ಕೆಲರಾಯ್ ಚರ್ಚ್ನಲ್ಲಿ ಕ್ರೈಸ್ತ ಸಮುದಾಯದ ಭವ್ಯ “ಲಾಯಿಕೋತ್ಸವ್ 2025” – ಕ್ರೈಸ್ತ ಸಮುದಾಯದ ಏಕತೆಯನ್ನು ಬಲಪಡಿಸಲು ಪ್ರಯತ್ನ
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೊರವರಿಂದ ಸೆಪ್ಟಂಬರ್ 21ರಂದು ಕಾರ್ಯಕ್ರಮದ ಉದ್ಘಾಟನೆ

ಕಥೊಲಿಕ್ ಸಭಾ ಕೆಲರಾಯ್ ಘಟಕದ ಜಂಟಿ ಆಶ್ರಯ


ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಕೆಲರಾಯ್ ಸೈಂಟ್ ಆ್ಯನ್ಸ್ ಚರ್ಚ್ ಮತ್ತು ಕಥೊಲಿಕ್ ಸಭಾ ಕೆಲರಾಯ್ ಘಟಕದ ಆಶ್ರಯದಲ್ಲಿ “ಕ್ರೈಸ್ತ ಸಮುದಾಯದ ಜನೋತ್ಸವ ಲಾಯಿಕೋತ್ಸವ್ – 2025” ಸೆಪ್ಟೆಂಬರ್ 21ರಂದು ಆದಿತ್ಯವಾರ ಕೆಲರಾಯ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಭವ್ಯವಾಗಿ ನಡೆಯಲಿದೆ.

“ಕ್ರೈಸ್ತ ಸಮುದಾಯದ ಜನೋತ್ಸವ ಲಾಯಿಕೋತ್ಸವ್ – 2025 ಕಾರ್ಯಕ್ರಮದ ಮುಖ್ಯ ಉದ್ದೇಶ ಕ್ರೈಸ್ತ ಸಮುದಾಯದ ಮುಖಂಡರು, ಯುವಕರು ಹಾಗೂ ಸಮಾಜಮುಖಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ತರಬೇತಿ ನೀಡುವುದು, ಮಾಹಿತಿ ಹಂಚಿಕೊಳ್ಳುವುದು, ಸಮಾಲೋಚನೆ ನಡೆಸುವುದು ಮತ್ತು ಸಮುದಾಯದ ಏಕತೆಯನ್ನು ಬಲಪಡಿಸುವುದಾಗಿದೆ.” ಆದಿತ್ಯವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ನೀರುಮಾರ್ಗ, ಬೊಂಡಂತಿಲ, ಉಳಾಯಿಬೆಟ್ಟು, ಮಲ್ಲೂರು, ಅಡ್ಯಾರ್, ಅರ್ಕುಳ, ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೊತೆಗೆ ಮಂಗಳೂರು ಮಹಾನಗರ ಪಾಲಿಕೆಯ ಪದವು ಹಾಗೂ ವಾಮಂಜೂರು ವಾರ್ಡ್ಗಳ ವ್ಯಾಪ್ತಿಗೆ ಬರುವ ಐದು ಚರ್ಚ್ ಗಳ (ಕೆಲರಾಯ್, ನೀರುಮಾರ್ಗ, ಪೆರ್ಮಾಯ್, ಪಾಲ್ದನೆ ಮತ್ತು ವಾಮಂಜೂರು) ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಕಥೊಲಿಕ್ ಸಭಾ ಸದಸ್ಯರು, ಐಸಿವೈಎಂ ಸದಸ್ಯರು, ಚರ್ಚ್ ಪಾಲನಾ ಸಮಿತಿಯ ಸದಸ್ಯರು ಹಾಗೂ ವಿವಿಧ ಮುಖಂಡರು ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಸದಸ್ಯರು ಈ ಭವ್ಯ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಈ ಭವ್ಯ ಕಾರ್ಯಕ್ರಮದ ಉದ್ಘಾಟನೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೊರವರು ನೆರವೇರಿಸಲಿದ್ದಾರೆ ಎಂದು ಕೆಲರಾಯ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಸಿಲ್ವೆಸ್ಟರ್ ಡಿಕೋಸ್ಟಾ ಮತ್ತು ಕಥೊಲಿಕ್ ಸಭಾ ಕೆಲರಾಯ್ ಘಟಕದ ಅಧ್ಯಕ್ಷೆ ಡೊಟ್ಟಿ ಬ್ರ್ಯಾಗ್ಸ್ ರವರು ಇಂದು ಸೆಪ್ಟೆಂಬರ್ 18ರಂದು ಗುರುವಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




