ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ದಾಖಲೆ ಪ್ರಸಾರ – ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಜಾನುವಾರು ಸಾಗಾಟದ ಯಾವುದೇ ಅನುಮತಿ ನೀಡಿಲ್ಲ – ಪಶು ವೈದ್ಯಾಧಿಕಾರಿ ಸ್ಪಷ್ಟನೆ

ಜಾನುವಾರುಗಳ ಖರೀದಿ ರಶೀದಿಗಳು – ತಿದ್ದುಪಡಿ ಮಾಡಲ್ಪಟ್ಟ ಸುಳ್ಳು ದಾಖಲೆಗಳು – ಮಾರುಕಟ್ಟೆ ಸಮಿತಿ ಕಾರ್ಯದರ್ಶಿ

ಆರೋಪಿಗಳನ್ನು ರಕ್ಷಿಸಲು ಒಳಸಂಚು ರೂಪಿಸಿ, ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಪ್ರಕರಣ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅ.ಕ್ರ: 115/2025 ರಂತೆ, ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 132, 109, 303(2) r/w 3(5) ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಕಾಯ್ದೆ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 6, 12 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸದ್ರಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳ ಖರೀದಿ ರಶೀದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದ ದಾಖಲೆಗಳನ್ನು ವಿಚಾರಿಸಿದಾಗ, ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರು ಜಾನುವಾರು ಸಂತೆ ಶುಕ್ರವಾರದಂದು ಮಾತ್ರ ನಡೆಯುವುದಾಗಿ ಹಾಗೂ ಪ್ರಸಾರವಾಗಿದ್ದ ರಶೀದಿಗಳು (ಕ್ರಮ ಸಂಖ್ಯೆ: 27653 ಮತ್ತು 27654) ತಿದ್ದುಪಡಿ ಮಾಡಲ್ಪಟ್ಟ ಸುಳ್ಳು ದಾಖಲೆಗಳೆಂದು ದೃಢಪಡಿಸಿದ್ದಾರೆ.

ಇದೇ ವೇಳೆ RTO ಅಧಿಕಾರಿ ಹಾಗೂ ಪಶು ವೈದ್ಯಾಧಿಕಾರಿಗಳು ಕೂಡಾ ಸದ್ರಿ ವಾಹನಕ್ಕೆ ಜಾನುವಾರು ಸಾಗಾಟದ ಯಾವುದೇ ಅನುಮತಿ ನೀಡಿಲ್ಲವೆಂದು ತಿಳಿಸಿದ್ದಾರೆ. ಪೊಲೀಸರು ಮುಂದುವರಿದು ಈ ಸುಳ್ಳು ದಾಖಲೆಗಳ ಬಗ್ಗೆ ತಿಳಿದಿದ್ದರೂ ಕೂಡಾ ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ State Office SDPI Karnataka ಹೆಸರಿನ “X” ಖಾತೆ, Thejasnews.com ನ ಮಾಲಕ/ಸಂಪಾದಕ ಸಾದತ್ ಬಜತೂರು ಸೇರಿದಂತೆ ಇತರ ಸಾಮಾಜಿಕ ಜಾಲತಾಣ ಬಳಕೆದಾರರು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದರೆಂದು ಪತ್ತೆಹಚ್ಚಿದ್ದಾರೆ.
ಈ ಕೃತ್ಯದಿಂದ ಸಾರ್ವಜನಿಕರಲ್ಲಿ ಉದ್ವೇಗ ಉಂಟಾಗಿ, ಗುಂಪು ಸೇರಿ ಅಶಾಂತಿ ಉಂಟುಮಾಡುವ ಸನ್ನಿವೇಶ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 123/2025, ಕಲಂ 233, 240, 338, 353(1)(b), 192, 61(2)(b), 238(c) r/w 3(5) ಭಾರತೀಯ ನ್ಯಾಯ ಸಂಹಿತೆ 2023ರಂತೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ಜವಾಬ್ದಾರಿಯುತವಾಗಿ ಪ್ಲ್ಯಾಟ್ಫಾರ್ಮ್ಗಳನ್ನು ಬಳಸುವಂತೆ ಸಾರ್ವಜನಿಕರಿಗೆ ವಿನಂತಿ ಮಾಡಲಾಗಿದೆ.




