August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಾಯಿಲ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಸೂರಿಕುಮೇರುವಿನ ಜೆಸಿಂತಾ ಮಸ್ಕರೇನ್ಹಸ್ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ 

ಸುಧೀರ್ಘ 27 ವರ್ಷಗಳ ಸೇವೆ

ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಬಾಯಿಲ ಕಿರಿಯ ಪ್ರಾಥಮಿಕ ಶಾಲೆ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿ ಯಾಗಿತ್ತು. ಶಾಲೆಯಲ್ಲಿ ಸುದೀರ್ಘ 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ  ಇಲಾಖೆಯ ನಿಯಮದ ಪ್ರಕಾರ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಸೂರಿಕುಮೇರುವಿನ ಜೆಸಿಂತಾ ಪ್ಲೇವಿ ಮಸ್ಕರೇನಸ್  ಇವರ ಬೀಳ್ಕೊಡುಗೆ ಕಾರ್ಯಕ್ರಮವು ನವೆಂಬರ್ 23ರಂದು ಭಾನುವಾರ ವಿಶೇಷವಾಗಿ ಜರಗಿತು. ಶಾಲಾ ಹಿರಿಯ ವಿದ್ಯಾರ್ಥಿಗಳು ಸೇರಿ ಗುರುವಿಗೆ ಗುರುದಕ್ಷಿಣೆಯಾಗಿ  ಶಾಲೆಯಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಮಾಡುವುದರ ಮೂಲಕ ಸೇವಾ ಕಾರ್ಯವನ್ನು ಮಾಡಿ ಅದ್ದೂರಿಯಾಗಿ ಬೀಳ್ಕೊಟ್ಟರು.

ಮಂಗಳೂರಿನ ಎ.ಜೆ.  ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕುಂಟಿಕಾನ ಮಂಗಳೂರು ಇವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಸೆಂಟರ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಿ ವಹಿಸಿದ್ದರು. ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕಿಯ ಸೇವೆಯನ್ನು ಸ್ಮರಿಸಿದರು.

“ಓದು ಜ್ಞಾನಕ್ಕೆ ದಾರಿ, ಜ್ಞಾನ ಬದುಕಿಗೆ ಬೆಳಕು” ಎಂಬ ಮಾತಿನಂತೆ ಶಿಕ್ಷಕಿ ಜೆಸಿಂತಾ ಸೂರಿಕುಮೇರು ರವರು ಬಾಯಿಲ ಶಾಲೆವೆಂಬ ಪುಟ್ಟ ವಿದ್ಯಾ ದೇಗುಲದಲ್ಲಿ  27 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣಾಮೃತವನ್ನು ಉಣಪಡಿಸಿ ಪರಿಸರದಲ್ಲಿ ಅತ್ಯುತ್ತಮ ಶಿಕ್ಷಕಿಯಾಗಿ ಶಾಲೆ ಹಾಗೂ ಇಲಾಖೆಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು ಒಳ್ಳೆಯ ವ್ಯಕ್ತಿಗಳನ್ನು ರೂಪಿಸುವಲ್ಲಿ ಮೆಟ್ಟಿಲಾಗಿ ನಿಂತವರು ಎಂದು ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ  ತಮ್ಮ ಅಭಿನಂದನಾ ಮಾತಿನಲ್ಲಿ ತಿಳಿಸಿದರು. ವರ್ಗಾವಣೆ ಗೊಳ್ಳುತ್ತಿರುವ ಶಿಕ್ಷಕಿಗೆ ಬಾಯಿಲ ಶಾಲೆಯ ಶಾಶ್ವತ  ನೆನಪಿಗಾಗಿ  ಶಾಲಾ ಕಟ್ಟಡದ ಮಾದರಿಯನ್ನು ರಚಿಸಿ ಉಡುಗೊರೆಯಾಗಿ ನೀಡಲಾಯಿತು.

ಗೌರವ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಜೆಸಿಂತಾ ತನ್ನ ಸುದೀರ್ಘ ಸಮಯದ ಸೇವೆಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು, ಶಾಲೆಗೆ ಕರ್ತವ್ಯಕ್ಕೆ ಸೇರಿದ ದಿನದಿಂದ ನಡೆದು ಬಂದ ಪ್ರತಿಯೊಂದು ಅನುಭವದ ಬುತ್ತಿಯನ್ನು ತಮ್ಮ ಮಾತಿನ ಮೂಲಕ ತೆರೆದಿಟ್ಟರು. ಶಿಕ್ಷಕ ವೃತ್ತಿಯು ಕೇವಲ ಶಿಕ್ಷಣವನ್ನು ಒದಗಿಸುವುದಷ್ಟೇ ಅಲ್ಲದೆ ವಿದ್ಯಾರ್ಥಿಗಳ ಮತ್ತು ಪೋಷಕ ಸಮುದಾಯದ ನೆರವು ದೊರೆತಾಗ ಅವರ ಜೊತೆಗಿನ ಸಂಬಂಧವು ಗಟ್ಟಿಯಾಗಿ ಬೆಳೆಯಲು ಸಾಧ್ಯ, ಈ ಪ್ರಕಾರವಾಗಿ ತಮ್ಮ ಕರ್ತವ್ಯದ ದಿನಗಳಲ್ಲಿ ಅವರ ಜೊತೆ ಒಡನಾಟದ ಸಂಬಂಧವನ್ನು ತಿಳಿಸಿದಾಗ ಪ್ರೀತಿ ಹಾಗೂ ಗೌರವಾದಾರಗಳಿಂದ ಎಲ್ಲರ ಕಣ್ಣುಗಳು ತುಂಬಿ ಬಂದವು.

ಈ ಸಂದರ್ಭದಲ್ಲಿ ಶಾಲೆಗೆ ಉಚಿತವಾಗಿ ತರಕಾರಿ ಪೂರೈಸುತ್ತಿರುವ ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ ಮಾಲಕ ಶರೀಫ್, 45 ಬಾರಿ ರಕ್ತದಾನ ಮಾಡಿದ ಲೋಕೇಶ್ ಸುವರ್ಣ ಬಿ.ಸಿ. ರೋಡ್, ಶಾಲಾ ಗೌರವ ಶಿಕ್ಷಕಿಯರನ್ನು ಮತ್ತು ಅಂಗನವಾಡಿ ಹಾಗೂ ಶಾಲಾ  ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ಕೆ ಮೊದಲು ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ವೇದಿಕೆಯಲ್ಲಿ ವೀರಕಂಭ ಪಂಚಾಯತ್ ಸದಸ್ಯೆ ಲಕ್ಷ್ಮಿ, ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಂಗೇರ, ಕೃಷ್ಣಪ್ಪ ಪೂಜಾರಿ ಕೆಪುಳ ಕೋಡಿ, ಸಂದೀಪ್ ಶೆಟ್ಟಿ ಅರೆಬೆಟ್ಟು, ಜಯಪ್ರಕಾಶ್ ತೆಕ್ಕಿಪಾಪು, ರಮಾನಂದ ಶೆಟ್ಟಿ, ಡಾಕ್ಟರ್ ಗಣೇಶ್ ಚಾರ್ಮಾಡಿ, ಡಾ. ನಾಗಭೂಷಣ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು  ಮಕ್ಕಳ ಪೋಷಕರು, ಶಾಲಾ ಹಿರಿಯ ವಿದ್ಯಾರ್ಥಿಗಳು, ರಾಜೀವ್ ಯುವಕ ಮಂಡಲ ಬಾಯಿಲ, ಎ.ಬಿ. ಪ್ರೆಂಡ್ಸ್ ಬಾಯಿಲ, ಯುವಕೇಸರಿ ಫ್ರೆಂಡ್ಸ್ ಅರೆಬೆಟ್ಟು ಇದರ ಸದಸ್ಯರುಗಳು, ಶಿಕ್ಷಕಿಯ ಅಭಿಮಾನಿಗಳು ಉಪಸ್ಥಿತರಿದ್ದರು.

ಶಾಲಾ ಮಕ್ಕಳಾದ ಪ್ರತ್ವಿಕ್, ಪ್ರಕೃತಿ, ಲಾಸ್ಯ, ಯೋಕ್ಷಿತ್ ಪ್ರಾರ್ಥಿಸಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ವಾರಿಜಾಕ್ಷಿ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಪ್ರತೀಕ ಅಭಿನಂದನ ಪತ್ರ ವಾಚಿಸಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್ ವಂದಿಸಿದರು. ಶಾಲಾ ಹಿರಿಯ ವಿದ್ಯಾರ್ಥಿಗಳಾದ ನಿರ್ಮಲ ಹಾಗೂ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page