February 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಿಷ್ಠಾವಂತ, ಪ್ರಾಮಾಣಿಕ, ದಕ್ಷ  ಪೊಲೀಸ್‌ ಅಧಿಕಾರಿಯಾಗಿದ್ದ ನಿವೃತ್ತ ಡಿಸಿಪಿ ಧರ್ಮಯ್ಯ ನಿಧನ

MLC ಐವನ್ ಡಿಸೋಜರವರಿಂದ ಅಂತಿಮ ನಮನ

ಮಂಗಳೂರಿನ ಡಿಸಿಪಿ (ಅಪರಾಧ-ಸಂಚಾರ) ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ 71 ವರ್ಷ ಪ್ರಾಯದ ಡಿ. ಧರ್ಮಯ್ಯರವರು ಮಂಗಳೂರು ಬೆಂದೂರುವೆಲ್‌ನ ತಮ್ಮ ನಿವಾಸದಲ್ಲಿ ಸೆಪ್ಟೆಂಬರ್ 24ರಂದು ಬುಧವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.

ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಹೊಸೂರಿನವರಾದ ಧರ್ಮಯ್ಯರವರು ತಮ್ಮ ಸೇವಾ ಜೀವನವನ್ನು ಮೈಸೂರು ನಗರದಲ್ಲಿ ಉಪನಿರೀಕ್ಷಕರಾಗಿ (SI) ಆರಂಭಿಸಿದ್ದರು. ನಂತರ ಯಳಂದೂರು, ಚಾಮರಾಜನಗರ, ವಿರಾಜಪೇಟೆ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಇವರು ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಬೆಳ್ತಂಗಡಿ, ಕಾರ್ಕಳ ಹಾಗೂ ಉಡುಪಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಡಿವೈಎಸ್‌ಪಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ, ಬಳಿಕ ಬೆಂಗಳೂರಿನಲ್ಲಿ ಎಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು.

ಮಂಗಳೂರಿನಲ್ಲಿ ಡಿಸಿಪಿ (ಅಪರಾಧ ಮತ್ತು ಸಂಚಾರ ವಿಭಾಗ) ಹುದ್ದೆಯನ್ನು ಭರಿಸಿ, 2013ರಲ್ಲಿ ಸೇವಾ ನಿವೃತ್ತಿ ಹೊಂದಿದ ಇವರು ಬಳಿಕ ಮಂಗಳೂರಿನಲ್ಲೇ ಕುಟುಂಬದ ಸದಸ್ಯರೊಂದಿಗೆ ನೆಲೆಸಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಧರ್ಮಯ್ಯರವರು ಶಿಸ್ತಿನ ಜೀವನವನ್ನು ನಡೆಸಿ ನಿಷ್ಠಾವಂತ, ಪ್ರಾಮಾಣಿಕ, ದಕ್ಷ ಹಾಗೂ ಆದರ್ಶ ಪೊಲೀಸ್ ಅಧಿಕಾರಿಯಾಗಿದ್ದರು. ಜನರ ಸಮಸ್ಯೆಗಳನ್ನು ಗಮನವಿಟ್ಟು ಕೇಳಿ ಪರಿಹರಿಸಲು ಸದಾ ಮುಂದಾಗಿದ್ದರು. ಅಧಿಕಾರದಲ್ಲಿದ್ದಾಗ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಸೇವೆ ಸಲ್ಲಿಸಿದವರು. ಸದಾ ಸಹೋದ್ಯೋಗಿಗಳಿಗೆ ಪ್ರೋತ್ಸಾಹ ನೀಡುತ್ತಾ ಕುಟುಂಬದಂತೆ ಕೆಲಸ ಮಾಡಿದವರು. ಸಮಾಜದಲ್ಲಿ ಉತ್ತಮ ಪೊಲೀಸ್‌ ಅಧಿಕಾರಿಯಾಗಿ ಹೆಸರು ಮಾಡಿದ್ದವರು. ಇದರಿಂದಾಗಿ 2011ರ ಸ್ವಾತಂತ್ರ್ಯ ದಿನಾಚರಣೆಯಂದು, ಅವರು ಸಲ್ಲಿಸಿದ ಸರ್ವೋಚ್ಚ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಕರ್ನಾಟಕ ರಾಜ್ಯಪಾಲರು 2012 ಅಕ್ಟೋಬರ್ 5ರಂದು ಬೆಂಗಳೂರಿನ ರಾಜಭವನದಲ್ಲಿ ನೀಡಿ  ಸನ್ಮಾನಿಸಿದ್ದರು. ಅವರ ನಿಧನದಿಂದ ಪೊಲೀಸರು ಮತ್ತು ಸಾರ್ವಜನಿಕರು ದುಃಖದಲ್ಲಿದ್ದಾರೆ. ವಿಧಾನಪರಿಷತ್ ಸದಸ್ಯ ಐವನ್ ಡಿಸೋಜರವರು ಡಿ. ಧರ್ಮಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅಂತಿಮ ನಮನ ಸಲ್ಲಿಸಿದರು.

ಸೇವಾ ಅವಧಿಯಲ್ಲಿ ಶಿಸ್ತು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಪರಾಧ ನಿಯಂತ್ರಣದಲ್ಲಿ ತೀಕ್ಷ್ಣ ಬುದ್ಧಿಮತ್ತೆ ಹಾಗೂ ಕಾರ್ಯನಿರ್ವಹಣಾ ಶೈಲಿಯಿಂದ ಮೆಚ್ಚುಗೆ ಪಡೆದವರು. ಸಂಚಾರ ನಿಯಂತ್ರಣದಲ್ಲಿ ನವೀನ ಕ್ರಮಗಳನ್ನು ಜಾರಿಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವಾಗ ಜನಸಾಮಾನ್ಯರ ವಿಶ್ವಾಸವನ್ನು ಗಳಿಸಿದ್ದರು.

ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ ತಂಡ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅಧಿಕಾರದಲ್ಲಿದ್ದಾಗ ಜನಪರ ಪೊಲೀಸ್‌ ಅಧಿಕಾರಿಯಾಗಿ ಖ್ಯಾತಿ ಗಳಿಸಿ ಸಮಾಜದಲ್ಲಿ ದೀರ್ಘಕಾಲ ನೆನಪಿನಲ್ಲಿರುವ ವ್ಯಕ್ತಿಯಾಗಿದ್ದಾರೆ.

You may also like

News

ದಾಯ್ಜಿವರ್ಲ್ಡ್@25: ಮಾನವೀಯ ಮೌಲ್ಯಗಳ ಮಾಧ್ಯಮ ಕ್ರಾಂತಿ – ಅನಿವಾಸಿ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಶ್ಲಾಘನೆ

ಮಂಗಳೂರು: “ಕೇವಲ ಸುದ್ದಿ ಪ್ರಸಾರ ಮಾಡುವುದಷ್ಟೇ ಅಲ್ಲದೆ, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ‘ ದಾಯ್ಜಿವರ್ಲ್ಡ್ ‘ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದೆ,” ಎಂದು ಅನಿವಾಸಿ ಭಾರತೀಯ
News

ಮಂಗಳೂರಿನಲ್ಲಿ ಸಂತ ಆಂತೋನಿ ಪುಣ್ಯ ಅವಶೇಷಗಳ ಹಬ್ಬದ ಭವ್ಯ ಆಚರಣೆ

ನಮ್ಮ ಮಾತುಗಳು ಇತರರಿಗೆ ನೋವು ನೀಡುವ ಬದಲು ಭರವಸೆ ಮತ್ತು ಸಾಂತ್ವನ ನೀಡುವಂತಿರಲಿ – ನಿವೃತ್ತ ಆರ್ಚ್ ಬಿಷಪ್ ಡಾ| ಬರ್ನಾರ್ಡ್ ಮೊರಾಸ್ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ

You cannot copy content of this page