ನಕಲಿ ಪರವಾನಿಗೆ ಮತ್ತು ಆಸ್ತಿ ತೆರಿಗೆ ರಶೀದಿ ಪ್ರಕರಣ – ಆರೋಪಿತ ಪ್ರಥ್ವಿರಾಜ್ ಶೆಟ್ಟಿ ಬಂಧನ
ಮಾಹಿತಿ ಎಡಿಟ್ ಮಾಡಿ ನಕಲಿ ದಾಖಲೆಗಳ ಸೃಷ್ಟಿ

ಮಂಗಳೂರು ಮಹಾನಗರ ಪಾಲಿಕೆಯು ನೀಡುವ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಗಳ ನಕಲಿ ಸೃಷ್ಟಿ ಮತ್ತು ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ 25 ವರ್ಷ ಪ್ರಾಯದ ಪೃಥ್ವಿರಾಜ್ ಶೆಟ್ಟಿ ಯಾನೆ ಮುನ್ನ ಈತನನ್ನು ಕಂಕನಾಡಿ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ “ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್” ಮಾಲಿಕ ಬಾಲಕೃಷ್ಣ ಸುವರ್ಣರವರು, ನ್ಯಾಯಾಲಯದ ಪ್ರಕ್ರಿಯೆಗಾಗಿ ದಾಖಲೆಗಳನ್ನು ಪಡೆಯಲು ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿದಾಗ, ತಮ್ಮ ಉದ್ದಿಮೆ ಪರವಾನಿಗೆ ಮತ್ತು ಆಸ್ತಿ ತೆರಿಗೆ ದಾಖಲೆಗಳು ನವೀಕರಿಸದಿರುವುದು ಬೆಳಕಿಗೆ ಬಂದಿತ್ತು. ಆದರೆ ಅವರ ಬಳಿ ನವೀಕರಿಸಿದ ದಾಖಲೆಗಳಿದ್ದು, ಆ ದಾಖಲೆಗಳನ್ನು ಪರಿಶೀಲಿಸಿದಾಗ, ಪೃಥ್ವಿರಾಜ್ ಶೆಟ್ಟಿ ಎಂಬಾತನು ₹27,990 ಹಣ ಪಡೆದು ನಕಲಿ ಪರವಾನಿಗೆ ಹಾಗೂ ನಕಲಿ ತೆರಿಗೆ ರಶೀದಿಗಳನ್ನು ನೀಡಿರುವುದು ಗೊತ್ತಾಯಿತು. ಈ ಕುರಿತು ಪಾಲಿಕೆಯ ಆಯುಕ್ತರು ಕಂಕನಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಬಾಲಕೃಷ್ಣ ಸುವರ್ಣರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಇದೇ ರೀತಿಯಲ್ಲಿ ಪಂಪ್ವೆಲ್ ಪ್ರದೇಶದಲ್ಲಿರುವ ಲಕ್ಷ್ಮಿ ಹಾರ್ಡ್ವೇರ್ ಮಾಲಿಕ ದೇವಾಂಗ್ ಕೆ. ಪಟೇಲ್ ರವರೂ ಕೂಡಾ, ಪೃಥ್ವಿರಾಜ್ ಶೆಟ್ಟಿಯಿಂದ ನಕಲಿ ಪರವಾನಿಗೆ ಮತ್ತು ಆಸ್ತಿ ತೆರಿಗೆ ದಾಖಲೆಗಳ ಮೂಲಕ ವಂಚನೆಗೊಳಗಾದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ನೀಡಿದ ಮಾಹಿತಿಯಂತೆ, ಪೃಥ್ವಿರಾಜ್ ಶೆಟ್ಟಿ ಬಂಧನದಿಂದ ಮುನ್ನ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದನು. ಕೇರಳದ ವಿವಿಧ ಪ್ರದೇಶಗಳಲ್ಲಿ ತಂಗಿದ್ದ ನಂತರ, ಜುಲಾಯಿ 25ರಂದು ಕಿನ್ನಿಗೋಳಿಗೆ ಬಂದಿರುವ ಸುದ್ದಿ ಆಧಾರದ ಮೇಲೆ ಪೊಲೀಸರು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಆತನನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಪೃಥ್ವಿರಾಜ್, ತನ್ನ ತಂದೆ ಗಣೇಶ್ ಶೆಟ್ಟಿ ದೇವಾಂಗ್ ಪಟೇಲ್ ರವರ ಅಂಗಡಿಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿ ಕೆಲಸಮಾಡುತ್ತಿದ್ದ ವೇಳೆ, ತಂದೆಯ ಅನಾರೋಗ್ಯದಿಂದ 2004 ರಿಂದ ತಾನು ಕೆಲಸ ಮುಂದುವರಿಸಿದ್ದನೆಂದು ಹೇಳಿದ್ದಾನೆ. ಈ ಅವಧಿಯಲ್ಲಿ ಪರವಾನಿಗೆ ನವೀಕರಣ ಮತ್ತು ತೆರಿಗೆ ಪಾವತಿ ಮಾಡುವ ನೆಪದಲ್ಲಿ ಮೊಬೈಲ್ ಮೂಲಕ MCC ವೆಬ್ಸೈಟ್ಗೆ ಲಾಗ್ಇನ್ ಆಗಿ, ಹಿಂದಿನ ದಾಖಲೆಗಳನ್ನು ಡೌನ್ಲೋಡ್ ಮಾಡಿ 3rd party ಆ್ಯಪ್ ಮೂಲಕ ದಿನಾಂಕ ಹಾಗೂ ಇತರೆ ಮಾಹಿತಿ ಎಡಿಟ್ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೀಡಿದ್ದನು. ತನಿಖೆಯಲ್ಲಿ ನಕಲಿ ದಾಖಲೆ ಸೃಷ್ಟಿಗೆ ಬಳಸಿದ ಉಪಕರಣಗಳನ್ನು ಪೊಲೀಸರು ವಶಕ್ಕೆ ಪಡೆದು, ಪೃಥ್ವಿರಾಜ್ ಶೆಟ್ಟಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕಂಕನಾಡಿ ಹಾಗೂ ಬರ್ಕೆ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ಮುಂದುವರಿದ್ದು, ಇನ್ನೂ ಎಷ್ಟು ಉದ್ದಿಮೆದಾರರು ಈ ರೀತಿಯಾಗಿ ವಂಚನೆಗೊಳಗಾಗಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.




