ಪೊಲೀಸರು ಸೀಜ್ ಮಾಡಿದ ಕಾರಿನಲ್ಲಿ ಇತ್ತು ಸೀಕ್ರೆಟ್ ಖಜಾನೆ!
ಒಂದು ತಿಂಗಳಿನಿಂದ ಠಾಣೆಯಲ್ಲಿದ್ದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ನಗದು, ಚಿನ್ನ ಮತ್ತು ಬೆಳ್ಳಿ ಪತ್ತೆ

ಪೊಲೀಸರ ಕಣ್ಣೆದುರೇ ಒಂದು ತಿಂಗಳಿನಿಂದ ಠಾಣೆ ಆವರಣದಲ್ಲಿ ಸೀಜ್ ಆಗಿ ನಿಂತಿದ್ದ ಕಾರಿನೊಳಗಿಂದ ಲಕ್ಷಾಂತರ ರೂಪಾಯಿ ನಗದು, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಮಾಜಿ ಶಿಕ್ಷಣ ಸಚಿವ ದಿ. ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳಿ ಗ್ಯಾಂಗ್ನ ಮೂವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಅವರು ಎಸ್ಕೇಪ್ ಆಗಲು ಬಳಸಿದ್ದ ಕಾರನ್ನು ಸೀಜ್ ಮಾಡಿದ್ದರು. ಇತ್ತೀಚೆಗೆ ನ್ಯಾಯಾಲಯದ ಆದೇಶದಂತೆ ಕಾರನ್ನು ಬಿಡುಗಡೆ ಮಾಡುವ ಮುನ್ನ ಪೊಲೀಸರು ಪರಿಶೀಲನೆ ನಡೆಸಿದಾಗ, ಅಚ್ಚರಿಯ ರೀತಿಯಲ್ಲಿ ಕಾರಿನ ಸೀಟ್ ಅಡಿಯಲ್ಲಿ ಬಚ್ಚಿಟ್ಟಿದ್ದ 595 ಗ್ರಾಂ ಚಿನ್ನ, 589 ಗ್ರಾಂ ಬೆಳ್ಳಿ ಹಾಗೂ ₹3,41,150 ನಗದು ಪತ್ತೆಯಾಗಿದೆ.

ಪತ್ತೆಯಾದ ವಸ್ತುಗಳ ಒಟ್ಟು ಮೌಲ್ಯ ಕೋಟಿಗೂ ಅಧಿಕ ಎನ್ನಲಾಗಿದ್ದು, ಕಳ್ಳತನವಾಗಿದ್ದ ವಸ್ತುಗಳಿಗಿಂತಲೂ ಹೆಚ್ಚಿನ ಚಿನ್ನ–ಬೆಳ್ಳಿ ಸಿಕ್ಕಿರುವುದರಿಂದ ಗ್ಯಾಂಗ್ ಇನ್ನೂ ಅನೇಕ ಸ್ಥಳಗಳಲ್ಲಿ ಕಳ್ಳತನ ನಡೆಸಿರುವ ಶಂಕೆ ಉಂಟಾಗಿದೆ.
ಆಗಸ್ಟ್ 21 ರಂದು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್ನ ಮಾಜಿ ಸಚಿವ ಗೋವಿಂದೇಗೌಡರ ಪುತ್ರ ಹೆಚ್.ಜಿ. ವೆಂಕಟೇಶ್ ರವರ ಮನೆಯಲ್ಲಿ ಕಳ್ಳತನ ನಡೆದಿತ್ತು. 6 ಲಕ್ಷ ರೂಪಾಯಿ ನಗದು ಹಾಗೂ 37.5 ಲಕ್ಷ ರೂಪಾಯಿ ಮೌಲ್ಯದ ಆಭರಣ ಕಳೆದುಕೊಂಡಿದ್ದರು. ಈ ಕಳ್ಳತನ ಪ್ರಕರಣದಲ್ಲಿ ನೇಪಾಳ ಮೂಲದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್ ಹಾಗೂ ಕರಂ ಸಿಂಗ್ ಬಹಾದ್ದೂರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದರು. ಒಂದೂವರೆ ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನ ಜಪ್ತಿ ಮಾಡಿದ್ದರು. ಈ ಪತ್ತೆಯಿಂದ ಚಿಕ್ಕಮಗಳೂರು ಪೊಲೀಸರು ಮತ್ತೊಮ್ಮೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.




