ಬೆಳ್ತಂಗಡಿ ಕಿಲ್ಲೂರಿನಲ್ಲಿ ಅಕ್ಟೋಬರ್ 12ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ
ಸುನ್ನಿ ಮ್ಯಾನೇಜ್ ಮೆಂಟ್ ಅಸೋಯೇಷನ್ ಮುರ ರೀಜಿನಲ್ & ಸುನ್ನಿ ಜಮಾತುಲ್ ಮುಹಲಿಮಿನ್ ಮುರ ರೇಂಜ್ ವತಿಯಿಂದ ಎಂ.ಜೆ.ಎಂ. ಕಿಲ್ಲೂರು, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ & ಕೆ.ಎಂ.ಸಿ. ಆಸ್ಪತ್ರೆ ಜ್ಯೋತಿ ವೃತ್ತ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಮತ್ತು ಬ್ಲಡ್ ಸೆಂಟರ್, ಕೆ.ಎಂ.ಸಿ. ಮಂಗಳೂರು ಹಾಗೂ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಇವರ ಜಂಟಿ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಅಕ್ಟೋಬರ್ 12 ಭಾನುವಾರದಂದು ಕಿಲ್ಲೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ ಎಂದು ಕಿಲ್ಲೂರು ಮಸೀದಿ ಅಧ್ಯಕ್ಷ ಅಬ್ದುಲ್ ಅಜೀಜ್ ಝಹರಿ ತಿಳಿಸಿದರು.

ಅವರು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಶಿಬಿರದಲ್ಲಿ ಸರ್ವಧರ್ಮವರಿಗೂ ಮುಕ್ತವಾದ ಅವಕಾಶವಿದ್ದು ಬೆಳಗ್ಗೆ 9 ರಿಂದ ಮಧ್ಯಾಹ್ನದವರೆಗೆ ಶಿಬಿರದಲ್ಲಿ ನೋಂದಣಿ ನಡೆಯಲಿದೆ. ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ ರೋಗ ವಿಭಾಗ ಬೆನ್ನು, ಸೊಂಟ ಮೂಳೆ ವಿಭಾಗ, ಸ್ತ್ರೀ ರೋಗ ವಿಭಾಗ, ಚರ್ಮ ರೋಗ ವಿಭಾಗ, ಸಾಮಾನ್ಯ ರೋಗ ವಿಭಾಗ, ದಂತ ಚಿಕಿತ್ಸಾ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಕಣ್ಣಿನ ವಿಭಾಗ, ಎಲುಬು ಮತ್ತು ಕೀಲು ರೋಗ ವಿಭಾಗಗಳು ಇರಲಿದ್ದು ಖ್ಯಾತ ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದಾರೆ ಎಂದರು.

ಶಿಬಿರದಲ್ಲಿ ಲಭ್ಯವಿರುವ ಸೌಲಭ್ಯಗಳು :
ಉಚಿತ ಮಧುಮೇಹ (ಶುಗರ್) ಹಾಗೂ ಬಿ.ಪಿ. ತಪಾಸಣೆ ಉಚಿತ ಔಷಧ ವಿತರಣೆ (ಲಭ್ಯವಿರುವ ಔಷಧಗಳು ಮಾತ್ರ), ಓದುವ ಕನ್ನಡಕ ಸಂಪೂರ್ಣ ಉಚಿತ.
ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವುದು, ಹಲ್ಲುಗಳನ್ನು ಸ್ವಚ್ಛಗೊಳಿಸುವುದು, ಹುಳುಕು ಹಲ್ಲುಗಳನ್ನು ಕೀಳುವುದು ಇತ್ಯಾದಿ. ವೈದ್ಯರು ಸೂಚಿಸಿದವರಿಗೆ ಉಚಿತ ಇಸಿಜಿ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಶಿಬಿರದಲ್ಲಿ ತಪಾಸಣೆ ಮತ್ತು ಲಭ್ಯ ಔಷಧಿಗಳು ಉಚಿತವಾಗಿರಲಿದೆ.
ಶಿಬಿರಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆ.ಎಂ.ಸಿ. ಆಸ್ಪತ್ರೆಯ ಹಸಿರು ಕಾರ್ಡು ನೀಡಲಾಗುವುದು. ಈ ಹಸಿರು ಕಾರ್ಡ್ ಮೂಲಕ ಒಳ ರೋಗಿಯಾಗಿ ದಾಖಲಾದಲ್ಲಿ ಶಸ್ತ್ರಚಿಕಿತ್ಸೆಗೆ ಗರಿಷ್ಠ ರೂಪಾಯಿ 10,000/- ಮತ್ತು ಇತರ ಚಿಕಿತ್ಸೆಗೆ ಗರಿಷ್ಠ ರೂಪಾಯಿ 5000/- ವರೆಗೆ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ಆರೋಗ್ಯ ತಪಾಸಣಾ ಶಿಬಿರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ . 150 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ನಿರೀಕ್ಷೆಯಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲ ಧರ್ಮದ ಮುಖಂಡರುಗಳು ಸಾಮಾಜಿಕ ಮುಖಂಡರುಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ ಅವರು ಈ ಪರಿಸರದ ಹೆಚ್ಚಿನ ಜನರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಜೆ.ಎಂ. ಮುರ ವಲಯ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ, ಎಸ್.ಎಂ.ಎ. ಮುರ ಅಧ್ಯಕ್ಷ ಅಬ್ದುಲ್ ಸಮದ್, ಎಸ್.ಎಂ.ಎ. ಮುರ ಉಪಾಧ್ಯಕ್ಷ ಸತ್ತಾರ್ ಸಖಾಫಿ, ಕೋಶಾಧಿಕಾರಿ ಅನ್ಸಾರ್ ಲಾಯಿಲ ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಪೂರಕ ಮಾಹಿತಿಗಳನ್ನು ನೀಡಿದರು.




