July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ – ಧರ್ಮಸ್ಥಳದಲ್ಲಿ ದ್ವಿ ಸಹಸ್ರ ಮದ್ಯವರ್ಜನ ಶಿಬಿರದ ಸಾವಿರಾರು ಮದ್ಯವರ್ಜಿತರ ಸಮಾವೇಶ

ಬರೆ ಬಾಯಿಮಾತಿನಿಂದ ಪರಿವರ್ತನೆ ಸಾಧ್ಯವಿಲ್ಲ. ಆದುದರಿಂದ ಕಾಯಕದ ಬಗ್ಗೆ ಮಾತು, ಉಪನ್ಯಾಸ ಅಗತ್ಯವಿಲ್ಲ. ಮಾತಿನಲ್ಲಿ ಹೇಳುವುದನ್ನು ಕಾಯಕದಲ್ಲಿ ಮಾಡಿ ತೋರಿಸಬೇಕು ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಹಿರೇಮಠದ ಗುರು ಶಾಂತೇಶ್ವರ ಸಂಸ್ಥಾನದ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅವರು ನವಂಬರ್ 06ರಂದು ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 2000ನೇ ಮದ್ಯವರ್ಜನ  ಶಿಬಿರದ ಸಾವಿರಾರು  ಮದ್ಯವರ್ಜಿತರ ಸಮಾವೇಶದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಧರ್ಮಸ್ಥಳದ  ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲವನ್ನೂ ಮಾತಿನಲ್ಲಿ ಹೇಳದೆ ಕೃತಿ ಮೂಲಕ, ಕಾಯಕದ ಮೂಲಕ ಕ್ರಾಂತಿಕಾರಿ ಪರಿವರ್ತನೆ ಮಾಡಿ ತೋರಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕ್ರಾಂತಿಕಾರಿ ಪರಿವರ್ತನೆ ಮಾಡಿ ತೋರಿಸಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಕನಸು ಕಂಡಿದ್ದ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ. ಮಹಿಳಾಸಬಲೀಕರಣ, ಮದ್ಯವರ್ಜನ ಶಿಬಿರಗಳು, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆ, ಸಹಕಾರ, ನಾಯಕತ್ವ, ಮಾನವೀಯ ಮೌಲ್ಯಗಳ ಉದ್ದೀಪನಕ್ಕೆ ಒತ್ತು ನೀಡಿದ್ದಾರೆ. ಉಚಿತ ಸಾಮೂಹಿಕ ವಿವಾಹ, ರುಡ್‌ಸೆಟ್ ಸಂಸ್ಥೆಗಳು, ಕೆರೆಗಳಿಗೆ ಕಾಯಕಲ್ಪ, ಶಾಲೆಗಳಿಗೆ ಪೀಠೋಪಕರಣಗಳ ವಿತರಣೆ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಇತ್ಯಾದಿ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.

ಜನಸಾಮಾನ್ಯರ ಹೃದಯದಲ್ಲಿ ದೇವರನ್ನು ಕಾಣುವ ಅವರು, ಸೇವೆಯ ಮೂಲಕ ದೇವರ ಸೇವೆಯನ್ನೂ ಮಾಡುತ್ತಿದ್ದಾರೆ. ಅವರ ದೂರದೃಷ್ಟಿ, ನಾಯಕತ್ವ ಹಾಗೂ ಚಿಂತನೆಗಳು ಇಡಿ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿ ಅಭಿನಂದಿಸಿದರು. ಮದ್ಯವರ್ಜನ ಶಿಬಿರ ಅತ್ಯಂತ ಪುಣ್ಯದ ಕಾಯಕ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ವ್ಯಸನಮುಕ್ತರು ಇತರ ಮದ್ಯವ್ಯಸನಿಗಳನ್ನೂ ವ್ಯಸನಮುಕ್ತರಾಗಿ ಮಾಡಬೇಕು ಎಂದು ಸಲಹೆ ನೀಡಿದರು. ಸಮಾವೇಶವನ್ನು ಉದ್ಘಾಟಿಸಿದ ಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಮಾತನಾಡಿ, ಆಚಾರವೇ ಸ್ವರ್ಗ, ಅನಾಚರವೇ ನರಕ ಎಂದು ಬಸವಣ್ಣ ಹೇಳಿದ ವಚನ ಸದಾ ನಾವು ನೆನಪಿನಲ್ಲಿಟ್ಟು ಸತ್ಕಾರ್ಯಗಳನ್ನೇ ಮಾಡಬೇಕು. ಎಲ್ಲರೂ ಜಾಗೃತರಾಗಿ ಅನ್ಯಾಯ, ಅತ್ಯಾಚಾರ ತಡೆಗಟ್ಟಬೇಕು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ಸಾಮಾಜಿಕ ಪರಿವರ್ತನೆಯ ಬಹುಮುಖಿ ಸೇವಾಕಾರ್ಯಗಳನ್ನು ಶ್ಲಾಘಿಸಿದರು.

ಇಷ್ಟು ದೊಡ್ಡ ಸಂಖ್ಯೆಯ ಮದ್ಯಮುಕ್ತರನ್ನು ಒಂದೇ ಕಡೆ ನೋಡುವುದೇ ಪುಣ್ಯದ ಕಾಯಕವಾಗಿದೆ. ಎಲ್ಲರನ್ನೂ ಮನೆಯ ಮಕ್ಕಳಂತೆ ಪ್ರೀತಿ-ವಿಶ್ವಾಸದಿಂದ ಸೇವಾಕಾರ್ಯ ಮಾಡುವ ಕಾಯಕವನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯದಲ್ಲಿ ಸಾಮಾಜಿಕ ಪಿಡುಗುಗಳು ಹಾಗೂ ದುಶ್ಚಟಗಳ ಬಗ್ಯೆ ಅರಿವು, ಜಾಗೃತಿ ಮೂಡಿಸುವ ನೀತಿಪಾಠಗಳನ್ನು ಅಳವಡಿಸಬೇಕು. ಈ ಬಗ್ಗೆ ತಾವು ಕೂಡಾ ಸರ್ಕಾರದಲ್ಲಿ ಒತ್ತಾಯಿಸುವುದಾಗಿ ಹೇಳಿದರು. ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅನಧಿಕೃತ ಹಾಗೂ ನಕಲಿ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಅವರು ಸಲಹೆ ನೀಡಿದರು. ಯಾವುದೇ ಪದವಿ, ಸ್ಥಾನ-ಮಾನಕ್ಕಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಕು ಎಂದು ಅವರು ಹೇಳಿದರು.

ವೀಡಿಯೊ ಬಿಡುಗಡೆಗೊಳಿಸಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಯಾರಿಗೂ ಬೇಡದವರಾಗಿ, ಕೀಳರಿಮೆ ಹೊಂದಿದ ಮದ್ಯ ವ್ಯಸನಿಗಳನ್ನು ವ್ಯಸನ ಮುಕ್ತರಾಗಿ ಪವಾಡ ಸದೃಶದಲ್ಲಿ ಪರಿವರ್ತನೆಗೊಳಿಸುವ ಕಾರ್ಯಕರ್ತರ ಯಶೋಗಾಥೆ ಅದ್ಭುತವಾಗಿದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ದೃಢಸಂಕಲ್ಪ ಶಕ್ತಿ ಇದ್ದಲ್ಲಿ ಶಿಸ್ತು ಮತ್ತು ಸಂಯಮದೊಂದಿಗೆ ನಾವು ಯಾವುದನ್ನೂ ಸಾಧಿಸಬಹುದು. ದುಶ್ಚಟಗಳ ಭಿಕ್ಷೆಗಿಂತ ಸದ್ಗುಣಗಳ ದೀಕ್ಷೆಯಿಂದ ಜೀವನ ಪಾವನವಾಗುತ್ತದೆ. ವ್ಯಸನಮುಕ್ತರು ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿದರು.
ಮದ್ಯ ವ್ಯಸನಿಗಳನ್ನು ವ್ಯಸನ ಮುಕ್ತರಾಗಿ ಮನ ಒಲಿಸಿದ ನವಜೀವನ ಸಮಿತಿ ಸದಸ್ಯರನ್ನು “ಜಾಗೃತಿ ಮಿತ್ರ” ಮತ್ತು “ಜಾಗೃತಿ ಅಣ್ಣ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿ. ಹರ್ಷೇಂದ್ರ ಕುಮಾರ್ ಸ್ಮರಣಸಂಚಿಕೆ ಬಿಡುಗಡೆಗೊಳಿಸಿದರು. ಪಾನಮುಕ್ತರ ಪರವಾಗಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಶಿಕ್ಷಕ ಸತ್ಯಮೂರ್ತಿ ಮತ್ತು ರಾಮದುರ್ಗದ ಸುವರ್ಣಬಸವರಾಜ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಬೆಂಗಳೂರು ಕ್ಷೇಮವನದ ಸಿ.ಇ.ಒ. ಶೃದ್ಧಾ ಅಮಿತ್ ಉಪಸ್ಥಿತರಿದ್ದರು.

 

ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು. ಅಖಿಲಕರ್ನಾಟಕ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್ ಮತ್ತು ಸಮಾಜ ಸೇವಕ ಮುಂಬೈನ ಆರ್.ಬಿ. ಹೆಬ್ಬಳ್ಳಿ ಅವರನ್ನು ಗೌರವಿಸಲಾಯಿತು. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಆಶಯ ನುಡಿಗಳ ಹೇಳಿ ಶುಭ ಹಾರೈಸಿದರು. ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮದ್ಯವರ್ಜಿತರು ಸಂಯಮ ಮತ್ತು ದೃಢ ಸಂಕಲ್ಪದಿAದ ಮುಂದೆ ಯಾವುದೇ ಆಕರ್ಷಣೆ, ಒತ್ತಡಕ್ಕೆ ಒಳಗಾಗದೆ ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯ್ಸ್ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ಧನ್ಯವಾದವಿತ್ತರು. ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ಮತ್ತು ಭಾಸ್ಕರ್ ಎನ್. ಕಾರ್ಯಕ್ರಮ ನಿರ್ವಹಿಸಿದರು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page