ICYM ಸಿಟಿ ವಲಯದ ವತಿಯಿಂದ ವಿಶಿಷ್ಟ ಕಾರ್ಯಕ್ರಮ ‘ರೂಟ್ ಆಫ್ ಕೇರ್’ ಗೆ ಚಾಲನೆ
ಮಂಗಳೂರು ಧರ್ಮಕ್ಷೇತ್ರದ ICYM ಸಿಟಿ ವಲಯವು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ‘ರೂಟ್ ಆಫ್ ಕೇರ್’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


ಅದರನ್ವಯ ಐಸಿವೈಎಂ ಸದಸ್ಯರು 12 ಚರ್ಚ್ ಗಳನ್ನು ಒಳಗೊಂಡ ಸೈಂಟ್ ಪೀಟರ್ ವಲಯದ ವ್ಯಾಪ್ತಿಯಲ್ಲಿ ವಿವಿಧ ಗಿಡಗಳನ್ನು ನೆಡಲಿದ್ದಾರೆ. ಮುಂದಿನ ವರ್ಷ ಇದೇ ಸಮಯಕ್ಕೆ ಈ ಗಿಡಗಳ ಪರಿಶೀಲನೆ ನಡೆಸಿ ಬೆಳವಣಿಗೆಯನ್ನು ಗಮನಿಸಿ ಬಹುಮಾನ ನೀಡಲಾಗುತ್ತದೆ. ಮಂಗಳೂರಿನ ಸಂತ ತೆರೆಸಾ ಚರ್ಚ್ನ ಧರ್ಮಗುರು ವಂದನೀಯ ಫಾದರ್ ರಿಚ್ಚರ್ಡ್ ಅಲೋಶಿಯಸ್ ಕುವೆಲ್ಲೊರವರು ಆಗಸ್ಟ್ 3ರಂದು ರವಿವಾರ ಕಾರ್ಯಕ್ರಮಕ್ಕೆ ಪಾಲ್ದನೆ ಚರ್ಚ್ ಆವರಣದಲ್ಲಿ ಪೇರಳೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ ಯುವಜನತೆ ಪರಿಸರದ ಬಗ್ಗೆ ಬಹಳಷ್ಟು ಕಾಳಜಿ ವಹಿಸಬೇಕು. ಯುವಕರು ಮನಸ್ಸು ಮಾಡಿದರೆ ಪ್ರಕೃತಿಯಲ್ಲಿ ಪ್ರತಿ ವರ್ಷ ಗಿಡಗಳನ್ನು ನೆಟ್ಟು ಮುಂದಿನ ದಿನಗಳಲ್ಲಿ ಪರಿಸರ ಕಾಪಾಡುವ ಕೆಲಸಕ್ಕೆ ತಮ್ಮ ಕೊಡುಗೆ ನೀಡಬಹುದೆಂದರು. ಕಾರ್ಯಕ್ರಮದಲ್ಲಿ ICYM ಸಿಟಿ ವಲಯದ ಅಧ್ಯಕ್ಷ ರಾಯನ್ ಮಾರ್ಸೆಲ್ ನೊರೊನ್ಹಾ, ಘಟಕದ ಅಧ್ಯಕ್ಷೆ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ವಿಶೆಲ್ ಲೋಬೊ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.




