January 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ಶಾಂತಿಯ ರೂವಾರಿಗಳಾಗಿ’ – ಮಂಗಳೂರಿನಲ್ಲಿ ಕಾರ್ಡಿನಲ್ ಫೆರಾವೊ ಅವರಿಂದ ಪ್ರವಾದಿಯ ನಾಯಕತ್ವಕ್ಕೆ ಕರೆ

ಮಂಗಳೂರಿನ ಕೊಂಕಣಿ ಕ್ಯಾಥೊಲಿಕ್ ಲಾಯರ್ಸ್ ಗಿಲ್ಡ್ ಮತ್ತು ಮಂಗಳೂರು ಧರ್ಮಕ್ಷೇತ್ರದ ಶ್ರೀ ಸಾಮಾನ್ಯರ ಆಯೋಗ ಆಯೋಜಿಸಿದ ಕಾರ್ಯಕ್ರಮ

ಬದಲಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಮಂಗಳೂರಿನ ಕ್ರೈಸ್ತ ವಿಶ್ವಾಸಿಗಳು ಸಮಾಜದಲ್ಲಿ “ಶಾಂತಿಯ ರೂವಾರಿಗಳು” ಮತ್ತು “ಸತ್ಯದ ವಾಹಕರು” ಆಗುವಂತೆ ಗೋವಾ ಮತ್ತು ದಮನ್‌ನ ಆರ್ಚ್‌ಬಿಷಪ್ ಹಿಸ್ ಎಮಿನೆನ್ಸ್ ಕಾರ್ಡಿನಲ್ ಫಿಲಿಪ್ ನೇರಿ ಫೆರಾವೊ ಅವರು ಕರೆ ನೀಡಿದರು.

ಡಿಸೆಂಬರ್ 5ರಂದು ಶುಕ್ರವಾರ ಮಂಗಳೂರಿನ ಜೆಪ್ಪು ಸಂತ ಆಂತೋನಿ ಆಶ್ರಮದ ಸಂಭ್ರಮ್ ಹಾಲ್‌ನಲ್ಲಿ ಆಯೋಜಿಸಲಾದ “ಕ್ರಿಸ್ಮಸ್ ಹೊಸ್ತಿಲಲ್ಲಿ: ಬದಲಾಗುತ್ತಿರುವ ಕಾಲದಲ್ಲಿ ಕ್ರೈಸ್ತ ಸಾಕ್ಷಿ” ಎಂಬ ವಿಶೇಷ ಕ್ರಿಸ್ಮಸ್ ಪೂರ್ವ ಕೂಟದಲ್ಲಿ ಕಾರ್ಡಿನಲ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಮುಡಿಪುವಿನ ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಲು ಕಾರ್ಡಿನಲ್ ನಗರಕ್ಕೆ ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಕೊಂಕಣಿ ಕ್ಯಾಥೊಲಿಕ್ ಲಾಯರ್ಸ್ ಗಿಲ್ಡ್ (KCLG), ಮಂಗಳೂರು ಧರ್ಮಕ್ಷೇತ್ರ ಮತ್ತು ಧರ್ಮಕ್ಷೇತ್ರದ ಶ್ರೀ ಸಾಮಾನ್ಯರ ಆಯೋಗ (Diocesan Commission for Lay Faithful) ಜಂಟಿಯಾಗಿ ಆಯೋಜಿಸಿದ್ದವು.

ಕಾರ್ಡಿನಲ್ ದಿಕ್ಸೂಚಿ ಪ್ರವಾದಿಯ ನಾಯಕತ್ವಕ್ಕೆ ಕರೆ

ತಮ್ಮ ದಿಕ್ಸೂಚಿ ಭಾಷಣದಲ್ಲಿ, ಕ್ರೈಸ್ತ ಸಾಕ್ಷಿಯು ಪ್ರಾಥಮಿಕವಾಗಿ ಒಬ್ಬರ ಜೀವನದ ಮೂಲಕ ಯೇಸುವನ್ನು ಪ್ರಸ್ತುತಪಡಿಸುವುದಾಗಿದೆ ಎಂದು ಕಾರ್ಡಿನಲ್ ಫೆರಾವೊ ಒತ್ತಿ ಹೇಳಿದರು. ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಉಲ್ಲೇಖಿಸಿದ ಅವರು, “ಪರಸ್ಪರ ಭೇಟಿಯ ಸಂಸ್ಕೃತಿ”ಯ (culture of encounter) ಅಗತ್ಯವನ್ನು ಎತ್ತಿ ಹಿಡಿದರು ಮತ್ತು ಸಮುದಾಯವು ಶಾಂತಿಯನ್ನು ಉತ್ತೇಜಿಸಲು ಹಾಗೂ ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.

“ನಾವು ಶಾಂತಿಯ ಶಿಲ್ಪಿಗಳಾಗಲು ಕರೆದಿಸಲ್ಪಟ್ಟಿದ್ದೇವೆ,” ಎಂದು ಕಾರ್ಡಿನಲ್ ಹೇಳಿದರು. ಕ್ರೈಸ್ತ ಸಂವಹನದಲ್ಲಿ ಸಂವಾದವು ಕೇಂದ್ರವಾಗಿದೆ ಎಂದು ಒತ್ತಿ ಹೇಳಿದ ಅವರು, ವಿಶ್ವಾಸಿಗಳು ಧಾರ್ಮಿಕ ವಲಯಗಳನ್ನು ಮೀರಿ ಸ್ನೇಹವನ್ನು ಬೆಳೆಸಿಕೊಳ್ಳಲು ಮತ್ತು ಸಮುದಾಯ ಉಪಕ್ರಮಗಳಲ್ಲಿ ಕೈಜೋಡಿಸಲು ಪ್ರೋತ್ಸಾಹಿಸಿದರು.

ವಕೀಲರು, ಉದ್ಯಮಿಗಳು, ವೃತ್ತಿಪರರು ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವವರು ತಮ್ಮ ಕೆಲಸದ ಸ್ಥಳಗಳಲ್ಲಿ “ಪ್ರವಾದಿಯ ನಾಯಕತ್ವ”ವನ್ನು ಚಲಾಯಿಸುವ ಜವಾಬ್ದಾರಿಯನ್ನು ಅವರು ವಿವರಿಸಿದರು.

“ಅನ್ಯಾಯದ ಮುಂದೆ ಮೌನವಾಗಿರುವುದನ್ನು ನಾವು ನಿರಾಕರಿಸಬೇಕು ಮತ್ತು ಅಂಚಿನಲ್ಲಿರುವ ಹಾಗೂ ಧ್ವನಿ ಇಲ್ಲದವರ ಪರವಾಗಿ ನಿಲ್ಲಬೇಕು. ನಮ್ಮ ನಿಲುವು ಆಕ್ರಮಣಕಾರಿಯಾಗಿರದೆ, ದೃಢ ಮತ್ತು ಕರುಣೆಯಿಂದ ಕೂಡಿರಬೇಕು,” ಎಂದು ಹೇಳಿದ ಅವರು, ದ್ವೇಷದ ನಡುವೆಯೂ “ಅಂತರಗಳನ್ನು ಸೃಷ್ಟಿಸದೆ ಸೇತುವೆಗಳನ್ನು ನಿರ್ಮಿಸುವಂತೆ” ಕರೆ ನೀಡಿದರು.

ಡಾ. ಪ್ರವೀಣ್ ಮಾರ್ಟಿಸ್ ಪ್ರತಿ-ನಿರೂಪಣೆಗಳ (Counter-Narratives) ನಿರ್ಮಾಣ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಕುಲಪತಿ ಮತ್ತು ಭಾರತದ ಕ್ಷೇವಿಯರ್ ಬೋರ್ಡ್ ಆಫ್ ಹೈಯರ್ ಎಜುಕೇಶನ್ (XBHEI) ಅಧ್ಯಕ್ಷರಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ಮಾತನಾಡಿ, ಮಂಗಳೂರಿನ ಪ್ರಸ್ತುತ ಸನ್ನಿವೇಶದಲ್ಲಿ ಈ ವಿಷಯದ ಮಹತ್ವವನ್ನು ವಿವರಿಸಿದರು.

ಮಂಗಳೂರಿನ ಜನಸಂಖ್ಯಾಶಾಸ್ತ್ರೀಯ ಬದಲಾವಣೆಗಳನ್ನು ಉಲ್ಲೇಖಿಸಿದ ಅವರು, ದೈವಕರೆಗಳು (vocations) ಮತ್ತು ವಿವಾಹಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದೇ ಸಮಯದಲ್ಲಿ ಏಕ-ಮಗು ಕುಟುಂಬಗಳು ಹೆಚ್ಚುತ್ತಿದ್ದು, ಯುವಜನರಲ್ಲಿ ಮಹತ್ವಾಕಾಂಕ್ಷೆ ಮತ್ತು ಮೇಲ್ಮುಖ ಚಲನೆ (upward mobility) ಹೆಚ್ಚುತ್ತಿದೆ ಎಂದು ಅವರು ಗಮನ ಸೆಳೆದರು.

“ಈ ಸನ್ನಿವೇಶದಲ್ಲಿ, ವಿಶೇಷವಾಗಿ ತಪ್ಪು ನಿರೂಪಣೆಗಳು ಮತ್ತು ಅನಿಶ್ಚಿತತೆಗಳ ನಡುವೆ, ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಯಬೇಕು,” ಎಂದು ಡಾ. ಮಾರ್ಟಿಸ್ ಹೇಳಿದರು. ವಿಶ್ವಾಸಿಗಳು ತಮ್ಮ “ಕಂಫರ್ಟ್ ಜೋನ್” ನಿಂದ ಹೊರಬಂದು, ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಕ್ರಾಂತಿಗಳಿಗೆ ಹೊಂದಿಕೊಳ್ಳುತ್ತಾ, ಸಂವಾದ ಮತ್ತು ಮನಸ್ಥಿತಿಯ ಬದಲಾವಣೆಯ ಮೂಲಕ “ಪ್ರತಿ-ನಿರೂಪಣೆಗಳನ್ನು” (counter-narratives) ನಿರ್ಮಿಸಲು ಅವರು ಕರೆ ನೀಡಿದರು. ಭಾರತದ ಎಲ್ಲಾ ಕಥೊಲಿಕ್ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ, ಸಮುದಾಯವು ಪ್ರಸ್ತುತ ಸಮಯದಲ್ಲಿ ಪ್ರಬಲ ಮತ್ತು ಒಗ್ಗಟ್ಟಿನ ಸಾಕ್ಷಿಯನ್ನು ನೀಡಬಹುದು ಎಂದು ಅವರು ಪ್ರತಿಪಾದಿಸಿದರು.

ಸಂವಾದ ಗೋಷ್ಠಿ :

ಭಾಷಣಗಳ ನಂತರ, ಮುಕ್ತ ಚರ್ಚೆ ಮತ್ತು ಸಂವಾದಕ್ಕೆ ಅವಕಾಶ ನೀಡಲಾಯಿತು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಾಜಿ ಕುಲಸಚಿವ ಡಾ. ಆಲ್ವಿನ್ ಡಿಸೋಜ ಅವರು ಈ ಗೋಷ್ಠಿಯನ್ನು ನಡೆಸಿಕೊಟ್ಟರು.

ಖಂಡಿಸಿ ಮತ್ತು ಘೋಷಿಸಿ (Denounce and Announce) – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ವಿಶ್ವಾಸಿಗಳ ದ್ವಂದ್ವ ಜವಾಬ್ದಾರಿಯ ಬಗ್ಗೆ ಉತ್ತೇಜಕ ಸಂದೇಶ ನೀಡಿದರು. “ನಾವು ಬರಹ ಮತ್ತು ಮಾಧ್ಯಮಗಳ ಮೂಲಕ ಸುಳ್ಳು ನಿರೂಪಣೆಗಳು, ಅಪರಾಧಗಳು ಮತ್ತು ಅನ್ಯಾಯಗಳನ್ನು ಪ್ರವಾದಿಯ ರೀತಿಯಲ್ಲಿ ‘ಖಂಡಿಸಬೇಕು’ (Denounce). ಅದೇ ಸಮಯದಲ್ಲಿ, ಯೇಸು ಎಲ್ಲರ ಹೃದಯದಲ್ಲಿದ್ದಾರೆ ಮತ್ತು ಕ್ರೈಸ್ತ ಮೌಲ್ಯಗಳು ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿವೆ ಎಂಬ ಶುಭ ಸುದ್ದಿಯನ್ನು ನಾವು ‘ಘೋಷಿಸಬೇಕು’ (Announce),” ಎಂದು ಬಿಷಪ್ ಸಲ್ಡಾನಾ ಪ್ರತಿಪಾದಿಸಿದರು.

ಗಣ್ಯರು ಮತ್ತು ನಿರ್ವಹಣೆ :

ಈ ಸಂದರ್ಭದಲ್ಲಿ ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಧರ್ಮಕ್ಷೇತ್ರದ ಕ್ರೈಸ್ತ ವಿಶ್ವಾಸಿಗಳ ಆಯೋಗದ ಕಾರ್ಯದರ್ಶಿ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ ಮತ್ತು ಪ್ರಧಾನ ಜಿಲ್ಲಾ ಸರ್ಕಾರಿ ವಕೀಲರಾದ ಎಂ.ಪಿ. ನೊರೊನ್ಹಾ, ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ಕಾರ್ಯದರ್ಶಿ ಡಾ. ಜಾನ್ ಡಿಸಿಲ್ವಾ, ಧರ್ಮಕ್ಷೇತ್ರದ PRO ರೋಯ್ ಕ್ಯಾಸ್ಟಲಿನೊ, ವಿವಿಧ ಧಾರ್ಮಿಕ ಪ್ರಾಂತ್ಯಗಳ ಧರ್ಮಭಗಿನಿಯರು, ಧರ್ಮಗುರುಗಳು, ಮತ್ತು ಗಿಲ್ಡ್ ಸದಸ್ಯರು ಈ ಸಂದಭದಲ್ಲಿ ಉಪಸ್ಥಿತರಿದ್ದರು.

ಕೊಂಕಣಿ ಕ್ಯಾಥೊಲಿಕ್ ಲಾಯರ್ಸ್ ಗಿಲ್ಡ್ ಅಧ್ಯಕ್ಷರಾದ ಅಡ್ವೊಕೇಟ್ ಸುಶಾಂತ್ ಸಿ.ಎ. ಸಲ್ಡಾನಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಿಸ್ಟರ್ ರೆನ್ಸಿ ಎಸ್.ಆರ್.ಎ. ನಿರೂಪಿಸಿದರು. ಕೆಸಿಎಲ್‌ಜಿ ಕಾರ್ಯದರ್ಶಿ ವಕೀಲೆ ಲೊಲಿನಾ ಡಿಸೋಜ ಪಾನೀರ್ ಅವರು ವಂದನಾರ್ಪಣೆಗೈದರು.

You may also like

News

ಸೂರಿಕುಮೇರುವಿನ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಬ್ರಷ್ಟಾಚಾರದ ಆರೋಪ ಸಂಪೂರ್ಣ ಸುಳ್ಳು – ಹಿಂದಿನ ಆಡಳಿತ ಮಂಡಳಿಯ ಖಡಕ್ ಸ್ಪಷ್ಟನೆ

ಬ್ರಷ್ಟಾಚಾರ ನಡೆದಿದ್ದರೆ ಧರ್ಮಾಧ್ಯಕ್ಷರ ಮೌನ ಹೇಗೆ ಸಾಧ್ಯ? – ಅಪಪ್ರಚಾರಕರಿಗೆ ಭಕ್ತಾಧಿಗಳ ನೇರ ಸವಾಲು ನಿಷ್ಟಾವಂತ ಸೇವೆ ನೀಡಿದ ಹಿಂದಿನ ಧರ್ಮಗುರುಗಳ ಹೆಸರುಗಳಿಗೆ ಮಸಿ ಬಳಿಸಲು ಷಡ್ಯಂತ್ರ
News

ತುಳುಕೂಟ ಥೈಲ್ಯಾಂಡ್ ಸಹಕಾರದಿಂದ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರ ಸಂಪೂರ್ಣ ಪುನರ್‌ನವೀಕರಣ – ಹಸ್ತಾಂತರ ಹಾಗೂ ಸೇವಾ ಕಾರ್ಯಕ್ರಮಗಳು ಯಶಸ್ವಿ

ಅಧ್ಯಕ್ಷ ವಿನಯ್ ರೈ ಅವರ ಕಾರ್ಯ ವೈಖರಿಗೆ ವ್ಯಾಪಕ ಮೆಚ್ಚುಗೆ ಬಟ್ಟಾರಬೆಟ್ಟು–ಅಳಪೆ–ಪಡೀಲ್‌ನ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರವು ತುಳುಕೂಟ ಥೈಲ್ಯಾಂಡ್‌ನ ಅಮೂಲ್ಯ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನವೀಕರಣಗೊಂಡಿದ್ದು, ಇದರ ಹಸ್ತಾಂತರ

You cannot copy content of this page