ವಂಚನೆ ತಪ್ಪಿಸಿದ ಬ್ಯಾಂಕ್ ಮ್ಯಾನೇಜರ್ ರಾಯ್ ಸ್ಟನ್ರವರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ರವರಿಂದ ಅಭಿನಂದನೆ
ಕರ್ತವ್ಯನಿಷ್ಠೆಯ ಮೆರಗು – ವೃದ್ಧ ದಂಪತಿಗಳ ಹಣ ಉಳಿಸಿದ ಮ್ಯಾನೇಜರ್ಗೆ ಗೌರವ

ಕಿನ್ನಿಗೋಳಿ ಬಳಿಯ ದಾಮಸ್ ಕಟ್ಟೆಯ ವೃದ್ಧ ದಂಪತಿಗಳಿಂದ ವಂಚಕರು ಕಬಳಿಸಲು ಯತ್ನಿಸಿದ್ದ ರೂಪಾಯಿ 84 ಲಕ್ಷ ಮೊತ್ತವನ್ನು, ತನ್ನ ಕರ್ತವ್ಯ ನಿಷ್ಠೆ, ಸೂಕ್ಷ್ಮ ಗಮನ ಹಾಗೂ ಸಮಯೋಚಿತ ಕ್ರಮಗಳಿಂದ ಉಳಿಸಿದ್ದಕ್ಕಾಗಿ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯ್ ಸ್ಟನ್ ಅವರನ್ನು ಶಾಸಕ ಉಮಾನಾಥ್ ಕೋಟ್ಯಾನ್ ಅವರು ಭೇಟಿಯಾಗಿ ಅಭಿನಂದಿಸಿದರು.

ಶಾಸಕ ಉಮಾನಾಥ್ ಕೋಟ್ಯಾನ್ ಅವರು ಮಾತನಾಡಿ, “ಸಮಾಜದ ಸಾಮಾನ್ಯ ಜನರು ಮೋಸದ ಜಾಲಕ್ಕೆ ಸಿಲುಕದಂತೆ ಬ್ಯಾಂಕ್ ಸಿಬ್ಬಂದಿ ನೀಡಬೇಕಾದ ಸೇವೆಗೆ ರಾಯ್ ಸ್ಟನ್ ಮಾದರಿಯಾಗಿದ್ದಾರೆ. ಅವರ ಜಾಗ್ರತೆ ಹಲವರಿಗೆ ಪ್ರೇರಣೆಯಾಗಿದೆ. ಇಂತಹ ಸತ್ಯ, ನಿಷ್ಠ ಮತ್ತು ಜವಾಬ್ದಾರಿಯುತ ಅಧಿಕಾರಿಗಳು ನಮ್ಮ ಸಮಾಜದ ಹೆಮ್ಮೆ” ಎಂದು ಶ್ಲಾಘಿಸಿದರು.

ಬ್ಯಾಂಕ್ ಮ್ಯಾನೇಜರ್ ರಾಯ್ ಸ್ಟನ್ ಅವರ ಸಮಯೋಚಿತ ಕೃತ್ಯದಿಂದ ವೃದ್ಧ ದಂಪತಿಗಳು ಭಾರೀ ಆರ್ಥಿಕ ನಷ್ಟದಿಂದ ಪಾರಾಗಿದ್ದು, ಸ್ಥಳೀಯ ವಲಯದಲ್ಲಿ ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.




