ಛತ್ತೀಸ್ ಗಡ ಕ್ರೈಸ್ತ ಸನ್ಯಾಸಿನಿಯರ ಬಂಧನ ಹಾಗೂ ಬಿಡುಗಡೆ – ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ – ಸಂತೋಷ್ ಡಿಸೋಜ ಬಜ್ಪೆ
ಮಂಗಳೂರಿನಲ್ಲಿ ನಾಳೆ ಆಗಸ್ಟ್ 4ರಂದು ಕಥೊಲಿಕ್ ಸಭಾ ಮುಂದಾಳತ್ವದಲ್ಲಿ ಬೃಹತ್ ಪ್ರತಿಭಟನೆ

ಭಾರತೀಯ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದ್ದರೂ, ಇತ್ತೀಚೆಗೆ ದ್ವೇಷಪೂರ್ಣ ರಾಜಕಾರಣದ ಪರಿಣಾಮವಾಗಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿಗಳ ಪ್ರಮಾಣ ಹೆಚ್ಚಾಗಿದೆ. ಕ್ರಿಶ್ಚಿಯನ್ ಸಮುದಾಯವು ದೇಶದೆಲ್ಲೆಡೆ ಜೀವಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರೇಮ, ಶಾಂತಿ ಹಾಗೂ ಸೇವೆಯ ಸಂಕೇತವಾಗಿ ಗುರುತಿಸಲ್ಪಡುವ ಕ್ರೈಸ್ತ ಸನ್ಯಾಸಿನಿಯರ ಮೇಲೆ ಸಹಜವಾಗಿ ನಡೆಯುತ್ತಿದ್ದ ಸಾಮಾಜಿಕ ಕಾರ್ಯಗಳ ನಡುವೆ ‘ಮತಾಂತರ’ದ ಹೆಸರಿನಲ್ಲಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅವರನ್ನು ಜೈಲಿಗೆ ಕಳಿಸಿರುವುದು, ಮಾನವೀಯ ಮೌಲ್ಯಗಳಿಗೆ ಕಳಂಕವಾಗಿದೆ. ಛತ್ತೀಸ್ಗಡದಲ್ಲಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಸುಳ್ಳು ಆರೋಪದ ಆಧಾರದ ಮೇಲೆ ಬಂಧಿಸಿರುವ ರಾಜಕೀಯ ಪ್ರೇರಿತ ಕ್ರಮವನ್ನು ಇಡೀ ವಿಶ್ವದ ಸಂಘಟನೆಗಳು ಹಾಗೂ ನಾಗರಿಕರು ತೀವ್ರವಾಗಿ ಖಂಡಿಸಿದ್ದಾರೆ.

ಇದಕ್ಕೂ ಒತ್ತಾಸೆಯಾಗಿ, ಬಂಧಿತರ ವಿರುದ್ಧದ ಮೊಕದ್ದಮೆ ಹಿಂಪಡೆಯಲು ಒತ್ತಾಯಿಸಿ, ಹಾಗೂ ಇನ್ನು ಮುಂದೆ ಇಂತಹ ಹೀನ ಕೆಲಸಗಳು ನಡೆಯದಂತೆ, ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ನೇತೃತ್ವದಲ್ಲಿ ನಾಳೆ ಆಗಸ್ಟ್ 4ರಂದು, ಸಂಜೆ 4 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಜಾಮೀನಿನ ಮೇಲೆ ಸನ್ಯಾಸಿಯರನ್ನು ಬಿಡುಗಡೆಗೊಳಿಸಿದರೂ ಯಾವುದೇ ಕಾರಣಕ್ಕೂ ಆಯೋಜಿಸಿದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಹೇಳಿದ್ದಾರೆ.

ಕ್ರೈಸ್ತ ಸನ್ಯಾಸಿನಿಯರ ಕಾರ್ಯ ಶ್ರದ್ಧೆ, ಪ್ರೀತಿ ಮತ್ತು ಸೇವೆಯ ಉದಾಹರಣೆಯಾಗಿದ್ದರೂ ಅವರನ್ನು ಗುರಿಯಾಗಿಸುವುದು ತೀವ್ರವಾಗಿ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ, ಮಂಗಳೂರು ನಗರದಲ್ಲಿ ನಡೆಯಲಿರುವ ಶಾಂತಿಪೂರ್ಣ ಪ್ರತಿಭಟನೆ ದ್ವೇಷ ರಾಜಕಾರಣದ ವಿರುದ್ಧ ಪ್ರಜಾಪ್ರಭುತ್ವ ಪರ ಧ್ವನಿಯಾಗಿದೆ.




