ಅವಸರವೇ ಅಪಘಾತಕ್ಕೆ ಕಾರಣ – ತಲಪಾಡಿ ಬಳಿ ಭೀಕರ ರಸ್ತೆ ದುರಂತದಲ್ಲಿ 6 ಮಂದಿ ಸಾವು, ಹಲವರು ಗಾಯ
ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ನಿಗಮ ಭರಿಸಲಿದೆ

ಕಾಸರಗೋಡು–ಮಂಗಳೂರು ಮಾರ್ಗದಲ್ಲಿ ಮಂಗಳೂರು-1ನೇ ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ (KA19 F 3407) ಅತೀವೇಗವಾಗಿ ಚಲಿಸುತ್ತಿದ್ದಾಗ ತಲಪಾಡಿ ಟೋಲ್ನಿಂದ ಕೇವಲ 150 ಮೀಟರ್ ಹಿಂದಕ್ಕೆ ಭೀಕರ ಅಪಘಾತ ಸಂಭವಿಸಿದೆ. ಇಂದು ಆಗಸ್ಟ್ 28ರಂದು ಗುರುವಾರ ಮಧ್ಯಾಹ್ನ 1.45ರ ಹೊತ್ತಿಗೆ, ಎದುರು ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಬ್ರೇಕ್ ಹಾಕಿದರೂ, ನಿಯಂತ್ರಣ ತಪ್ಪಿದ ಬಸ್ ಮೊದಲು ಆಟೋಗೆ ಭಾರೀ ಡಿಕ್ಕಿ ಹೊಡೆದು ಬಳಿಕ ಹಠಾತ್ತನೆ ತಿರುಗಿ, ಇಳಿಜಾರಿನಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆಬದಿಯಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಗುದ್ದಿದೆ.

ಈ ದುರಂತದಲ್ಲಿ —ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋ ಚಾಲಕ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿ ನಿಂತಿದ್ದ ಇನ್ನಿಬ್ಬರು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಕ್ಕೊಳಗಾದ ಬಸ್ ಹೊಸದಾಗಿ FC ನವೀಕರಿಸಿಕೊಂಡಿದ್ದು, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿರುವ ಸಾಧ್ಯತೆಯಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಸುಮಾರು 14 ವರ್ಷಗಳಿಂದ ಸೇವೆಯಲ್ಲಿರುವ ಮತ್ತು ಇದೇ ಮಾರ್ಗದಲ್ಲಿ 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕನ ಅತಿವೇಗ ಹಾಗೂ ಅಜಾಗರೂಕತೆ ಈ ದುರಂತಕ್ಕೆ ಕಾರಣವೆಂದು ನಿಗಮ ತಿಳಿಸಿದೆ. ಕೆ.ಎಸ್.ಆರ್.ಟಿ.ಸಿ. ನಿಗಮವು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಲು ಮುಂದಾಗಿದೆ.

ಸಂತಾಪ ಸೂಚನೆ
ನಿಗಮವು ಈ ಅಪಘಾತವನ್ನು ಅತ್ಯಂತ ದುಃಖಕರವೆಂದು ಪರಿಗಣಿಸಿ, ಮೃತರ ಆತ್ಮಗಳಿಗೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತದೆ. ಅವರ ಕುಟುಂಬಗಳಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲೆಂದು ದೇವರಲ್ಲಿ ಬೇಡಿಕೊಳ್ಳುತ್ತದೆ. ಅಪಘಾತ ತಪ್ಪಿಸಲು ನಿರಂತರ ತರಬೇತಿ, ತಿಳುವಳಿಕೆ ಮತ್ತು ಜಾಗೃತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ್ಯೂ ಸಹ, ಈ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ. ತಪ್ಪಿತಸ್ಥ ಚಾಲಕನ (ನಿಜಲಿಂಗಪ್ಪ ಚಲವಾದಿ) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅಕ್ರಂ ಪಾಷ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಆರ್.ಟಿ.ಸಿ. ಅವರು ತಿಳಿಸಿದ್ದಾರೆ.




