ಆಳ್ವಾಸ್ ಕಾಲೇಜಿನ ಚೇತನ್ ಕೊಲೆ ಪ್ರಕರಣ — ಆರೋಪಿ ಚಿದಾನಂದನಿಗೆ ಜೀವಾವಧಿ ಶಿಕ್ಷೆ
ಮಾನ್ಯ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ಹಾಜರಾಗುವಂತೆ ಮಾಡಿದ ಮೂಡಬಿದ್ರೆ ಪೊಲೀಸ್ ಠಾಣಾ ಸಿಬ್ಬಂದಿ ಅಶೋಕ್

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಳ್ವಾಸ್ ಕಾಲೇಜಿನ ಕ್ಯಾಂಟಿನ್ನಲ್ಲಿ 2020ರ ಅಕ್ಟೋಬರ್ 30ರಂದು ನಡೆದ ಚೇತನ್ ಕೊಲೆ ಪ್ರಕರಣದಲ್ಲಿ ಆರೋಪಿ ಚಿದಾನಂದ ಪರಶುನಾಯ್ಕರ್ ಇವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪೊಲೀಸರ ವರದಿಯ ಪ್ರಕಾರ ಕಾರ್ಕಳ ತಾಲೂಕು, ಕಾಂತಾವರ ಗ್ರಾಮದ ಬೇಲಾಡಿ ಅಂಚೆ ವ್ಯಾಪ್ತಿಯ ದೊಡ್ಡಜೆ ಮನೆ ನಿವಾಸಿ 42 ವರ್ಷ ಪ್ರಾಯದ ರಾಜೇಶ್ ಪೂಜಾರಿ ಎಂಬವರು ಠಾಣೆಗೆ ಬಂದು ನೀಡಿರುವ ಲಿಖಿತ ದೂರಿನಂತೆ 22 ವರ್ಷ ಪ್ರಾಯದ ಚೇತನ್ ಹಾಗೂ ಚಿದಾನಂದ ಇಬ್ಬರೂ ಆಳ್ವಾಸ್ ಕ್ಯಾಂಟಿನ್ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮತ್ತು ವೈಯುಕ್ತಿಕ ವಿಚಾರದಲ್ಲಿ ಉಂಟಾದ ವೈಮನಸ್ಸಿನಿಂದ ಚಿದಾನಂದನು ರಾತ್ರಿ 12.45ರ ಸುಮಾರಿಗೆ ಚೇತನ್ ಮಲಗಿದ್ದ ಕೊಠಡಿಗೆ ನುಗ್ಗಿ ಕಬ್ಬಿಣದ ರಾಡ್ನಿಂದ ತಲೆ ಹಾಗೂ ಮುಖದ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದನು. ಗಾಯಗೊಂಡ ಚೇತನ್ ರವರನ್ನು ತಕ್ಷಣವೇ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.

ಈ ಪ್ರಕರಣದಲ್ಲಿ ಮೂಡಬಿದ್ರೆ ಠಾಣಾ ಪೊಲೀಸರು ಕಲಂ ಸಂಖ್ಯೆ 302, 307, 448, 504, 506 ಮತ್ತು 201 ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಬಿ.ಎಸ್. ದಿನೇಶ್ ಕುಮಾರ್ ಮತ್ತು ಸಹಾಯಕ ಕಾಂತಪ್ಪರವರ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಸಾಕ್ಷಿದಾರರನ್ನು ವಿಚಾರಿಸಿ ಸಾಕ್ಷ್ಯಾಧಾರ ಸಂಗ್ರಹಿಸಲಾಯಿತು.
ಮಂಗಳೂರಿನ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಘನ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶರವರು ಸರ್ಕಾರಿ ವಕೀಲೆಯಾದ ಜ್ಯೋತಿ ನಾಯಕ್ ರವರ ವಾದದ ಮೇರೆಗೆ ಆರೋಪಿಯ ಮೇಲೆ ಆರೋಪ ಸಾಬೀತಾಗಿರುವುದಾಗಿ ತೀರ್ಪು ನೀಡಿ ಆರೋಪಿ ಚಿದಾನಂದನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶವನ್ನು ನೀಡಲಾಗಿದೆ.

ಮಾನ್ಯ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ಹಾಜರಾಗುವಂತೆ ಮೂಡಬಿದ್ರೆ ಪೊಲೀಸ್ ಠಾಣಾ ಸಿಬ್ಬಂದಿ ಅಶೋಕ್ ರವರು ಸಹಕರಿಸಿರುತ್ತಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




