ಮಂಗಳೂರಿನಲ್ಲಿ ಮುಖ್ಯ ನೀರು ಸರಬರಾಜು ಕೊಳವೆ ಹಾನಿ – ನಾಳೆ ನವೆಂಬರ್ 19ರವರೆಗೆ ನೀರು ವ್ಯತ್ಯಯ ಸಾಧ್ಯತೆ
ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ (80 MLD) ರೇಚಕ ಸ್ಥಾವರದಿಂದ ನಗರಕ್ಕೆ ನೀರು ಪೂರೈಸುವ 1,100 ಮಿ.ಮೀ. ವ್ಯಾಸದ ಪ್ರಮುಖ ಕೊಳವೆ ಹಾನಿಯಾಗಿದ್ದು ನಿನ್ನೆ ನವೆಂಬರ್ 17ರಂದು ಸೋಮವಾರ ಬೆಳಗಿನ ಜಾವ ಪಡೀಲ್ ಸಮೀಪದ ಕಣ್ಣೂರು ಪ್ರದೇಶದಲ್ಲಿ ಸಂಭವಿಸಿದೆ. ಘಟನೆ ಬಳಿಕ ಮಹಾನಗರ ಪಾಲಿಕೆ ತುರ್ತು ದುರಸ್ತಿ ಕಾರ್ಯಗಳನ್ನು ಆರಂಭಿಸಿದೆ. ದುರಸ್ತಿ ಕಾರ್ಯಗಳು ನಾಳೆ ನವಂಬರ್ 19ರಂದು ಬುಧವಾರ ಬೆಳಿಗ್ಗೆ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಸಂಜೆ ವೇಳೆಗೆ ನೀರು ಸರಬರಾಜು ಯಥಾಸ್ಥಿತಿಗೆ ಮರಳಲಿದೆ ಎಂದು ಪಾಲಿಕೆ ತಿಳಿಸಿದೆ.



ಕೊಳವೆ ಹಾನಿಯಿಂದಾಗಿ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು –ಪಳ್ನೀರ್, ಮುಳಿಹಿತ್ಲು, ಬೋಳಾರ, ಕಾರ್ ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್ನಗರ, ಚಿಲಿಂಬಿ, ಕೋಡಿಕಲ್, ಉರ್ವಾ ಸ್ಟೋರ್, ಆಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕಡ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು ಪರಿಸ್ಥಿತಿಯನ್ನು ಮನಗಂಡು ಸಹಕರಿಸಬೇಕೆಂದು ಮಹಾನಗರ ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ವಿನಂತಿಸಿದ್ದಾರೆ.




