ಬಹು ಅಪರಾಧವೆಸಗಿ ಪರಾರಿಯಾಗಿದ್ದ ದಿನೇಶ್ ಶೆಟ್ಟಿ ಬಂಧನ
ಮಂಗಳೂರು ನಗರ ಪೊಲೀಸ್ ಪತ್ರಿಕಾ ಪ್ರಕಟಣೆಯ ಪ್ರಕಾರ, ಹಲವು ಗಂಭೀರ ಅಪರಾಧಗಳಲ್ಲಿ ಬೇಕಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾಯರ್ ತರ್ಪು ನಾಲಾ, ಮುಗಳಿ ಹೊಸ ಮನೆಯಲ್ಲಿ ವಾಸವಿರುವ ಟಿ. ದಿನೇಶ್ ಶೆಟ್ಟಿ @ ದಿನ್ನು ಅವರನ್ನು ನವೆಂಬರ್ 25ರಂದು ಎಸಿಪಿ ಉತ್ತರ ಉಪವಿಭಾಗ ಹಾಗೂ ಅವರ ತಂಡ ಬಂಧಿಸಿದೆ.

ದಿನೇಶ್ ಶೆಟ್ಟಿಗೆ ಮಂಗಳೂರು ದಕ್ಷಿಣ ಠಾಣೆಯ ಅಕ್ರ ಸಂಖ್ಯೆ 144/2009ರಲ್ಲಿ ದಾಖಲಾಗಿರುವ ನ್ಯಾಯವಾದಿ ಖಾಸೀಂ ನೌಷಾದ್ ಕೊಲೆ ಪ್ರಕರಣದಲ್ಲಿ ಭೂಗತ ಲೋಕದ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೀಶ್ರಿಂದ ಸುಪಾರಿ ಪಡೆದು ಕೊಲೆ ನಡೆಸಿದ ಆರೋಪ ಸಾಬೀತಾಗಿ, ಮಾನ್ಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅವರು ಸುಮಾರು 11 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸಿದ ನಂತರ, ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅಪೀಲ್ ಸಲ್ಲಿಸಿ ಡಿಸೆಂಬರ್ 2019ರಲ್ಲಿ ಬಿಡುಗಡೆಯಾಗಿದ್ದರು.

ಜೈಲುಮುಕ್ತಿಯ ನಂತರವೂ ಅವರು ಅಪರಾಧ ಚಟುವಟಿಕೆಗಳನ್ನು ನಿಲ್ಲಿಸದೇ ಮುಂದುವರೆಸಿದಿದ್ದು, ಕಾವೂರು ಠಾಣೆಯ ಅಕ್ರ ಸಂಖ್ಯೆ 01/2019ರ ಅಪಹರಣ ಪ್ರಕರಣ, ಮಂಗಳೂರು ಉತ್ತರ ಠಾಣೆಯ ಅಕ್ರ ಸಂಖ್ಯೆ 88/2022ರ ವಂಚನೆ ಪ್ರಕರಣ, ಮಂಗಳೂರು ಉತ್ತರ ಠಾಣೆಯ ಅಕ್ರ ಸಂಖ್ಯೆ 06/2023ರ ಸುಲಿಗೆ ಪ್ರಕರಣ ಇವುಗಳಲ್ಲಿ ಭಾಗಿಯಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ, ಕಳೆದ ಒಂದೂವರೆ ವರ್ಷಗಳಿಂದ ಪರಾರಿಯಾಗಿದ್ದರು.

ನಿರಂತರ ನಿಗಾವಹಿಸಿದ್ದ ಎಸಿಪಿ ಉತ್ತರ ಉಪವಿಭಾಗದ ಅಧಿಕಾರಿಗಳು ಹಾಗೂ ತಂಡ ನಡೆಸಿದ ನಿಖರ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.




