8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಕಲಿ ಯೋಗೀಶ್ ನ ಸಹಚರ ‘ಶೀನು’ ಮುಲ್ಕಿ ಪೊಲೀಸರ ಬಲೆಗೆ
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮುಲ್ಕಿ ಠಾಣಾ ಪೊಲೀಸರು, 8 ವರ್ಷಗಳಿಂದ ಪೊಲೀಸರಿಗೆ ಸಿಕ್ಕದೆ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಕಲಿ ಯೋಗೀಶ್ ನ ಸಹಚರ ಮುಲ್ಕಿ ತಾಲೂಕಿನ ಚಿತ್ತಾಪು ಗ್ರಾಮದ ಕೂಕ್ರ ಮನೆಯಲ್ಲಿ ವಾಸವಿರುವ 45 ವರ್ಷ ಪ್ರಾಯದ ಶ್ರೀನಿವಾಸ್ ಶೆಟ್ಟಿ ಅಲಿಯಾಸ್ ಶೀನುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಹಿನ್ನೆಲೆ 2017ರಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 155/2017 ಹಾಗೂ ಕೋಕಾ ಪ್ರಕರಣದಲ್ಲಿ ಶೀನುವಿನ ವಿರುದ್ಧ ಆರೋಪ ದಾಖಲಾಗಿತ್ತು. ಆತ 8 ವರ್ಷಗಳಿಂದ ಕಾನೂನಿನ ಕೈ ತಪ್ಪಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದರ ಹಿನ್ನೆಲೆಯಲ್ಲಿ ಮೈಸೂರು ಪ್ರಿನ್ಸಿಪಲ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ವಾರೆಂಟ್ ಹಾಗೂ ಉದ್ಘೋಷಣೆ ಹೊರಡಿಸಲಾಗಿತ್ತು.

ಬಂಧನ ಕಾರ್ಯಾಚರಣೆ : ಶೀನು ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆತ ಮುಂಬೈಯಲ್ಲಿ ಅಡಗಿ ಇರುವ ಬಗ್ಗೆ ಖಚಿತ ಸುಳಿವು ಪಡೆದು ಕಾರ್ಯಾಚರಣೆ ನಡೆಸಿದರು. ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ರವರ ಮಾರ್ಗದರ್ಶನದಲ್ಲಿ, ಮುಲ್ಕಿ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಬಿ.ಎಸ್., ಉಪ ನಿರೀಕ್ಷಕ ಉಮೇಶ್ ಕುಮಾರ್ ಎಂ.ಎನ್. ಹಾಗೂ ಸಿಬ್ಬಂದಿಗಳಾದ ASI ಸುರೇಶ್ ಕುಂದರ್ ಮತ್ತು ಹೆಡ್ ಕಾನ್ಸ್ಟೇಬಲ್ ಉದಯರ ತಂಡವು ಶೀನುವನ್ನು ಮುಂಬೈಯಲ್ಲಿ ಪತ್ತೆಹಚ್ಚಿ ಬಂಧಿಸಿತು.
ಮುಂದಿನ ಕ್ರಮ : ಅಕ್ಟೋಬರ್ 4ರಂದು ಶನಿವಾರ ಶೀನುವನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.




