ಇಂದು ಪ್ರಧಾನಿ ಮೋದಿ ಆಗಮನಕ್ಕೆ ಕ್ರಷ್ಣ ನಗರಿ ಸಜ್ಜು
ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಲಕ್ಷಕಂಠ ಗೀತಾಪಠಣ ಮಹಾ ಪಾರಾಯಣಕ್ಕೆ ಚಾಲನೆ

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತಲಿರುವರು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಲಕ್ಷಕಂಠ ಗೀತಾಪಠಣ ಮಹಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಮುಕ್ತ ಪ್ರವೇಶವಿದೆ.
ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿಯವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ. ನಂತರ ಅವರು ಕನಕಕಿಂಡಿಯಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದು, ಕನಕನ ಕಿಂಡಿಯಿಂದ ಶ್ರೀಕೃಷ್ಣನ ದರ್ಶನ ಪಡೆದು ಮಧ್ವ ಸರೋವರದಲ್ಲಿ ಪಾದಪ್ರಕ್ಷಾಲನೆ ನಡೆಸುವರು. ನಂತರ ಮಠದೊಳಗೆ ಪ್ರವೇಶಿಸಿ ಹೊಸದಾಗಿ ನಿರ್ಮಿಸಲಾದ ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಲಿದ್ದಾರೆ.

ಚಂದ್ರಶಾಲೆಯಲ್ಲಿ ವಿವಿಧ ಮಠಾಧೀಶರಿಂದ ಆಶೀರ್ವಾದ ಪಡೆದು, ಕೃಷ್ಣ ಪ್ರಸಾದ ಹಾಗೂ ಭಗವದ್ಗೀತೆಯ ಲೇಖನ ದೀಕ್ಷೆ ಸ್ವೀಕರಿಸುವ ಕಾರ್ಯಕ್ರಮವೂ ನಡೆಯಲಿದೆ. ಬಳಿಕ ಸರ್ವಜ್ಞ ಪೀಠ ದರ್ಶನ, ಭೋಜನ ಶಾಲೆಯಲ್ಲಿ ಮುಖ್ಯಪ್ರಾಣ ದೇವರ ದರ್ಶನ, ಗೋಶಾಲೆ ವೀಕ್ಷಣೆ ನಂತರ ಅವರು ಗೀತಾ ಮಂದಿರಕ್ಕೆ ಆಗಮಿಸಿ ಕರಾವಳಿ ಖಾದ್ಯಗಳನ್ನು ಸ್ವೀಕರಿಸಲಿದ್ದಾರೆ. ಅಲ್ಲಿಂದ ಗೀತಾ ಪಾರಾಯಣ ವೇದಿಕೆಗೆ ತೆರಳಲಿದ್ದಾರೆ. ಪ್ರಧಾನಿ ಸಾಗುವ ಮಾರ್ಗದುದ್ದಕ್ಕೂ ಪಂಚವಾದ್ಯ, ಚೆಂಡೆ, ಬ್ಯಾಂಡ್ ಸೇರಿದಂತೆ ಮಂಗಳವಾದ್ಯಗಳು ಹಾಗೂ ವಿದ್ವಾಂಸರಿಂದ ಭಗವದ್ಗೀತೆ, ವೇದ-ಉಪನಿಷತ್ತುಗಳ ಪಾರಾಯಣ ನಡೆಯಲಿದೆ.

ಸಭೆಯಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಚಿವ ಭೈರತಿ ಸುರೇಶ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಉಮನಾಥ್ ಕೋಟ್ಯಾನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಉಡುಪಿ ಶ್ರೀಕೃಷ್ಣ ಕಾರಿಡಾರ್ ನಿರ್ಮಾಣಕ್ಕೆ ಅನುದಾನ, ದೇಶದಲ್ಲಿ ಗೋಹತ್ಯೆ ನಿಷೇಧ ಹಾಗೂ ಸಮಾನ ನಾಗರಿಕ ಸಂಹಿತೆ ಜಾರಿ ಕುರಿತ ಮನವಿಯನ್ನು ಪ್ರಧಾನಮಂತ್ರಿ ಮೋದಿ ಅವರಿಗೆ ಇಂದು ಸಲ್ಲಿಸಲಾಗುವುದು.




