ಮಂಗಳೂರಿನ ಭೂದಾಖಲೆಗಳ ಸಹಾಯಕ ನಿರ್ದೇಶಕ ರಾಜು ಬಿ.ಕೆ. ಸಹಿತ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇ ಕಚೇರಿಯ ಅಧಿಕಾರಿಗಳು
ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದಿಂದ ಇಂದು ನವೆಂಬರ್ 27ರಂದು ಗುರುವಾರ ನಡೆದ ಟ್ರಾಪ್ ಕಾರ್ಯಾಚರಣೆಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಅಧಿಕಾರಿಗಳು ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ವಶಕ್ಕೆ ಬಿದ್ದಿದ್ದಾರೆ. ಪಿರ್ಯಾದಿದಾರರು ದಕ್ಷಿಣ ಕನ್ನಡ ಜಿಲ್ಲೆಯ ಯು.ಪಿ.ಒ.ಆರ್. ಮಂಗಳೂರಿನಲ್ಲಿ ಹೊರಗುತ್ತಿಗೆ ನೌಕರರಾಗಿದ್ದು, ತಮ್ಮ ಬಾಕಿ ಸಂಬಳದ ಬಿಲ್ ಮಾಡಿಕೊಡುವುದು ಮತ್ತು ಮುಂದುವರಿದ ನೇಮಕಾತಿ ಆದೇಶ ನೀಡಿಕೊಡುವುದಕ್ಕಾಗಿ ಮೂವರು ಅಧಿಕಾರಿಗಳು ಒಟ್ಟು ರೂಪಾಯಿ 70,000 ಲಂಚವನ್ನು ಬೇಡಿಕೊಂಡಿದ್ದರು.
ಪಿರ್ಯಾದಿಯ ಪ್ರಕಾರ —
ಕೃಷ್ಣಮೂರ್ತಿ – ಸರ್ವೆಯರ್, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಉಳ್ಳಾಲ ಇವರಿಗೆ ರೂಪಾಯಿ 50,000

ಬಿ.ಕೆ. ರಾಜು – ಭೂದಾಖಲೆಗಳ ಸಹಾಯಕ ನಿರ್ದೇಶಕರು, ಮಂಗಳೂರು ತಾಲೂಕು – ರೂಪಾಯಿ 10,000

ಎಸ್. ಧನಶೇಖರ – ಸರ್ವೆ ಸುಪರ್ವೈಸರ್, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಮಂಗಳೂರು ತಾಲೂಕು – ರೂ 10,000 ಲಂಚ ಬೇಡಿಕೆಯ ಕುರಿತು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂದು ದಿನಾಂಕ 27/11/2025ರಂದು ನಡೆದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ:
ಕೃಷ್ಣಮೂರ್ತಿ ಅವರು ಪಿರ್ಯಾದಿದಾರರಿಂದ ರೂಪಾಯಿ 20,000, ಬಿ.ಕೆ. ರಾಜು ಅವರು ರೂಪಾಯಿ 5,000 ಹಾಗೂ ಎಸ್. ಧನಶೇಖರ ಅವರು ರೂಪಾಯಿ 5,000 ಲಂಚ ಸ್ವೀಕರಿಸುವ ವೇಳೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಮೂವರನ್ನೂ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಲಾಗಿದೆ.

ಈ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು (ಪ್ರಭಾರ) ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕಿ ಭಾರತಿ ಜಿ., ಚಂದ್ರಶೇಖರ್ ಕೆ.ಎನ್., ರವಿ ಪವಾರ್, ರಾಜೇಂದ್ರ ನಾಯ್ಡ್ ಎಂ.ಎನ್. ಮತ್ತು ಸಿಬ್ಬಂದಿಗಳ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಲೋಕಾಯುಕ್ತದ ಈ ಕಾರ್ಯಾಚರಣೆ ದಕ್ಷಿಣ ಕನ್ನಡದಲ್ಲಿ ಮತ್ತೊಮ್ಮೆ ಭ್ರಷ್ಟಾಚಾರ ವಿರೋಧಿ ಕ್ರಮಗಳ ಗಂಭೀರತೆಯನ್ನು ಹೊರಹಾಕಿದೆ.





