ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ
ಸುರಕ್ಷಿತ ಹಾಗೂ ಶಿಸ್ತಿನ ಬಸ್ ಪ್ರಯಾಣಕ್ಕೆ ಮಾದರಿ

ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ ಆಡಳಿತವು ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುವ ಸಂದರ್ಭದಲ್ಲಿ ಶಿಸ್ತಿನೊಂದಿಗೆ ಹಾಗೂ ಗೌರವದಿಂದ ವರ್ತಿಸಬೇಕೆಂದು ಮಹತ್ವದ ಸೂಚನೆ ಹೊರಡಿಸಿದೆ. ಬಸ್ ಚಾಲಕ, ಕಂಡಕ್ಟರ್ ಹಾಗೂ ಸಹಪ್ರಯಾಣಿಕರೊಂದಿಗೆ ದುರ್ವರ್ತನೆ ಸಹಿಸಲಾಗುವುದಿಲ್ಲವೆಂದು ಎಚ್ಚರಿಕೆ ನೀಡಲಾಗಿದೆ.
ಪಾಲಿಸಬೇಕಾದ ನಿಯಮಗಳು : ಸಿಬ್ಬಂದಿಗಳೊಂದಿಗೆ ವಿನಮ್ರವಾಗಿ ಮಾತನಾಡಬೇಕು. ವಾದ-ವಿವಾದ, ಗದ್ದಲ ಹಾಗೂ ಅವಾಚ್ಯ ಶಬ್ದಗಳಿಂದ ದೂರವಿರಬೇಕು. ಟಿಕೆಟ್ಗಳು ಮತ್ತು ಕುಳಿತ ಸ್ಥಳಗಳ ಬಗ್ಗೆ ಕಂಡಕ್ಟರ್ ಸೂಚನೆಗಳನ್ನು ಪಾಲಿಸಬೇಕು. ಬಸ್ ಆಸ್ತಿಯನ್ನು ಹಾನಿಗೊಳಿಸಬಾರದು. ಸಾರ್ವಜನಿಕ ಸಾರಿಗೆ ನಿಯಮಗಳಿಗೆ ಗೌರವ ನೀಡಬೇಕು.
ಶಿಸ್ತು ಉಲ್ಲಂಘನೆಗೆ ಶಿಕ್ಷೆಗಳು : ಮೊದಲ ತಪ್ಪಿಗೆ ಎಚ್ಚರಿಕೆ ನೀಡಲಾಗುವುದು ಹಾಗೂ ಶಾಲೆ/ಕಾಲೇಜಿಗೆ ವರದಿ ಮಾಡಲಾಗುವುದು. ಪುನರಾವರ್ತನೆ ಕಂಡುಬಂದರೆ ಬಸ್ ಪಾಸ್ ರದ್ದುಪಡಿಸಲಾಗುವುದು ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಪಮಾನ, ಬೆದರಿಕೆ, ಹಲ್ಲೆ ಅಥವಾ ಆಸ್ತಿ ಹಾನಿ ಮಾಡಿದಲ್ಲಿ ಭಾರತೀಯ ದಂಡ ಸಂಹಿತೆ (IPC) ಹಾಗೂ ವಾಹನ ಕಾಯ್ದೆಯಡಿ ಪೊಲೀಸ್ ದೂರು ದಾಖಲಿಸಲಾಗುವುದು. ಗಂಭೀರ ಪ್ರಕರಣಗಳಲ್ಲಿ ದಂಡ, ಅಮಾನತು ಅಥವಾ ಜೈಲು ಶಿಕ್ಷೆ ವಿಧಿಸಲಾಗಬಹುದು.


“ಬಸ್ ಚಾಲಕರು ಮತ್ತು ಕಂಡಕ್ಟರ್ಗಳು ಸರ್ಕಾರಿ ಸಿಬ್ಬಂದಿ. ಅವರ ವಿರುದ್ಧ ದುರ್ವರ್ತನೆ ಕಾನೂನಿನಡಿಯಲ್ಲಿ ದಂಡನೀಯ ಅಪರಾಧ. ಆದ್ದರಿಂದ ಎಲ್ಲರೂ ಜವಾಬ್ದಾರಿಯುತವಾಗಿ ಪ್ರಯಾಣಿಸಿ ಸಾರ್ವಜನಿಕ ಸಾರಿಗೆಯ ಗೌರವವನ್ನು ಕಾಪಾಡಬೇಕು.”ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯು ತನ್ನ ವಿದ್ಯಾರ್ಥಿಗಳಿಗೆ ನೀಡಿದ ಈ ಸೂಚನೆ, ಇತರ ಶಿಕ್ಷಣ ಸಂಸ್ಥೆಗಳಿಗೂ ಶಿಸ್ತುಪಾಲನೆಗೆ ಮಾದರಿಯಾಗಲಿದೆ. ಸಾರ್ವಜನಿಕ ಸಾರಿಗೆಯಲ್ಲಿ ಶಿಸ್ತಿನಿಂದ ವರ್ತಿಸುವ ಅಭ್ಯಾಸ ವಿದ್ಯಾರ್ಥಿಗಳಲ್ಲೇ ಅಲ್ಲ, ಸಮಾಜದಲ್ಲಿಯೂ ಉತ್ತಮ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗುತ್ತದೆ. ಈ ಕ್ರಮದಿಂದ ಬಸ್ ಪ್ರಯಾಣಗಳು ಸುರಕ್ಷಿತ, ಶಿಸ್ತಿನ ಮತ್ತು ಗೌರವಯುತವಾಗಲು ದಾರಿ ತೆರೆದುಕೊಳ್ಳುತ್ತದೆ.




