ಧರ್ಮಸ್ಥಳ ವಿಚಾರಕ್ಕೆ ಕ್ರೈಸ್ತರ ದಫನ ಭೂಮಿಯನ್ನು ಎಳೆದು ತರುವ ಅಗತ್ಯವಿತ್ತೇ?
ಯಾವುದೇ ಪುರಾವೆಗಳಿಲ್ಲದೆ ಬಾಲಿಶವಾಗಿ ಹೇಳಿಕೆ ನೀಡಬಾರದು

ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಫಾದರ್ ಜೆ.ಬಿ. ಸಲ್ದಾನ್ಹಾ ಮತ್ತು ರೋಯ್ ಕ್ಯಾಸ್ಟಲಿನೊರವರಿಂದ ಜಂಟಿ ಪತ್ರಿಕಾ ಹೇಳಿಕೆ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ನೆಲ ಅಗೆಯ ಬೇಕು ಎಂಬುದಾಗಿ ಹೇಳಿಕೆ ನೀಡಿರುವ ಅನಾಮಿಕ ಮುಸುಕುಧಾರಿ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯಾಗಿರುತ್ತಾನೆ. ಇದಕ್ಕಾಗಿ ವಿದೇಶದಿಂದ ಹಣ ಬರುತ್ತದೆ ಎಂಬ ಗಾಳಿ ಸುದ್ದಿಯನ್ನು ಆಧರಿಸಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೀಡಿದ ಹೇಳಿಕೆಗೆ ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂದನೀಯ ಡಾ. ಜೆ.ಬಿ. ಸಲ್ದಾನ್ಹಾ ಮತ್ತು ರೋಯ್ ಕ್ಯಾಸ್ಟಲಿನೊ ಪ್ರಶ್ನೆ ಎತ್ತಿದ್ದಾರೆ. “ಅಶೋಕ್ ರವರ ಹೇಳಿಕೆಗೆ ಪುರಾವೆ ಏನು? ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಆಧಾರವಿಲ್ಲದ ಹೇಳಿಕೆ ನೀಡುವುದು ಸೂಕ್ತವಲ್ಲ”ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿಯವರು ಧರ್ಮಸ್ಥಳದ ಬೆಳವಣಿಗೆಯನ್ನು ಉಲ್ಲೇಖಿಸುವಾಗ ಕ್ರೈಸ್ತರ ಸ್ಮಶಾನ ಭೂಮಿಯನ್ನು ಎಳೆದು ತಂದು ಮಾತನಾಡಿರುವುದನ್ನು ಕ್ರೈಸ್ತ ಸಮುದಾಯ ಬೇಸರದಿಂದ ಸ್ವೀಕರಿಸಿದೆ. “ಕ್ರೈಸ್ತರ ದಫನ ಭೂಮಿಯಲ್ಲಿ ಅನಾಥ ಶವಗಳನ್ನು ಹೂಳುವುದಿಲ್ಲ. ಪ್ರತಿಯೊಂದು ಮೃತದೇಹಕ್ಕೂ ಸರಿಯಾದ ದಾಖಲೆ ಇರುತ್ತದೆ. ಚರ್ಚ್ ಸದಸ್ಯರ ಮೃತದೇಹಗಳನ್ನು ಮಾತ್ರ ದಫನ ಮಾಡಲಾಗುತ್ತದೆ. ಚರ್ಚ್ ಗಳ ಸ್ಮಶಾನದಲ್ಲಿ ಸಂಬಂಧಪಟ್ಟ ಚರ್ಚ್ ಗಳ ಸದಸ್ಯರ ಮೃತ ದೇಹಗಳನ್ನು ಮಾತ್ರ ಹೂಳಲಾಗುತ್ತಿದೆ. ಬೇರೊಂದು ಚರ್ಚಿನ ಸದಸ್ಯರ ಮೃತ ದೇಹವನ್ನು ಕೂಡಾ ದಫನ ಮಾಡುವುದಿಲ್ಲ.” ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.

ಕ್ರೈಸ್ತರ ದಫನ ಕ್ರಮ ಬಹಳಷ್ಟು ಶತಕಗಳಿಂದ ನಿಯಮಿತವಾಗಿ, ಪಾವಿತ್ರ್ಯದಿಂದ ನಡೆಯುತ್ತಿದ್ದು, ಇದನ್ನು ಗುರಿಯಿಲ್ಲದೆ ವಿವಾದಕ್ಕೆ ಎಳೆದು ತರುವುದು ಸರಿಯಲ್ಲ ಎಂದು ಧರ್ಮಕ್ಷೇತ್ರದ ನಾಯಕರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಿ ಹೇಳಿದ್ದಾರೆ.




