ಮೊಗಾರ್ನಾಡ್ ಚರ್ಚ್ ನ ಸ್ಥಾಪನೆಯ 250ನೇ ವರ್ಷದ ಜುಬಿಲಿ ಆಚರಣೆ ಪ್ರಯುಕ್ತ ಸರ್ವ ಧರ್ಮ ಸಮ್ಮೇಳನ 2025
“ವ್ಯಕ್ತಿ ಮಾನವನಾಗಬೇಕಾದರೆ ಮೊದಲು ತನ್ನನ್ನು ತಾನು ತಿಳಿದಿರಬೇಕು” – ಮೈಸೂರು ಬಿಷಪ್ ಫ್ರಾನ್ಸಿಸ್ ಸೆರಾವೊ

ಮಂಗಳೂರು ಧರ್ಮಕ್ಷೇತ್ರದ ದೇವ ಮಾತೆಗೆ ಸಮರ್ಪಿತ ಮೊಗರ್ನಾಡ್ ಚರ್ಚ್ ನ ಸ್ಥಾಪನೆಯ 250ನೇ ವರ್ಷದ ಜುಬಿಲಿ ವರ್ಷಾಚರಣೆಯ ಪ್ರಯುಕ್ತ ಸರ್ವಧರ್ಮೀಯರೊಡಗಿನ ಬಾಂಧವ್ಯದ ದ್ಯೋತಕವಾಗಿ ಮೊಗರ್ನಾಡ್ ಚರ್ಚ್ ನಲ್ಲಿ ನವೆಂಬರ್ 30ರಂದು ಭಾನುವಾರ ಸಂಜೆ ದಿವ್ಯ ಬಲಿಪೂಜೆಯನ್ನು ನಡೆಸುವ ಮುಖಾಂತರ ಪ್ರಾರಂಭಿಸಲಾಯಿತು. ಪ್ರಧಾನ ಗುರುಗಳಾಗಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾಕ್ಟರ್ ಪ್ರಾನ್ಸಿಸ್ ಸೆರಾವೊ ಬಲಿಪೂಜೆಯನ್ನು ನೆರವೇರಿಸಿದರು. ಮೊಗರ್ನಾಡ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆ, ಅಮ್ಟೂರು ಇಲ್ಲಿನ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೋ, ವಂದನೀಯ ಫಾದರ್ ರೋಹನ್ ಡಿಸೋಜ, ವಂದನೀಯ ಫಾದರ್ ಆಸ್ಟಿನ್ ಫೆರ್ನಾಂಡಿಸ್ ಮತ್ತು ಡಿಕಾನ್ ಅವಿಲ್ ಸಾಂತುಮಾಯೊರ್ ಉಪಸ್ಥಿತರಿದ್ದರು. ದಿವ್ಯ ಬಲಿ ಪೂಜೆಯ ಕೊನೆಯಲ್ಲಿ ದೇವ ಮಾತ ದೇವಾಲಯ ಮೊಗರ್ನಾಡು ಇದರ 250ನೇ ಜ್ಯುಬಿಲಿ ವರ್ಷಾಚರಣೆಯ ಪ್ರಯುಕ್ತ ತಯಾರಿಸಿದ. ಆಮಂತ್ರಣ ಪತ್ರಿಕೆಯನ್ನು ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಲಕ್ಕಿಡಿಪ್ ಡ್ರಾವನ್ನು ನಡೆಸಲಾಯಿತು. ಪೂಜೆಯ ಬಳಿಕ ನೆರೆದ ಎಲ್ಲರಿಗೂ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.


ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ಇಲ್ಲಿ ನಡೆದ ಸಭಾ ಕಾರ್ಯಕ್ರಮದ ಅತಿಥಿಗಳನ್ನು ಹಾಗೂ ಗಣ್ಯರನ್ನು ಮೊಗರ್ನಾಡ್ ಚರ್ಚ್ ವಠಾರದಿಂದ ಆಮ್ಟೂರ್ ಶಾಲೆಯ ತನಕ ನಾಸಿಕ್ ಬ್ಯಾಂಡ್ ಮತ್ತು ವಾದ್ಯಗಳ ಜೊತೆಗೂಡಿ ನೆರೆದ ಎಲ್ಲರೂ ಪಾದಯಾತ್ರೆಯ ಮುಖಾಂತರ ಮೆರವಣಿಗೆಯಲ್ಲಿ ಸಾಗಿದರು. ಸ್ತ್ರೀಶಕ್ತಿಸಂಘಟನೆಯ ಸದಸ್ಯರು ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.




ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಪ್ರಾರ್ಥನೆಯ ಮುಖಾಂತರ ಬೈಬಲ್, ಕುರಾನ್ ಮತ್ತು ಭಗವದ್ಗೀತೆಗಳ ಅಧ್ಯಾಯಗಳನ್ನು ಓದಿ ಸರ್ವರ ಗಮನ ಸೆಳೆದರು. ICYM ಮೊಗರ್ನಾಡ್ ಘಟಕದ ಸದಸ್ಯರು ಪ್ರಾರ್ಥನಾ ಗೀತೆಯನ್ನು ಹಾಡಿದರು.







ಮಂಗಳೂರು ಧರ್ಮಕ್ಷೇತ್ರದ ದೇವ ಮಾತೆಗೆ ಸಮರ್ಪಿತ ಮೊಗರ್ನಾಡ್ ಚರ್ಚ್ ನ ಸ್ಥಾಪನೆಯ 250ನೇ ವರ್ಷದ ಜುಬಿಲಿ ವರ್ಷಾಚರಣೆಯ ಪ್ರಯುಕ್ತ ಸರ್ವಧರ್ಮೀಯರೊಡಗಿನ ಬಾಂಧವ್ಯದ ದ್ಯೋತಕವಾಗಿ ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ಇಲ್ಲಿ ನವೆಂಬರ್ 30ರಂದು ಭಾನುವಾರ ಸಂಜೆ ಸರ್ವ ಧರ್ಮ ಸಮ್ಮೇಳನವು ವಿಜೃಂಭಣೆಯಿಂದ ನೆರವೇರಿತು. ನಾಸಿಕ್ ಬ್ಯಾಂಡ್ ಮತ್ತು ವಾದ್ಯಗಳ ಮುಖಾಂತರ ಗಣ್ಯ ಅತಿಥಿಗಳನ್ನು ಸ್ವಾಗತಿಸಲಾಯಿತು. ಸ್ತ್ರೀಶಕ್ತಿಸಂಘಟನೆಯ ಸದಸ್ಯರು ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.

ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಪ್ರಾರ್ಥನೆಯ ಮುಖಾಂತರ ಬೈಬಲ್, ಕುರಾನ್ ಮತ್ತು ಭಗವದ್ಗೀತೆಗಳ ಅಧ್ಯಾಯಗಳನ್ನು ಓದಿ ಸರ್ವರ ಗಮನ ಸೆಳೆದರು. ICYM ಮೊಗರ್ನಾಡ್ ಘಟಕದ ಸದಸ್ಯರು ಪ್ರಾರ್ಥನಾ ಗೀತೆಯನ್ನು ಹಾಡಿದರು.
ವೇದಿಕೆಯಲ್ಲಿರುವ ಗಣ್ಯ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ಶಾಲು ಹೊದಿಸಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಮತ್ತು ಪುರಸಭೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಹೂಗುಚ್ಚ ನೀಡುವುದರ ಮೂಲಕ ಸ್ವಾಗತಿಸಲಾಯಿತು. ವೇದಿಕೆಯಲ್ಲಿರುವ ಅಧ್ಯಕ್ಷರು ಮತ್ತು ಗಣ್ಯ ಅತಿಥಿಗಳ ಒಡಗೂಡಿ ಸರ್ವಧರ್ಮ ಸಮ್ಮೇಳನದ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.


ಮೌಲಾನಾ ಯು.ಕೆ. ಅಬ್ದುಲ್ ಅಜೀಜ್ ದಾರಿಮಿ ಚೊಕ್ಕಬೆಟ್ಟು, ಇಮಾಮರು ಮುಯುದ್ದೀನ್ ಜುಮ್ಮಾ ಮಸೀದಿ ತಣ್ಣೀರುಬಾವಿ, ಚೊಕ್ಕಬೆಟ್ಟು ಇವರು ಮಾತನಾಡಿ, “ಮೂರು ಧರ್ಮಗಳ ಧ್ವನಿ ರಾಷ್ಟ್ರ ನಿರ್ಮಾಣದ ಸಂದೇಶವಾಗಿದೆ. ನಾವು ಧರ್ಮ ನಿಷ್ಠೆಯಿಂದ ಪರರ ಸೇವೆಯನ್ನು ಮಾಡಬೇಕು. ಧರ್ಮ ಯಾರನ್ನು ದ್ವೇಷ ಮಾಡಲು ಕಲಿಸಲ್ಲ. ಪ್ರಕೃತಿಯು ಕೆಡುಕನ್ನು ತೆಗೆದು ಒಳ್ಳೆಯ ವಾತಾವರಣವನ್ನು ಕೊಡುತ್ತದೆ ಹಾಗೆಯೇ ಇಂತಹ ಕಾರ್ಯಕ್ರಮಗಳನ್ನು ಮಾಡಿದರೆ ಬಾಂಧವ್ಯ ವೃದ್ಧಿಗೊಳಿಸಬಹುದು. ಉತ್ತಮ ಸಮಾಜದಲ್ಲಿ ಆರೋಗ್ಯ ಇದ್ದರೆ ದೇಹದ ಆರೋಗ್ಯವು ಕೂಡ ಚೆನ್ನಾಗಿರುತ್ತದೆ” ಎಂದು ಎಲ್ಲರನ್ನೂ ಶುಭಹಾರೈಸಿ ಕಾರ್ಯಕ್ರಮಕ್ಕೆ ಪ್ರಶಂಸೆಯನ್ನು ನೀಡಿದರು.



ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷರು ಆಗಿರುವ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾಕ್ಟರ್ ಫ್ರಾನ್ಸಿಸ್ ಸೆರಾವೊ ಅವರು ಕಾರ್ಯಕ್ರಮ ಉದ್ದೇಶಿಸಿ, “ವ್ಯಕ್ತಿ ಮಾನವನಾಗಬೇಕಾದರೆ ಮೊದಲು ತನ್ನನ್ನು ತಾನು ತಿಳಿದಿರಬೇಕು. ತನ್ನ ನೋವು ನನಗೆ ಅರಿತಲ್ಲಿ ಮಾನವ ಧರ್ಮದ ಬಗ್ಗೆ ತಿಳಿಯುತ್ತದೆ. ನಾವು ಒಂದಾಗಿ ಬಾಳಬೇಕು. ಭಾಷೆ, ಧರ್ಮ ಬಿಟ್ಟು ಭಾರತೀಯರಾಗಬೇಕು. ಪ್ರೀತಿ, ಸಹಾನುಭೂತಿ ಮತ್ತು ಪರಸ್ಪರ ಸಹಾಯದ ಮೂಲಕ ನವ ಸಮಾಜದ ನಿರ್ಮಾಣವನ್ನು ಮಾಡಲು ಸಾಧ್ಯ. ದೇವರ ಭಕ್ತಿಯ ಜೊತೆಗೆ ನಮ್ಮ ಭಕ್ತಿ ಪ್ರಯಾಣ ಜೊತೆ ಸೇರಿದಾಗ ನಮ್ಮ ಪ್ರಯಾಣ ಸುಖಕರವಾಗುತ್ತದೆ. ಎಲ್ಲಾ ಧರ್ಮಗಳು ತಿಳಿಸುವಂತೆ ಪ್ರೀತಿ, ಸಹಾನುಭೂತಿಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು” ಎಂದು ಹಾರೈಸಿ ಕಾರ್ಯಕ್ರಮದ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು.











ಸಮಾಜ ಸೇವಕರು ಹಾಗೂ ಹಿತಚಿಂತಕರು; ಪ್ರಸ್ತುತ ದುಬೈ ಉದ್ಯಮಿ ರೊನಾಲ್ಡ್ ಮಾರ್ಟಿಸ್, ಬಂಟ್ವಾಳ ತಾಲೂಕು ಸರಕಾರಿ ನೌಕಾರರ ಸಂಘದ ಅಧ್ಯಕ್ಷರು ಹಾಗೂ ಆರ್.ಎಂ.ಎಸ್.ಎ. ಪ್ರಾಥಮಿಕ ಶಾಲೆ ಸೂರಿಬೈಲು ಇಲ್ಲಿನ ಅಧ್ಯಾಪಕರು ಆಗಿರುವ ಶಿವಪ್ರಸಾದ್ ಶೆಟ್ಟಿ, ಕಲ್ಲಡ್ಕ ಮ್ಯೂಸಿಯಂ ವಸ್ತು ಸಂಗ್ರಹಾಲಯದ ಸಂಸ್ಥಾಪಕರು ಆಗಿರುವ ಕೆ.ಎಸ್. ಮೊಹಮ್ಮದ್ ಯಾಸಿರ್, ಸಮಾಜ ಸೇವಕರು ಹಾಗೂ ಅಮಲು ವ್ಯಸನಿಗಳ ನಿವಾರಣಕೂಟ ಬಂಟ್ವಾಳ ತಾಲೂಕು ಇಲ್ಲಿನ ಅಧ್ಯಕ್ಷರು ಆಗಿರುವ ಡೇವಿಡ್ ಡಿಕುನ್ಹಾ ಇವರು ಸಮಾಜದಲ್ಲಿ ನೀಡುವಂತಹ ಉತ್ಕೃಷ್ಟ ಸೇವೆಯನ್ನು ಗುರುತಿಸಿ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.





ಮೌಲಾನ ಯು.ಕೆ. ಅಬ್ದುಲ್ ಅಜೀಜ್ ದಾರಿಮಿ ಚೊಕ್ಕಬೆಟ್ಟು – ಇಮಾಮರು ಮುಯುದ್ದೀನ್ ಜುಮ್ಮಾ ಮಸೀದಿ ತಣ್ಣೀರುಬಾವಿ ಚೊಕ್ಕಬೆಟ್ಟು ಹಾಗೂ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆಗಿರುವ ಅತೀ ವಂದನೀಯ ಡಾಕ್ಟರ್ ಫ್ರಾನ್ಸಿಸ್ ಸೆರಾವೊ ಇವರನ್ನು ಗಣ್ಯ ಅತಿಥಿಗಳು ಒಡಗೂಡಿ ಸನ್ಮಾನಿಸಿದರು. ಸರ್ವ ಧರ್ಮ ಸಮ್ಮೇಳನದ ಅಂಗವಾಗಿ ನಡೆಸಿದಂತಹ ಸೌಹಾರ್ದ ಕ್ರೀಡಾಕೂಟದ ತೀರ್ಪುಗಾರರಾದ ಶ್ರೀ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್, ವೀಕ್ಷಕ ವಿವರಣೆಯನ್ನು ಮಾಡಿದ ವಿಜಯ ಕುರ್ನಾಡು, ಸರ್ವ ಧರ್ಮ ಸಮ್ಮೇಳನದ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ರೋಷನ್ ಹಾಗೂ ಲಯನ್ ಡಾ. ದೇವದಾಸ್ ಕಾಪಿಕಾಡ್ ಇವರೆಲ್ಲರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡೇವಿಡ್ ಡಿಕುನ್ಹಾ, ರೊನಾಲ್ಡ್ ಮಾರ್ಟಿಸ್ ಮತ್ತು ಶಿವಪ್ರಸಾದ್ ಶೆಟ್ಟಿ ಇವರು ತಮ್ಮ ಮನದಾಳದ ಅನುಭವಗಳನ್ನು ಹಂಚಿಕೊಂಡರು.



ಸಭಾ ಕಾರ್ಯಕ್ರಮದ ನಂತರ ಎಲ್ಲರಿಗೂ ಭೋಜನದ ವ್ಯವಸ್ಧೆಯನ್ನು ಮಾಡಲಾಗಿತ್ತು. ತದ ನಂತರ ತೆಲಿಕೆದ ಬೊಳ್ಳಿ ಲಯನ್ ಡಾ. ದೇವದಾಸ್ ಕಾಪಿಕಾಡ್ ರಚಿಸಿ, ನಿರ್ದೇಶಿಸಿ, ನಟಿಸಿರುವ ‘ಎನ್ನನೆ ಕಥೆ’ ಎಂಬ ತುಳು ಹಾಸ್ಯಮಯ ನಾಟಕವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಮೊಗರ್ನಾಡ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯುಟ್ ಡಿಮೆಲ್ಲೊ, ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆ, ಅಮ್ಟೂರು ಇಲ್ಲಿನ ಮುಖ್ಯೋಪಾಧ್ಯಾಯರಾಗಿರುವ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಅಮ್ಟೂರು ಇಲ್ಲಿನ ಮುಖ್ಯೋಪಾಧ್ಯಾಯಿನಿಯಾಗಿರುವ ವಂದನೀಯ ಸಿಸ್ಟರ್ ಆ್ಯನ್ನಿ ಡಿಸೋಜ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ಜ್ಯುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಡಿಕುನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

















ಈ ಕಾರ್ಯಕ್ರಮದಲ್ಲಿ ದಿಯಾಕೊನ್ ಅವಿಲ್ ಸಾಂತ್ಮಾಯೋರ್, ಬ್ರದರ್ ಪ್ರಿನ್ಸ್ಟನ್ ಡಿಸೋಜ, ದೇವಾ ಮಾತಾ ಕಾನ್ವೆಂಟಿನ ಧರ್ಮ ಭಗಿನಿಯರು, ಚರ್ಚ್ ಪಾಲನಾ ಸಮಿತಿಯ ಸದಸ್ಯರು, ಚರ್ಚ್ ಆರ್ಥಿಕ ಸಮಿತಿಯ ಸದಸ್ಯರು, ಜ್ಯುಬಿಲಿ ಸಮಿತಿಯ ಸದಸ್ಯರು ಹಾಗೂ ಎಲ್ಲಾ ಧರ್ಮದ ಬಂಧುಬಾಂಧವರು ಈ ಸರ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಸಾಕ್ಷಿಯಾದರು.


ಧರ್ಮಗುರುಗಳಾದ ವಂದನೀಯಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ಸ್ವಾಗತಿಸಿದರು. ರೋಷನ್ ಕಾರ್ಯಕ್ರಮವನ್ನು ನಿರೂಪಿಸಿದರು. ಜ್ಯುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಡಿಕುನ್ಹಾ ಇವರು ಧನ್ಯವಾದಗೈದರು.




