುವ ವಕೀಲೆ ರಾಜಶ್ರೀ ಪೂಜಾರಿ ನಿಧನ
ಕಳೆದ ಎರಡು ವರ್ಷಗಳಿಂದ ಮಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿ ನಿರ್ವಹಿಸುತ್ತಿದ್ದ ಬಹುಮುಖ ಪ್ರತಿಭೆಯುಳ್ಳ ಯುವ ವಕೀಲೆ ರಾಜಶ್ರೀ ಜಯರಾಜ್ ಪೂಜಾರಿಯವರು ಅನಾರೋಗ್ಯದಿಂದ ಇಂದು ಜುಲಾಯ್ 25ರಂದು ಶುಕ್ರವಾರ ವಿಧಿವಶರಾಗಿದ್ದಾರೆ. ತಮ್ಮ ಐದು ವರ್ಷದ 2017 ರಿಂದ 2022 ತನಕ ಕಾನೂನು ಶಿಕ್ಷಣವನ್ನು ಮಂಗಳೂರಿನ SDM ಕಾನೂನು ಕಾಲೇಜಿನಲ್ಲಿ ಪಡೆದುಕೊಂಡಿದ್ದರು.

ಹವ್ಯಾಸದಲ್ಲಿ ಕವಯಿತ್ರಿ, ಬರಹಗಾರ್ತಿ, ಲೇಖಕಿ, ಯುವಸಾಹಿತಿ, ವಾಗ್ಮಿ, ನಿರೂಪಕಿ, ಕಥಾವಾಚಕಿ, ಹಿನ್ನೆಲೆ ಧ್ವನಿ ಕಲಾವಿದೆ, ಯೋಗಪಟು, ರಂಗಭೂಮಿ ಕಲಾವಿದೆ, ಹವ್ಯಾಸಿ ಪ್ರವಾಸಿ, ಪುಸ್ತಕ ಪ್ರೇಮಿಯಾಗಿ ಹೀಗೆ ಹತ್ತು ಹಲವು ವಿಭಿನ್ನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ರಾಜಶ್ರಿಯವರು ಬರೆದ ಅನೇಕ ಕತೆ, ಕವಿತೆ, ಲೇಖನ, ವ್ಯಕ್ತಿ ಪರಿಚಯ, ಪ್ರಬಂಧಗಳು ಇತ್ಯಾದಿ ಉದಯವಾಣಿ, ವಿಜಯವಾಣಿ, ಜಯಕಿರಣ, ವಿಶ್ವವಾಣಿ, ತುಳುನಾಡು ವಾರ್ತೆ, ಪ್ರಜಾವಾಣಿ ಮತ್ತು ಬುಕ್ ಬ್ರಹ್ಮ ವೆಬ್ ಸೈಟ್ ಹೀಗೆ ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.




