ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ
ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ

ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು ಗುರುವಾರ ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಆರೋಪದಲ್ಲಿ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದಿಂದ ಬಂಧಿಸಿದ್ದಾರೆ. ಆರೋಪಿ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಎನ್. ಅಬೂಬಕ್ಕರ್ ರವರ ಹೆಸರಿನಲ್ಲಿರುವ ಜಮೀನಿನ RTCಯನ್ನು ತನ್ನ ಹೆಸರಿನ ಜಮೀನಿನ ದಾಖಲೆ ಎಂದು ತೋರಿಸಿ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದ. ಇದರ ಆಧಾರದ ಮೇಲೆ ಆರೋಪಿಗೆ ಜಾಮೀನು ದೊರಕಿತ್ತು. ಈ ಕುರಿತು ಎನ್. ಅಬೂಬಕ್ಕರ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 27ರಂದು ಭದ್ರತಾ ದಾಖಲೆಗಳ ನಕಲು ಹಾಗೂ ವಂಚನೆ ಆರೋಪದಡಿ (IPC ಸೆಕ್ಷನ್ಗಳು 417, 419, 467, 468, 471) ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ನಕಲಿ ಸಹಿ ಹಾಗೂ ಸುಳ್ಳು ಹೇಳಿಕೆಗಳ ಮೂಲಕ ವಂಚನೆ ಎಸಗಿದ್ದ ಅಬ್ದುಲ್ ಹಾಶೀಮ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ಪ್ರಕರಣದಲ್ಲಿ ಮುಂಚೆಯೇ 32 ವರ್ಷ ಪ್ರಾಯದ ಅಬೂಬಕ್ಕರ್, ಬಿನ್. ಹಮ್ಮದ್ ಬ್ಯಾರಿ ಎಂಬಾತನನ್ನೂ ಪೊಲೀಸರು ಬಂಧಿಸಿದ್ದರು.

ಸಾರ್ವಜನಿಕರ ಆತಂಕ – ಪುತ್ತೂರಿನಲ್ಲಿ ನಕಲಿ ದಾಖಲೆ ಜಾಲ ಸಕ್ರಿಯ?
ಈ ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಪುತ್ತೂರು ತಾಲೂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಾಮೀನು ನೀಡುವ ಹಾಗೂ ಇತರ ಅಪರಾಧಗಳಲ್ಲಿ ತೊಡಗಿರುವ ಸಂಘಟಿತ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಬೇಕು ಹಾಗೂ ಇಂತಹ ಸಮಾಜಘಾತಕ ಚಟುವಟಿಕೆಗಳಿಗೆ ತಡೆ ನೀಡಬೇಕು ಎಂದು ಸಾಮಾಜಿಕ ಮುಖಂಡರು ಆಗ್ರಹಿಸಿದ್ದಾರೆ.




