ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ವಕೀಲರ ಪೋಸ್ಟ್ಕಾರ್ಡ್ ಚಳವಳಿ
ಮಂಗಳೂರಿನಲ್ಲಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಬಿ. ಸಿ. ರೋಡ್ ನಲ್ಲಿ ಇಂದು ಅಕ್ಟೋಬರ್ 23ರಂದು ಗುರುವಾರ ಬಂಟ್ವಾಳ ವಕೀಲರ ಸಂಘ (ರಿ.) ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪೋಸ್ಟ್ಕಾರ್ಡ್ ಚಳವಳಿ ನಡೆಯಿತು.











ಬಂಟ್ವಾಳದ ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಪಿ. ಜಯರಾಮ್ ರೈ ಅವರು ಈ ಚಳವಳಿಗೆ ಚಾಲನೆ ನೀಡಿದರು.











ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಕೊಸ್ತಾರವರು ಮಾತನಾಡಿ “ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ರಚನೆ ಅಗತ್ಯವಾಗಿದೆ. ಇದಕ್ಕಾಗಿ ಎರಡು ದಶಕಗಳ ಹಿಂದೆ ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ. ಚಂಗಪ್ಪರವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದ್ದು, ಪ್ರಸ್ತುತ ಅಧ್ಯಕ್ಷ ಹೆಚ್.ವಿ. ರಾಘವೇಂದ್ರರವರ ನೇತೃತ್ವದಲ್ಲಿ ಹೋರಾಟಕ್ಕೆ ಮತ್ತೆ ವೇಗ ಸಿಕ್ಕಿದೆ. ಈ ಹೋರಾಟದ ಭಾಗವಾಗಿ ಇಂದು ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪೋಸ್ಟ್ಕಾರ್ಡ್ ಅಭಿಯಾನ ನಡೆಯುತ್ತಿದೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಗತ್ಯವಾದ ಜಾಗ ಗುರುತಿಸಲಾಗಿದ್ದು, ಈ ಕುರಿತು ಸರ್ಕಾರ ಮತ್ತು ರಾಜ್ಯಪಾಲರಿಗೆ ಒತ್ತಾಯಿಸಲು ವಿವಿಧ ಅಭಿಯಾನಗಳು ಪ್ರಾರಂಭವಾಗಿವೆ ಎಂದು ಅವರು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಹಿರಿಯ ಹಾಗೂ ಕಿರಿಯ ವಕೀಲರು, ಸಾರ್ವಜನಿಕರು ಸಕ್ರಿಯವಾಗಿ ಪೋಸ್ಟ್ಕಾರ್ಡ್ ಚಳವಳಿಯಲ್ಲಿ ಭಾಗವಹಿಸಿದರು.









