ವಿದ್ಯುತ್ ಪೂರೈಕೆಯಲ್ಲಿ ಗ್ರಾಹಕರಿಗೆ ಮೆಸ್ಕಾಂ ಉತ್ತಮ ಸೇವೆ ನೀಡುತ್ತಿದೆ – ಹರೀಶ್ ಕುಮಾರ್
ಬೆಳ್ತಂಗಡಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಾಸಗಳು ಆದಾಗ ಅಗತ್ಯ ಇರುವ ಕಡೆ ವಿದ್ಯುತ್ ಮಾರ್ಗ, ವಿದ್ಯುತ್ ಪರಿವರ್ತಕ, ಕಂಬಗಳ ಬದಲಾವಣೆ ಕಾರ್ಯ ಗ್ರಾಹಕರಿಗೆ ಸುರಕ್ಷತೆಯೊಂದಿಗೆ ಗುಣಮಟ್ಟದ ವಿದ್ಯುತ್ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಮಂಗಳೂರು ವಿದ್ಯುತ್ ಸರಬರಾಜು ಮಂಡಳಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು. ಅವರು ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ನವಂಬರ್ 6ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೆಸ್ಕಾಂ ಅಧ್ಯಕ್ಷನಾಗುವ ಅವಕಾಶವನ್ನು ಸರಕಾರ ಕಲ್ಪಿಸಿಕೊಟ್ಟಿದೆ. ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಆಗಿದೆ. ಸುಮಾರು 1.25 ಲಕ್ಷ ಕನೆಕ್ಷನ್ ಗ್ರಾಹಕರಿದ್ದಾರೆ. 31545 ಕೃಷಿ ಪಂಪ್ ಸೆಟ್ ಗಳಿವೆ. ಹಲವಾರು ಇಂಡಸ್ಟ್ರೀಸ್, ಕಮರ್ಷಿಯಲ್ ಗ್ರಾಹಾಕರಿದ್ದಾರೆ. ಇವರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.


ಈಗಾಗಲೇ ಸಾವಿರಾರು ಕುಟುಂಬಗಳಿಗೆ ಗೃಹಜ್ಯೋತಿಯ ಸೇವೆ ದೊರೆಯುತ್ತಿದ್ದು ರೂಪಾಯಿ 3.14 ಕೋಟಿ ಮೊತ್ತ ಮೆಸ್ಕಾಂಗೆ ಪಾವತಿ ಮಾಡಿದೆ. ತಾಲೂಕಿನಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ, ಬೇಸಿಗೆ ಕಾಲದಲ್ಲಿ ಲೋ ವೋಲ್ಟೇಜ್ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸಿದ್ದು ಈಗಾಗಲೇ ಕುತ್ಲೂರು ಮತ್ತು ಕಕ್ಕಿಂಜೆಯಲ್ಲಿ 110 ಕೆವಿ ಸಬ್ ಸ್ಟೇಷನ್ ಮಾಡಲಾಗುತ್ತಿದೆ. 11ಕೆವಿ ಇದ್ದ ಪೀಡರ್ ಗಳನ್ನು 41ಕೆವಿ ಪೀಡರ್ ಗಳಾಗಿ ಪರಿವರ್ತಿಸುವ ಕುರಿತು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಬೆಳ್ತಂಗಡಿ ತಾಲೂಕಿನ ರೈತಾಪಿ ವರ್ಗ ಹಾಗೂ ಕಮರ್ಷಿಯಲ್ ಗ್ರಾಹಕರಿಗೆ ವಿದ್ಯುತ್ ಸರಬರಾಜನ್ನು ಹೆಚ್ಚಿಸುವ ಸಲುವಾಗಿ ಇಲ್ಲೆ ಡಿವಿಜನ್ ಮಾಡಲು ನಿರ್ದೇಶಿಸಲಾಗಿದೆ. 2 ಸೆಟ್ ಪೀಡರ್ ಇದೆ, 4967 ಟ್ರಾನ್ಸ್ ಫರ್ ಇದೆ. ಸುಮಾರು 31545 ಕೃಷಿ ಪಂಪ್ ಸೆಟ್ ಗಳಿವೆ ಎಂದರು. ಇಲ್ಲಿನ ಲೋ ವೋಲ್ಟೇಜ್ ಸಮಸ್ಯೆಗಳನ್ನು ನಿವಾರಿಸಲು ಸುಮಾರು ಒಂದು ಸಾವಿರ ಟ್ರಾನ್ಸ್ ಫರ್ ಗಳು ಬೇಕಾಗಿರುವುದರಿಂದ ಅದರ ಬಗ್ಗೆ ಯೋಚಿಸಲಾಗಿದೆ. ಸಬ್ ಸ್ಟೇಷನ್ ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದು ಇಂದಬೆಟ್ಟು, ನಿನ್ನಿಕಲ್ಲುವಿನಲ್ಲಿ ಕೂಡಾ ಮಾಡಲಾಗುವುದು ಎಂದರು. ಐದು ಬೆಸ್ಕಾಂಗಳಲ್ಲಿ ಮೆಸ್ಕಾಂ ಮಾತ್ರ ಲಾಭದಾಯಕವಾಗಿದ್ದು ರೂಪಾಯಿ 12.72 ಕೋಟಿಯಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ.

ಪವರ್ ಮ್ಯಾನ್ ಗಳ ಕೊರತೆಯಿಂದ ವಿದ್ಯುತ್ ವ್ಯತ್ಯಾಸ ಕಂಡು ಬರುತ್ತಿದ್ದು 125 ಪವರ್ ಮ್ಯಾನ್ ಗಳು ಬೇಕಾಗಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪವರ್ ಮ್ಯಾನ್ ಹುದ್ದೆಗೆ ಅರ್ಜಿ ಹಾಕುವವರ ಸಂಖ್ಯೆ ವಿರಳವಾಗಿದೆ. ಈಗಾಗಲೇ 400 ಜನರು ನೇಮಕವಾದರು, 390 ಮಂದಿ ವರ್ಗಾವಣೆ ತೆಗೆದುಕೊಂಡಿದ್ದಾರೆ ಎಂದರು. ವಿದ್ಯುತ್ ಗ್ರಾಹಕರಿಗೆ ಒಳ್ಳೆಯ ಸರ್ವೀಸ್ ನೀಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಮೆಸ್ಕಾಂ ಎಂದಾಗ ಸಮಸ್ಯೆಗಳು ಖಂಡಿತವಾಗಿ ಬರುತ್ತದೆ. ಅದನ್ನು ಅತ್ಯಂತ ಪ್ರಾಮಾಣಿಕವಾಗಿ, ತಾಳ್ಮೆಯಿಂದ ನಿವಾರಿಸಲು ಪವರ್ ಮ್ಯಾನ್ ಗಳಿಗೆ ಸೂಚನೆ ನೀಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಗ್ಯಾರಂಟಿ ಯೋಚನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಉಪಸ್ಥಿತರಿದ್ದರು.




