ಮಂಗಳೂರಿನ ರಿಷಲ್ ಮೆಲ್ಬಾ ಕ್ರಾಸ್ತಾರವರಿಗೆ “ಸಂಗೀತ ಯುವ ಕಲಾರತ್ನ”ರಾಜ್ಯ ಮಟ್ಟದ ಪ್ರಶಸ್ತಿ – ನಗರಕ್ಕೆ ಹೆಮ್ಮೆ
ರಿಷಲ್ ಗಾಯನವು ಹೃದಯವನ್ನು ಸ್ಪರ್ಶಿಸುವ ದೈವಿಕ ಶಕ್ತಿಯನ್ನು ಹೊಂದಿದೆ

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಂಗಳೂರಿನ ಪ್ರತಿಭಾನ್ವಿತ ಯುವ ಗಾಯಕಿ ರಿಷಲ್ ಮೆಲ್ಬಾ ಕ್ರಾಸ್ತಾರವರನ್ನು ಕರ್ನಾಟಕ ಸರ್ಕಾರ ಹಾಗೂ ಕನ್ನಡ ಫಿಲಂ ಚೇಂಬರ್ ವತಿಯಿಂದ “ಸಂಗೀತ ಯುವ ಕಲಾರತ್ನ” ರಾಜ್ಯ ಮಟ್ಟದ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ಎಂ. ಎಸ್. ರವೀಂದ್ರ, ಉಪಾಧ್ಯಕ್ಷ ಡಾ. ಎನ್. ಪ್ರಹ್ಲಾದ್, ನಿರ್ದೇಶಕರು ವಿಜಯ್ ಎಸ್. ಅಗಡಿ, ಖ್ಯಾತ ನಿರ್ದೇಶಕ ನಾಗಭರಣ, ಸಂಗೀತ ನಿರ್ದೇಶಕ ಲಯ ಕೋಕಿಲ, ನಟಿ ಭೂಮಿಕಾ ಹಾಗೂ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.



ಅಧ್ಯಕ್ಷರು ತಮ್ಮ ಭಾಷಣದಲ್ಲಿ “ರಿಷಲ್ ಗಾಯನವು ಹೃದಯವನ್ನು ಸ್ಪರ್ಶಿಸುವ ದೈವಿಕ ಶಕ್ತಿಯನ್ನು ಹೊಂದಿದೆ. ಸಂಗೀತವು ಮನುಷ್ಯರನ್ನು ಒಗ್ಗೂಡಿಸುವ ಸೇತುವೆಯಾಗಿದೆ. ರಿಷಲ್ ರವರ ಗಾಯನದಲ್ಲಿ ನಿಜವಾದ ಭಾವನಾತ್ಮಕ ಶುದ್ಧತೆ ಇದೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಇಂದು ಮಂಗಳೂರು ಮಾತ್ರವಲ್ಲ, ಕರ್ನಾಟಕವೇ ಹೆಮ್ಮೆಪಡುವ ದಿನ.” ಎಂದು ಹರ್ಷ ವ್ಯಕ್ತಪಡಿಸಿದರು. ಸೂಪರ್ ಸಿಂಗರ್ ಸೀಸನ್ 5ರ ವಿಜೇತೆಯಾದ ರಿಷಲ್ ಮೆಲ್ಬಾ ಕ್ರಾಸ್ತಾರವರಿಗೆ ದೊರೆತ ಈ ಗೌರವವು ಮಂಗಳೂರಿನ ಕೀರ್ತಿಯನ್ನು ಮತ್ತಷ್ಟು ಎತ್ತಿದೆ. ಸಂತ ಅಲೋಶಿಯಸ್ ಕಾಲೇಜಿನ ಈ ಉದಯೋನ್ಮುಖ ಪ್ರತಿಭಾವಂತ ಗಾಯಕಿಗೆ ಎಲ್ಲರಿಂದಲೂ ಹಾರ್ದಿಕ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.




