April 19, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕುತ್ಲೂರು ಶಾಲೆಗೆ ಭೇಟಿ –  ವಿದ್ಯಾರ್ಥಿಗಳೊಂದಿಗೆ ಸಂವಾದ

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು. ಅವರು ನವಂಬರ್ 09ರಂದು ಶುಕ್ರವಾರ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸಿ ಹಿತವಚನ ನೀಡಿದರು.

ಶಾಲಾ ಆವರಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪುಟಾಣಿ ಮಕ್ಕಳು ಸಾಂಪ್ರದಾಯಿಕವಾಗಿ ಆರತಿ ಬೆಳಗಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿದರು.      ಬಳಿಕ ಅವರು ಬಿಎಎಸ್ಎಫ್ ಸಿ.ಎಸ್.ಆರ್. ನಿಧಿಯಿಂದ 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲೆಯಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವನೀರಿನ ಘಟಕವನ್ನು ಉದ್ಘಾಟಿಸಿ ಶಾಲಾ ವಠಾರದಲ್ಲಿ ಗಿಡ ನೆಟ್ಟರು. ಬಳಿಕ ತರಗತಿ ಕೋಣೆಯಲ್ಲಿ ಪುಟಾಣಿ ಮಕ್ಕಳೊಂದಿಗೆ ಸಂವಾದ ನಡೆಸಿ ಹಿತವಚನ ನೀಡಿದರು. ಜೋರು ಮಳೆ ಬಂದಾಗ ಶಾಲೆಗಳಿಗೆ ರಜೆ ಕೊಡುವ ಜಿಲ್ಲಾಧಿಕಾರಿ ನಾನೇ ಎಂದು ಮಕ್ಕಳಿಗೆ ತಮ್ಮ ಪರಿಚಯ ಮಾಡಿಕೊಂಡ ಅವರು ಸುಂದರ, ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಕಣ್ಮನ ಸೆಳೆಯುವ ಶಾಲೆಯ ಸೊಗಡನ್ನು ಶ್ಲಾಘಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಶಾಲೆಯ ಶಿಸ್ತು, ಪ್ರಶಾಂತ ವಾತಾವರಣ, ಆಟದ ಮೈದಾನ, ಹೂ ತೋಟ, ಸ್ವಚ್ಛತೆ, ಉತ್ತಮ ಶಿಕ್ಷಕವೃಂದ, ಸಹೃದಯ ಸಾರ್ವಜನಿಕರು ಮೊದಲಾದ ಪೂರಕ ಸೌಲಭ್ಯಗಳನ್ನು ಹೊಂದಿರುವ ನೀವೇ ಭಾಗ್ಯವಂತರು ಎಂದು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಪ್ರತಿದಿನವೂ ಸುತ್ತಮುತ್ತ ಹಸಿರು ಪರಿಸರ, ಸುಂದರವಾದ ಗುಡ್ಡ-ಬೆಟ್ಟಗಳ ಸೊಗಡನ್ನು ನಿಮಗೆ ಉಚಿತವಾಗಿ ಸವಿಯುವ, ಆಸ್ವಾದಿಸುವ ಸುವರ್ಣಾವಕಾಶವಿದೆ ಎಂದರು. ಚಿಕ್ಕಮಗಳೂರಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಾನು ಕಲಿತ ಪ್ರಾಥಮಿಕ ಶಿಕ್ಷಣದ ಕಷ್ಟಗಳನ್ನು ಅವರು ಸ್ಮರಿಸಿಕೊಂಡರು. ನಿಮ್ಮನ್ನು ಸಾಕಿ-ಸಲಹಿ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುವ ತಾಯಿ-ತಂದೆ ಮತ್ತು ಗುರುಗಳಿಗೆ ಸದಾ ಗೌರವ ಕೊಟ್ಟು ಅವರ ಸೇವೆಯನ್ನು ಧನ್ಯತೆಯಿಂದ ಸ್ಮರಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಸರ್ಕಾರ ಮತ್ತು ಸಮಾಜದ ಸಹಕಾರದಿಂದ ಸಾಧ್ಯವಾದಷ್ಟು ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ-ಮಾನ ಗಳಿಸಿ ಆದರ್ಶ ನಾಗರಿಕರಾಗಿ ಸಾರ್ಥಕ ಜೀವನ ನಡೆಸಿ ಎಂದು ಹೇಳಿ ಅವರು ಶುಭ ಹಾರೈಸಿದರು.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವೀಸಾನಿಕಂ, ಬಿಎಎಸ್ಎಫ್ ಸೈಟ್ ಇಂಜಿನಿಯರ್ ಶ್ರೀನಿವಾಸ್ ಪ್ರಾಣೇಶ್, ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ ಪೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಕೋಶಾ ಧಿಕಾರಿ ಪುಷ್ಪರಾಜ್ ಬಿ. ಎನ್., ನಾರಾವಿ ಗ್ರಾಮಪಂಚಾಯಿತಿ ಸದಸ್ಯರು, ಶಿವಕುಮಾರ್, ಸಂತೋಷ್ ಪೈ, ಸೀತಾರಾಮ, ಪಿ.ಡಿ.ಒ. ಸುಧಾಕರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕನಕವರ್ಮ ಜೈನ್, ಶಾಲಾ ಮುಖ್ಯೋಪಾಧ್ಯಾಯಿನಿ ಪ್ಲಾವಿಯ ಡಿಸೋಜ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

You may also like

News

ಶಿಕ್ಷಣ ತಜ್ಞ ದಿವಂಗತ ಫಾದರ್ ಮೆಲ್ವಿನ್ ಜೆ. ಪಿಂಟೋ ಅವರಿಗೆ ಕ್ಷೇವಿಯರ್ ಐಟಿಐ ಸಂಸ್ಥೆಯಿಂದ ಭಾವಪೂರ್ಣ ಶ್ರದ್ಧಾಂಜಲಿ

ಏಪ್ರಿಲ್ 10ರಂದು ಶುಕ್ರವಾರ ನಿಧನರಾದ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿಗಳು ಹಾಗೂ ಹಿರಿಯ ಜೆಸ್ಯೂಟ್ ಶಿಕ್ಷಣ ತಜ್ಞರಾದ ಧರ್ಮಗುರು ವಂದನೀಯ ಫಾದರ್ ಮೆಲ್ವಿನ್ ಜೆ.
News

Graduation Ceremony of Father Muller School & College of Nursing and Father Muller College (Speech & Hearing) celebrated

The Father Muller School of Nursing, Father Muller College of Nursing, and Father Muller College (Speech & Hearing), units of

You cannot copy content of this page