July 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ SCS ಆಸ್ಪತ್ರೆಯ 38 ವರ್ಷಗಳ ಸಂಭ್ರಮಾಚರಣೆ

ಫುಜಿಫಿಲ್ಮ್ ಜಪಾನ್‍ನ 128 ಸ್ಲೈಸ್ ಕಾರ್ಡಿಯಕ್ ಸಿಟಿ ಸ್ಕ್ಯಾನ್‍, ಆಧುನಿಕ ರೇಡಿಯಾಲಜಿ ವಿಭಾಗ ಮತ್ತು NABL ಮಾನ್ಯತೆ ಪಡೆದ ಪ್ರಯೋಗಾಲಯದ ಉದ್ಘಾಟನೆ

ಮಂಗಳೂರಿನ SCS ಆಸ್ಪತ್ರೆಯ 38 ವರ್ಷಗಳ ಶ್ರೇಷ್ಠ ನಿಸ್ವಾರ್ಥ ಸೇವೆಯ ಸಂಭ್ರಮಾಚರಣೆ ಮತ್ತು ಫುಜಿಫಿಲ್ಮ್ ಜಪಾನ್‍ನ 128 ಸ್ಲೈಸ್ ಕಾರ್ಡಿಯಕ್ ಸಿಟಿ ಸ್ಕ್ಯಾನ್‍, ಆಧುನಿಕ ರೇಡಿಯಾಲಜಿ ವಿಭಾಗ ಮತ್ತು ಎನ್‍ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸಂಸದ ಕ್ಯಾಪ್ಟನ್  ಬ್ರಿಜೇಶ್  ಚೌಟರವರು ಉದ್ಘಾಟಿಸಿ ಹೃದಯದ ಆರೈಕೆಯ ಹೊಸ ಯುಗಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡುತ್ತ SCS ಆಸ್ಪತ್ರೆ ಪ್ರಪ್ರಥಮವಾಗಿ ರೋಗದ ಮೂಲವನ್ನು ಪತ್ತೆ ಹಚ್ಚುವ ಯಂತ್ರವನ್ನು ಲೋಕಾರ್ಪಣೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಇದೊಂದು ಉತ್ತಮ ಹೆಜ್ಜೆ ಯಾವುದೇ ರೋಗವನ್ನು ಮೂಲದಿಂದ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಒಂದು ಉತ್ತಮ ಕಾರ್ಯ.  ಕೆಲವೊಂದು ಸಂಧರ್ಭದಲ್ಲಿ ಉತ್ತಮ ರೀತಿಯಲ್ಲಿ ರೋಗದ ಮೂಲದ ಪತ್ತೆ ಕಾರ್ಯ ನಡೆಯದೆ ತಪ್ಪಾಗಿ ಚಿಕಿತ್ಸೆ ನಡೆದು ಮುಂದೆ ಸಮಸ್ಯೆ ಆಗುತ್ತದೆ. ಆ ನಿಟ್ಟಿನಲ್ಲಿ ಮಂಗಳೂರು ದೇಶದಲ್ಲಿಯೇ ಒಂದು ಮಾದರಿ ನಗರ ಎಂದು ನಾನು ನಂಬಿದ್ದೇನೆ. ಮಂಗಳೂರು ಒಂದು ಸಣ್ಣ ನಗರವಾದರೂ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಸಾಮಾನ್ಯವಾದದ್ದು. ಅಂತಹದರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ   ಖಾಸಗಿ ವೈದ್ಯಕೀಯ ಸಂಸ್ಥೆಗಳು ಮತ್ತು   ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳು ಮತ್ತು ಡಾಕ್ಟರ್ ಗಳು ಒಂದು ಮಾದರಿಯನ್ನೇ ಸೃಷ್ಟಿಸಿದ್ದಾರೆ. ಹಾಗಾಗಿ   ಮಂಗಳೂರು ನಗರ ಮಾದರಿ ನಗರ ಎಂದರೆ ತಪ್ಪಾಗಲಾರದು. ಪ್ರಧಾನ ಮಂತ್ರಿಯವರು ಇತ್ತೀಚಿಗೆ ನಡೆದ 2.0 GST ಕಾರ್ಯಕ್ರಮದಲ್ಲಿ 33 ಜೀವ ರಕ್ಷಕ ಔಷಧಿಗಳಿಗೆ ಇದ್ದ ತೆರಿಗೆಯನ್ನು 0% ಮಾಡಿದ್ದಾರೆ ಮತ್ತು ಇತರ ಹಲವು ಔಷಧಿಗಳಿಗೆ 12% ಇದ್ದ ತೆರಿಗೆಯನ್ನು 5% ಮಾಡಿದ್ದಾರೆ. ಇದು ಸಹ ಮೋದಿ ಸರ್ಕಾರದ ಸಾಧನೆ ಎಂದರು.  ಇದೇ ಸಂಧರ್ಭದಲ್ಲಿ ಸಂಸದರು ಎಸ್‍ಸಿಎಸ್ ಆಸ್ಪತ್ರೆಯ ನೂತನ ವೆಬ್ ಸೈಟ್ ಕೂಡ ಬಿಡುಗಡೆಗೊಳಿಸಿದರು.

ರಾಮಕೃಷ್ಣ ಆಶ್ರಮದ ಸ್ವಾಮಿ ಜೀತಕಾಮಾನಂದ ಸ್ವಾಮೀಜಿಯವರು ಮಾತನಾಡಿ ಎಸ್‍ಸಿಎಸ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮವಾಗಿ ಚಿಕಿತ್ಸೆ ದೊರೆಯುತ್ತಿದ್ದು ಸಂಸ್ಥೆಯಲ್ಲಿ ಇರುವ ಸೇವಾ ನಿರತರ ಸೇವೆ ರೋಗಿಗಳಿಗೆ ಅತ್ಯುತ್ತಮವಾಗಿದೆ ಎಂದರು. ಅವರು ಆಸ್ಪತ್ರೆಯ ಸೇವಾ ತತ್ಪರತೆ ಹಾಗೂ ಆಸ್ಪತ್ರೆಯ ಉತ್ತಮ ಸೇವಾ ತಂಡಗಳನ್ನು ಶ್ಲಾಘಿಸಿದರು.

ಶಾಸಕ ವೇದವ್ಯಾಸ ಕಾಮತ್ ರವರು ಮಾತನಾಡಿ ಎಸ್‍ಸಿಎಸ್ ಆಸ್ಪತ್ರೆ ಸಂಸ್ಥೆ ಹಲವು ವರ್ಷಗಳಿಂದ ಹಲವು ಸಮಾಜ ಮುಖಿ ಕೆಲಸಗಳಿಗೆ ಸಹಾಯ ನೀಡುತ್ತಿದೆ. ಜೊತೆಗೆ ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳನ್ನು ಉನ್ನತೀಕರಿಸುವ ಮೂಲಕ ಉನ್ನತ ಮಟ್ಟದಲ್ಲಿ ನವೀಕರಿಸುತ್ತಿದ್ದಾರೆ. ಮಂಗಳೂರಿನಲ್ಲಿ ಹಲವು ಮೆಡಿಕಲ್ ಕಾಲೇಜುಗಳಿದ್ದು, ಮಂಗಳೂರು   ನಗರ ಮೆಡಿಕಲ್ ಹಬ್ ಆಗಿರುವ ಕಾರಣ ಮುಂದಿನ ದಿನಗಳಲ್ಲಿ ಬೇರೆ ದೇಶದ ಜನರು ಜಿಲ್ಲೆಗೆ ಬಂದು  ಚಿಕಿತ್ಸೆ ಪಡೆದರೆ  ಮಂಗಳೂರು ಮೆಡಿಕಲ್ ಟೂರಿಸಂ ಹಬ್ ಆಗುವುದರಲ್ಲಿ ಸಂಶಯ ಇಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಸ್ಥ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂತ್ರಿ ಸನ್ಮಾನ್ಯ ದಿನೇಶ್ ಗುಂಡು ರಾವ್ ರವರು ತಮ್ಮ ಅನುಪಸ್ಥಿತಿಯಲ್ಲಿ ಸಂದೇಶವನ್ನು ನೀಡಿ ಆಸ್ಪತ್ರೆಯ ಉತ್ತಮ ಕೆಲಸವನ್ನು ಪ್ರಶಂಸಿದರು ಹಾಗೂ ಇದರಿಂದ ಬಹಳಷ್ಟು ರೋಗಿಗಳಿಗೆ ಸಹಾಯ ಸಿಗುತ್ತದೆ ಎಂದು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದರು. ತಮಗೆ ಅನಿವಾರ್ಯ ಕಾರಣಗಳಿಂದ ಬರಲಾಗದಕ್ಕೆ ವಿಷಾದಿಸಿದರು.

ಇದೇ ಸಂಧರ್ಭದಲ್ಲಿ ಫುಜಿಫಿಲ್ಮ್ ಜಪಾನ್‍ ಸಂಸ್ಥೆ ನಿರ್ಮಿಸಿದ ಅತ್ಯಾಧುನಿಕ 128 ಸ್ಲೈಸ್ ಸಿನೇರಿಯಾ ವ್ಯೂ ಕಾರ್ಡಿಯಾಕ್ ಸಿಟಿ ಸ್ಕ್ಯಾನರ್, ಅಧುನಿಕ ಡಯಾಗ್ನೋಸ್ಟಿಕ್ ವಿಭಾಗ ಮತ್ತು ಇಂಟರ್‍ವೆನ್ಶನ್ ರೇಡಿಯಾಲಜಿ ವಿಭಾಗ ಮತ್ತು NEBL ಮಾನ್ಯತೆ ಪಡೆದ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು.

ಈ ನೂತನ ಸೇವೆಗಳು ರೋಗನಿರ್ಣಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಆಸ್ಪತ್ರೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಫುಜಿಫಿಲ್ಮ್ ಸಿನೇರಿಯಾ ಜಪಾನಿನ ತಂತ್ರಜ್ಞಾನ ಮತ್ತು ನಿಖರತೆಯ ಸಂಕೇತವಾಗಿದ್ದು, ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ವೈದ್ಯರು ಮತ್ತು ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ರಾಮಕೃಷ್ಣ ಆಶ್ರಮದ ಸ್ವಾಮಿ ಜೀತಕಾಮಾನಂದ ಸ್ವಾಮೀಜಿ, ಡಾ. ಐ.ಜಿ. ಭಟ್, ಹಿರಿಯ ನರರೋಗ ತಜ್ಞರು, ಸಿಟಿ ಆಸ್ಪತ್ರೆಯ ಸಿಎಂಡಿ ಡಾ. ಕೆ. ಭಾಸ್ಕರ್ ಶೆಟ್ಟಿ ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞರು, ಫುಜಿಫಿಲ್ಮ್  ಸಂಸ್ಥೆಯ ನಾಗರಾಜ್ ಕೆಂಪಯ್ಯ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಸುನಿಲ್ ಆಚಾರ್, ಸಾಯಿರಾಂ, ರವಿ ಶಂಕರ್ ಮಿಜಾರ್, ಎಂ.ಬಿ. ಪುರಾಣಿಕ್, ಇಸ್ಕಾನ್ ಸಂಸ್ಥೆಯ ಸ್ವಾಮೀಜಿಗಳು, ಮತ್ತಿತರ  ಗಣ್ಯರು, ವೈದ್ಯಕೀಯ ವೃತ್ತಿಪರರು ಮತ್ತು ಆಸ್ಪತ್ರೆಯ ಹಿತೈಷಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SCS ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಆದ ಡಾ. ಜೀವರಾಜ್ ಸೋರಕೆಯವರು ವಹಿಸಿದ್ದು, ಎಸ್‍ಸಿಎಸ್ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ. ಚಂದ್ರಶೇಖರ್ ಜೆ. ಸೊರಕೆ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಹಿರಿಯ ವೈದ್ಯರಾದ ಡಾ. ಐ.ಜಿ. ಭಟ್ ಮತ್ತು ಡಾ. ಕೆ. ಭಾಸ್ಕರ್ ಶೆಟ್ಟಿಯವರನ್ನು ಶಾಸಕ ವೇದವ್ಯಾಸ್ ಕಾಮತ್ ರವರು ಹಾಗೂ ಎಸ್‍ಸಿಎಸ್ ಆಸ್ಪತ್ರೆಯು ಅವರ ವೈದ್ಯಕೀಯ ಸೇವೆಗಾಗಿ ಗೌರವಿಸಿದರು.

ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಆಸ್ಪತ್ರೆಯ ವತಿಯಿಂದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತದಾರದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಡಾಕ್ಟರ್ ಮಲ್ಲಿಕಾರ್ಜುನ್ ರವರು ಪ್ರಸ್ತಾವನೆ ಮಾಡಿದರು. ಡಾಕ್ಟರ್ E.V.S ಮಾಬೆನ್ ರವರು ಪ್ರಸ್ತಾವಿಕ ಭಾಷಣ ಮಾಡಿ,  ಸ್ನೇಹರವರು ಕಾರ್ಯಕ್ರಮ ನಿರ್ವಹಿಸಿದರು.

ಎಸ್‍ಸಿಎಸ್ ಆಸ್ಪತ್ರೆ ಬಗ್ಗೆ :

1987ರಲ್ಲಿ ಸ್ಥಾಪಿತವಾದ ಎಸ್‍ಸಿಎಸ್ ಆಸ್ಪತ್ರೆ, ಕರಾವಳಿ ಭಾಗದ ಆರೋಗ್ಯ ಸೇವೆಯಲ್ಲಿ ನಿಸ್ವಾರ್ಥಕ್ಕೆ ಹೆಸರಾದ ಸಂಸ್ಥೆಯಾಗಿದ್ದು, ವಿವಿಧ ವಿಭಾಗಗಳಲ್ಲಿ ಪರಿಣತ ತಜ್ಞರ ತಂಡ, ಅತ್ಯಾಧುನಿಕ ಮೂಲ ಸೌಕರ್ಯಗಳು ಮತ್ತು ಗುಣಮಟ್ಟದ ಸೇವಾ ಪರಂಪರೆಯೊಂದಿಗೆ ವರ್ಷಂಪ್ರತಿ ಸಾವಿರಾರು ರೋಗಿಗಳಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದೆ. 1987ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಡಿಕೋ ಲೀಗಲ್ ಮತ್ತು ಟ್ರಾಮಾ ಪ್ರಕರಣಗಳನ್ನು ಸ್ವೀಕರಿಸಿದ ಮೊದಲ ಖಾಸಗಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 25 ವರ್ಷಗಳ ಹಿಂದೆ ಶ್ರೇಷ್ಠ ತಾಯಿ-ಮಗು ಆರೈಕೆ ಕೇಂದ್ರವನ್ನು ಸ್ಥಾಪಿಸಲಾಯಿತು. 2018ರಲ್ಲಿ ಎಸ್‍ಸಿಎಸ್ ಇನ್ಸ್ಟಿಟ್ಯೂಟ್ ಫಾರ್ ಲಿವರ್ ಅಂಡ್ ಗ್ಯಾಸ್ಟ್ರೋ ಇಂಟೆಸ್ಟೈನಲ್ ಡಿಸಾರ್ಡರ್ಸ್ ಎಂಬ ಸೂಪರ್ ಸ್ಪೆಷಾಲಿಟಿ ಕೇಂದ್ರವನ್ನು ಆರಂಭಿಸಲಾಯಿತು. 128-ಸ್ಲೈಸ್ ಕಾರ್ಡಿಯಕ್ ಸಿಟಿ ಸ್ಕ್ಯಾನರ್ ಸೇರ್ಪಡೆಯೊಂದಿಗೆ, ಎಸ್‍ಸಿಎಸ್ ಆಸ್ಪತ್ರೆ ಈ ಪ್ರದೇಶದಲ್ಲಿ ಅತ್ಯಲ್ಪ ಸಮಯದಲ್ಲಿ, ಅತ್ಯುತ್ತಮ ರೆಸಲ್ಯೂಶನ್‍ನ, ನೋವುರಹಿತ ಹೃದಯ ಸ್ಕ್ಯಾನಿಂಗ್ ಸೌಲಭ್ಯವನ್ನು ನೀಡುವ ಕೆಲವು ಆಯ್ದ ಆಸ್ಪತ್ರೆಗಳ ಪೈಕಿಯಲ್ಲಿ ಒಂದಾಗಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಪ್ರಾರಂಭಿಕ ಪತ್ತೆ ಮತ್ತು ಚಿಕಿತ್ಸೆ ಮಟ್ಟವನ್ನು ಮಹತ್ತರವಾಗಿ ಸುಧಾರಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ 4K ಲ್ಯಾಪರೊಸ್ಕೋಪಿ ಹಾಗೂ 4ಕೆ ಎಂಡೋಸ್ಕೋಪಿ (Olympus Inc., Japan) ಸೇವೆಗಳನ್ನು ಪ್ರಾರಂಭಿಸಲಾಯಿತು. ಪೀಡಿಯಾಟ್ರಿಕ್ ಮತ್ತು ನವಜಾತ ಶಿಶು ಆರೈಕೆಗೆ ಅತ್ಯಾಧುನಿಕ PICU ಹಾಗೂ NICU ಸೌಲಭ್ಯಗಳನ್ನು ಪ್ರಾರಂಭಿಸಲಾಯಿತು. ವಯಸ್ಕರ ಆರೈಕೆಗೆ ವಿನ್ಯಾಸಗೊಳಿಸಿದ ಹೊಸ MICU, ಧನಾತ್ಮಕ ಮತ್ತು ಋಣಾತ್ಮಕ ಒತ್ತಡದ ವಿಂಗಡಿತ ವಲಯಗಳೊಂದಿಗೆ ಅತ್ಯುತ್ತಮ ತೀವ್ರ ನಿಗಾ ಸೇವೆ ಒದಗಿಸುತ್ತದೆ. ಹೃದಯ ರೋಗಗಳ ನಿಖರ ತಪಾಸಣೆಗಾಗಿ 128 ಸ್ಲೈಸ್ ಫುಜಿಫಿಲ್ಮ್ ಸಿನೇರಿಯಾ ವ್ಯೂ ಕಾರ್ಡಿಯಕ್ ಸಿಟಿ ಸ್ಕ್ಯಾನರ್ ಸ್ಥಾಪಿಸಲಾಗಿದೆ. ಎಸ್‍ಸಿಎಸ್ ಆಸ್ಪತ್ರೆಯು ಸಮಾಜದ ಎಲ್ಲಾ ವರ್ಗದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಬದ್ಧತೆಯನ್ನು ಸದಾ ಮುಂದುವರಿಸಿದೆ. 2025ರಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು CAHO (Consortium of Accredited Healthcare Organization) ನಡೆಸಿದ ಸಮಗ್ರ ಭಾರತದಲ್ಲಿ ನಡೆಸಲಾದ ಎಂಡೋಸೇಫ್ ಆಡಿಟ್‍ನಲ್ಲಿ, ಎಸ್‍ಸಿಎಸ್ ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಜಿ ವಿಭಾಗವು ದಕ್ಷಿಣ ಭಾರತದ ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲಿ “ಎಂಡೋಸೇಫ್ ಎಕ್ಸಲೆನ್ಸ್” ಪ್ರಶಸ್ತಿಗೆ ಪಾತ್ರವಾಯಿತು.

You may also like

News

ಮಂಗಳೂರಿನಲ್ಲಿ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನ; ಇಬ್ಬರು ಹಿರಿಯ ಕವಯತ್ರಿಯರಿಗೆ ಗೌರವ – ರೇಮಂಡ್ ಡಿಕುನಾ ತಾಕೊಡೆ

ಮಂಗಳೂರಿನಲ್ಲಿ ಜುಲೈ 19ರಂದು ಭಾನುವಾರ ನಡೆಯಲಿರುವ 5ನೇ ರಾಷ್ಟ್ರೀಯ ಕೊಂಕಣಿ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳೂರಿನ ಹಿರಿಯ ಕವಯತ್ರಿ ಅರುಂಧತಿ ವಿ. ರಾವ್ ಹಾಗೂ ಗೋವಾದ ಹಿರಿಯ
News

Mangalore Diocese Equips Parish Convenors to Strengthen Inter-Religious Harmony

The Inter-Religious Dialogue Commission of the Diocese of Mangalore conducted a training programme for Parish Convenors on Sunday at the

You cannot copy content of this page