ಮುಲ್ಕಿ ಪೊಲೀಸರು ಮತ್ತು ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರೋಯ್ ಸ್ಟನ್ ಅವರ ಜಾಗರೂಕತೆ
ವೃದ್ಧ ದಂಪತಿ ಬೆನೆಡಿಕ್ಟ್ ಹಾಗೂ ಸಿಸಿಲಿಯಾ ಫೆರ್ನಾಂಡಿಸ್ ರವರನ್ನು 84 ಲಕ್ಷ ರೂಪಾಯಿ ಡಿಜಿಟಲ್ ವಂಚನೆಯಿಂದ ರಕ್ಷಣೆ

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಮಸ್ ಕಟ್ಟೆ ಪ್ರದೇಶದ ಹಿರಿಯ ನಾಗರಿಕರಾದ 84 ವರ್ಷ ಪ್ರಾಯದ ಬೆನೆಡಿಕ್ಟ್ ಫೆರ್ನಾಂಡಿಸ್ ಮತ್ತು 71 ವರ್ಷ ಪ್ರಾಯದ ಲಿಲ್ಲಿ ಸಿಸಿಲಿಯಾ ಫೆರ್ನಾಂಡಿಸ್ ಅವರನ್ನು ಬಹು ದೊಡ್ಡ ಡಿಜಿಟಲ್ ವಂಚನೆಯಿಂದ ಮುಲ್ಕಿ ಪೊಲೀಸರು ಹಾಗೂ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರೋಯ್ ಸ್ಟನ್ ರವರು ಸಮಯೋಚಿತ ಕ್ರಮದಿಂದ ರಕ್ಷಿಸಿದ್ದಾರೆ. ಡಿಸೆಂಬರ್ 01ರಂದು ಉತ್ತರ ಪ್ರದೇಶದ ಸಿಐಡಿ ಅಧಿಕಾರಿಗಳೆಂದು ಸುಳ್ಳು ಹೇಳಿದ ಅಪರಿಚಿತ ಸೈಬರ್ ಕಳ್ಳರು ವಾಟ್ಸಪ್ ಮೂಲಕ ಸಂಪರ್ಕಿಸಿ, “ನಿಮ್ಮ ಮೇಲೆ 6 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಾಗಿದೆ” ಎಂದು ವೃದ್ಧ ದಂಪತಿಯನ್ನು ನಂಬಿಸಿ, ಡಿಜಿಟಲ್ ಅರೆಸ್ಟ್ ಗೆ ಒಳಪಡಿಸಿ ತನಿಖೆಗೆ ಸಹಕರಿಸುವಂತೆ ಹಿರಿಯ ದಂಪತಿಯಿಂದ, ತಮ್ಮ ಬ್ಯಾಂಕ್ ಹಣವನ್ನು ತನಿಖೆಗಾಗಿ ವರ್ಗಾವಣೆ ಮಾಡಲು ಒತ್ತಾಯಿಸಿದರು.

ಈ ಸೂಚನೆಗೆ ನಂಬಿಕೊಂಡ ದಂಪತಿ ಕಿನ್ನಿಗೋಳಿ ಕೆನರಾ ಬ್ಯಾಂಕ್ಗೆ ತೆರಳಿ ತಮ್ಮ ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ಮೊತ್ತವನ್ನು ಸೈಬರ್ ಕಳ್ಳರು ನೀಡಿದ ಖಾತೆಗೆ ವರ್ಗಾಯಿಸಲು ಯತ್ನಿಸಿದರು. ಆದರೆ ಬ್ಯಾಂಕ್ ಮ್ಯಾನೇಜರ್ ರಾಯಸ್ಟನ್ ರವರಿಗೆ ಈ ದೊಡ್ಡ ಮೊತ್ತದ ವರ್ಗಾವಣೆ ಬಗ್ಗೆ ಸಂಶಯ ಉಂಟಾಗಿ ಹಿರಿಯ ದಂಪತಿಗಳಿಂದ ಸ್ಪಷ್ಟ ಮಾಹಿತಿ ಕೇಳಿದಾಗ, ಇವರ ಉತ್ತರ ಶಂಕಾಸ್ಪದವಾಗಿದ್ದರಿಂದ ಅವರು ಹಣ ವರ್ಗಾವಣೆ ಮಾಡದೇ, ತಕ್ಷಣವೇ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದರು.

ಸಂಕೇತ ದೊರೆತ ತಕ್ಷಣ ಮುಲ್ಕಿ ಠಾಣೆಯ ಹೆಚ್.ಸಿ. 683 ಯಶವಂತ ಕುಮಾರ ಮತ್ತು ಠಾಣಾ ಗುಪ್ತ ವಾರ್ತೆ ಸಿಬ್ಬಂದಿ ಹೆಚ್.ಸಿ. 802 ಕಿಶೋರ್ ತಕ್ಷಣ ಕಾರ್ಯಪ್ರವೃತ್ತರಾಗಿ ದಂಪತಿಗಳ ಮನೆಗೆ ಭೇಟಿ ನೀಡಿದರು. ಪರಿಶೀಲನೆ ವೇಳೆ ಅವರ ಫೋನ್ ಡಿಜಿಟಲ್ ಅರೆಸ್ಟ್ ಮೋಸಕ್ಕೆ ಸಿಕ್ಕಿರುವುದು ಕಂಡುಬಂದಿತು. ಪೊಲೀಸರ ತ್ವರಿತ ಮಧ್ಯಪ್ರವೇಶದಿಂದಲೇ ಬ್ಯಾಂಕ್ಗೆ ಕರೆಮಾಡಿ ಹಣ ವರ್ಗಾವಣೆ ತಪ್ಪಿಸಲಾಯಿತು.
ಮುಲ್ಕಿ ಪೊಲೀಸರು ದಂಪತಿಗೆ ಮಾಹಿತಿ ನೀಡಿ, ಸೂಕ್ತವಾದ ಜಾಗೃತಿ ಮೂಡಿಸಿ, ಅವರ 84 ಲಕ್ಷ ರೂಪಾಯಿ ಮೊತ್ತವನ್ನು ವಂಚನೆಗೆ ಸಿಲುಕದೆ ಸುರಕ್ಷಿತವಾಗಿ ಉಳಿಸಿದರು. ವಿಷಯದ ಸಂಬಂಧ ಮುಂದಿನ ತನಿಖೆಯನ್ನು ಮುಲ್ಕಿ ಪೊಲೀಸ್ ಠಾಣೆಯವರು ಮುಂದುವರಿಸಿದ್ದಾರೆ. ಕೆನರಾ ಬ್ಯಾಂಕ್ ರೋಯ್ ಸ್ಟನ್ ಹಾಗೂ ಮುಲ್ಕಿ ಪೊಲೀಸರಾದ ಯಶವಂತ ಕುಮಾರ ಮತ್ತು ಕಿಶೋರ್ ರವರಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ದೊರಕಿದೆ.




