ಆನ್ ಲೈನ್ ವಂಚನೆಗೆ ಕಡಿವಾಣ
ಎಲ್ಲಾ ಫೋನ್ ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯಕ್ಕೆ ಕೇಂದ್ರ ಆದೇಶ

ದೇಶದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್ ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯಗೊಳಿಸುವಂತೆ ದೂರಸಂಪರ್ಕ ಇಲಾಖೆ ಮೊಬೈಲ್ ಕಂಪೆನಿಗಳಿಗೆ ಆದೇಶ ನೀಡಿದೆ.
ಈ ಆದೇಶದ ಪುಕಾರ, ಸ್ಮಾರ್ಟ್ಫೋನ್ ತಯಾರಕರು 90 ದಿನಗಳಲ್ಲಿ ಎಲ್ಲಾ ಹೊಸ ಮಾದರಿಗಳಲ್ಲಿ ಈ ಅಪ್ಲಿಕೇಶನ್ ಅನ್ನು ಫ್ರಿ ಇನ್ಸ್ಟಾಲ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ಬಳಕೆದಾರರು ಈ ಅಪ್ಲಿಕೇಶನ್ ನನ್ನು ತಮ್ಮ ಫೋನ್ಗಳಿಂದ ಅನ್ಇನ್ಸ್ಟಾಲ್ ಮಾಡಲು ಅಥವಾ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈಗಾಗಲೇ ಬಳಕೆಯಲ್ಲಿರುವ ಮೊಬೈಲ್ಗಳಿಗೆ ಸಾಫ್ಟ್ವೇರ್ ಅಪ್ಡೇಟ್ ನೀಡುವಾಗ ಈ ಆಪ್ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿದೆ. ಈ ನಿಯಮವು ಆ್ಯಪಲ್, ಸ್ಯಾಮ್ಸಂಗ್, ಗೂಗಲ್, ಶಿಯೋಮಿ, ವಿವೋ ಅಥವಾ ಯಾವುದೇ ಇತರ ಬ್ಯಾಂಡ್ ಆಗಿರಲಿ ಎಲ್ಲಾ ಕಂಪನಿಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.


ಸಂಚಾರ್ ಸಾಥಿ ಅಪ್ಲಿಕೇಶನ್ ಪ್ರಯೋಜನಗಳೇನು?
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಮತ್ತು ಕದ್ದ ಮೊಬೈಲ್ಗಳನ್ನು ಬಳಸಿಕೊಂಡು ನಡೆಸುವ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ‘ಸಂಚಾರ್ ಸಾಥಿ’ ಆ್ಯಪ್ ಮೂಲಕ ಇದಕ್ಕೆ ಕಡಿವಾಣ ಹಾಕಲು ಸಿದ್ಧತೆ ನಡೆಸಿದೆ. ಈ ಆ್ಯಪ್, ಕಳೆದುಹೋದ ಅಥವಾ ಕದ್ದೊಯ್ದ ಫೋನ್ಗಳನ್ನು ಬ್ಲಾಕ್ ಮಾಡಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ, ಬಳಕೆದಾರರ ಹೆಸರಿನಲ್ಲಿರುವ ನಕಲಿ ಮೊಬೈಲ್ ಸಂಪರ್ಕಗಳನ್ನು ಗುರುತಿಸಿ, ಅವುಗಳನ್ನು ಕಡಿತಗೊಳಿಸಲು ಕೂಡ ಅವಕಾಶ ನೀಡುತ್ತದೆ.




